ಆರೋಪಗಳೆಲ್ಲಾ ಸುಳ್ಳು ಅಂದ ಚಂದದ ನಟ ಚಂದನ್
''ನಾನು ಕಿಚ್ಚ ಸುದೀಪ್, ದರ್ಶನ್ ಮತ್ತು ಯಶ್ ಗೆ ದೊಡ್ಡ ಫ್ಯಾನ್'' - ಹೀಗಂತ ನಟ ಚಂದನ್ ಸಾರಿ ಸಾರಿ ಹೇಳುತ್ತಿದ್ದಾರೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ಚಂದನ್ ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ''ಸುದೀಪ್, ದರ್ಶನ್ ಮತ್ತು ಯಶ್, ನನ್ನ ಮುಂದೆ ಏನೇನೂ ಇಲ್ಲ. ಅವರೆಲ್ಲಾ ನನ್ನಷ್ಟು ಚೆನ್ನಾಗಿದ್ದಾರಾ?'' ಅಂತ ನಿರ್ಮಾಪಕರೊಬ್ಬರಿಗೆ ಪ್ರಶ್ನೆ ಹಾಕಿದ್ದರಂತೆ.

ಸಾಲದಕ್ಕೆ ಸಂಭಾವನೆ ವಿಷಯದಲ್ಲಿ ಕಟ್ಟುನಿಟ್ಟಾಗಿರುವ ಚಂದನ್, ''ಪ್ರತಿ ದಿನ ಒಬ್ಬರಲ್ಲ ಒಬ್ರು ನನ್ನ ಕಾಲ್ ಶೀಟ್ ಕೇಳ್ತಾರೆ. ಆದ್ರೆ, ನಾನು ಕೇಳಿದಷ್ಟು ಸಂಭಾವನೆ ಕೊಡುವುದಕ್ಕೆ ಒಪ್ಪಿಕೊಳ್ಳೋದಿಲ್ಲ. ನಾನು ಕೂಡ ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ಅನ್ನೋದನ್ನ ಮರೆಯಬೇಡಿ'' ಅಂತ ನಿರ್ಮಾಪಕರೊಬ್ಬರಿಗೆ ಬಿಸಿ ಮುಟ್ಟಿಸಿದ್ದರಂತೆ. [ಈಟಿವಿ ಡ್ಯಾನ್ಸಿಂಗ್ ಸ್ಟಾರ್ ನಿಂದ ಚಂದನ್ ಔಟ್]
ಈ ಅಂತೆ ಕಂತೆಯ ಸುದ್ದಿ ಗಾಂಧಿನಗರದಲ್ಲಿ ಸಿಡಿದಿದೆ. ಇದು ಎಷ್ಟು ನಿಜ ಅಂತ ತಿಳಿದುಕೊಳ್ಳುವುದಕ್ಕೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಟ ಚಂದನ್ ರನ್ನ ಸಂಪರ್ಕಿಸಿತು. ಆಗ ಚಂದನ್ ಕೊಟ್ಟ ಪ್ರತಿಕ್ರಿಯೆ -

''ಇದು ಶುದ್ಧ ಸುಳ್ಳು ಸುದ್ದಿ. ಯಾರಾದರೂ ಹಾಗೆ ಹೇಳೋಕಾಗುತ್ತಾ? ನಾನೇ ಸುದೀಪ್, ದರ್ಶನ್ ಮತ್ತು ಯಶ್ ಗೆ ಬಿಗ್ ಫ್ಯಾನ್. ದರ್ಶನ್ ಸರ್ ನಮ್ ಏರಿಯಾದಲ್ಲೇ ಇರೋದು. ಅವರ ಬರ್ತಡೆಗೆ ವಿಶ್ ಮಾಡೋಕ್ಕೆಲ್ಲಾ ಹೋಗ್ತಿದ್ದೆ.''
''ಯಾರು ಹೀಗೆ ಹೇಳಿದ್ದಾರೆ. ಯಾಕೆ ಈ ತರಹ ಸುದ್ದಿ ಆಯ್ತು ಅಂತ ನಂಗೆ ಗೊತ್ತಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರು ನನ್ನ ಸಂಪರ್ಕ ಮಾಡಿದಾಗ, ನಾನು ನೀಟಾಗಿ ಕಥೆ ಕೇಳಿದ್ದೇನೆ. ನಿಜ ಹೇಳ್ಬೇಕಂದ್ರೆ, ಜುಲೈವರೆಗೂ ನಂಗೆ 'ಲವ್ ಯೂ ಆಲಿಯ' ಚಿತ್ರದ ಅಗ್ರೀಮೆಂಟ್ ಇದೆ. ಅಲ್ಲಿವರೆಗೂ ನಾನು ಬೇರೆ ಚಿತ್ರಗಳನ್ನ ಒಪ್ಪಿಕೊಳ್ಳೋಕೆ ಆಗಲ್ಲ.''

''ಲವ್ ಯು ಆಲಿಯ' ಚಿತ್ರ ಮುಗಿದ ಬಳಿಕ ನಾನು ಬೇರೆ ಸಿನಿಮಾ ಮಾಡಬಹುದು. ಇದೇ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಸುದೀಪ್ ಮತ್ತು ರವಿಚಂದ್ರನ್ ಜೊತೆ ನಟಿಸುವಾಗ ನನಗೆ ಭಯ ಆಗೋದು. ಅಂಥದ್ರಲ್ಲಿ ನಾನು ಹೀಗೆಲ್ಲಾ ಹೇಳೋಕೆ ಸಾಧ್ಯನಾ?'' ಅಂತ ಚಂದನ್ ಹೇಳಿದರು. [ಎರಡೊಂದ್ಲಾ ಮೂರು ವಿಮರ್ಶೆ:ಎಡವಿದ ನಿರ್ದೇಶಕ, ಮಲಗಿದ ಪ್ರೇಕ್ಷಕ ]
ಅಲ್ಲಿಗೆ ತಮ್ಮ ಮೇಲೆ ಹೊತ್ತಿಕೊಂಡಿರುವ ಗಾಸಿಪ್ ಗೆ ಖುದ್ದು ಚಂದನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಲ್ಲದೇ ಸ್ಟಾರ್ ಹೀರೋಗಳನ್ನ ರೋಲ್ ಮಾಡೆಲ್ ಮಾಡಿಕೊಂಡು ಹೊಸ ಹೊಸ ಕನಸು ಕಾಣುತ್ತಿದ್ದಾರೆ. ಅದಕ್ಕೆ ನೀರೆರೆಯಬೇಕಾದವರು ಗಾಂಧಿನಗರದ ನಿರ್ಮಾಪಕರು ಮತ್ತು ನಿರ್ದೇಶಕರುಗಳು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











