SSLC ಪರೀಕ್ಷೆಯಲ್ಲಿ ಧನಂಜಯ ಪಡೆದಿದ್ದ ಅಂಕ ಎಷ್ಟು? ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಟಾಪರ್ ಡಾಲಿ ಫೋಟೊ!
ಡಾಲಿ ಧನಂಜಯ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. 'ಹೆಡ್ಬುಷ್' ಸಿನಿಮಾ ವಿವಾದ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರರಂಗದಲ್ಲಿ ಕೆಲವರು ಧನಂಜಯನ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂತು. ಸಾಕಷ್ಟು ಜನ ಧನುಗೆ ಬೆಂಬಲವಾಗಿ ನಿಂತಿದ್ದರು. ಧನಂಜಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ಅವರ ಫೋಟೊ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದೀಗ ಆ ಫೋಟೊ ವೈರಲ್ ಆಗ್ತಿದೆ.
ಧನಂಜಯ ಆಲೋಚನಾ ಲಹರಿಯೇ ಬೇರೆ. ಪ್ರಭುದ್ಧತೆಯಿಂದ ಕೂಡಿದ ನಟ, ಬಹಳ ಓದಿಕೊಂಡಿದ್ದಾರೆ. ಶಾಲಾ ದಿನಗಳಲ್ಲೇ ಅವರು ಟಾಪರ್ ಆಗಿದ್ದರು. 'ಮೊದಲು ಮಾನವನಾಗು' ಎನ್ನುವ ಕುವೆಂಪು ಅವರ ಮಾತನ್ನು ಅನುಸರಿಸುತ್ತಿದ್ದಾರೆ. ಓದಿದ್ದು ಇಂಜಿನಿಯರ್ ಆದರೂ, ಡಾಲಿಗೆ ಮೊದಲಿನಿಂದ ಸಿನಿಮಾದಲ್ಲಿ ನಟಿಸುವ ಹುಚ್ಚು. ಇದೇ ಕಾರಣಕ್ಕೆ ಸಿಕ್ಕ ಕೆಲಸ ಬಿಟ್ಟು ಬಣ್ಣದಲೋಕದತ್ತ ಕಾಲಿಟ್ಟರು. ಆರಂಭದಲ್ಲಿ ಸಾಲು ಸಾಲು ಸೋಲುಗಳನ್ನು ಕಂಡ ಧನುಗೆ ಕೊನೆಗೆ ಕೈ ಹಿಡಿದಿದ್ದು ಸೂರಿ ನಿರ್ದೇಶನದ 'ಟಗರು' ಸಿನಿಮಾ. 'ಟಗರು' ಶಿವನ ಎದುರು ಡಾಲಿಯಾಗಿ ಅಬ್ಬರಿಸಿದ ಧನಂಜಯ ಸೂಪರ್ ಸಕ್ಸಸ್ ಕಂಡಿದ್ದರು.
ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಧನಂಜಯ ಸೇಂಟ್ ಮೇರಿಸ್ ಹೈಸ್ಕೂಲ್ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದರು. 2001ನೇ ಇಸವಿಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಇಡೀ ಅರಸೀಕೆರೆಗೆ ಅತಿಹೆಚ್ಚು ಅಂಕ ಪಡೆದಿದ್ದರು.

ಶೇ. 95.52 ಅಂಕ ಪಡೆದಿದ್ದ ಧನು
ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಭವಿಷ್ಯ ರೂಪಿಸುವ ನಿರ್ಣಾಯಕ ಹಂತ. 10ನೇ ತರಗತಿಯಲ್ಲಿ ಪಡೆಯುವ ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಕವಾಗುತ್ತದೆ. ಧನಂಜಯ 7ನೇ ತರಗತಿ, ಎಸ್ಎಸ್ಎಲ್ಸಿ, ಸೆಕೆಂಡ್ ಪಿಯುಸಿ, ಇಂಜಿನಿಯರಿಂಗ್ ಎಲ್ಲದರಲ್ಲೂ ಒಳ್ಳೆ ಅಂಕ ಗಳಿಸಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 95.52 ಅಂಕ ಪಡೆದಿದ್ದರು. ಅರಸೀಕರೆ ತಾಲೂಕಿನಲ್ಲಿ ಆ ವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಎನಿಸಿಕೊಂಡಿದ್ದರು. ಅವರ ಫೋಟೊ ಕೂಡ ಪೇಪರ್ನಲ್ಲಿ ಪ್ರಕಟವಾಗಿತ್ತು.

ಇಂಜಿನಿಯರ್ನಿಂದ ಓದಿಕೊಂಡಿರುವ ಡಾಲಿ
ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಧನಂಜಯ ಕೆಲ ದಿನ ಇನ್ಪೋಸಿಸ್ನಲ್ಲಿ ಕೆಲಸ ಮಾಡಿದ್ದರು. ನಂತರ ಕೆಲಸ ಬಿಟ್ಟು ರಂಗಭೂಮಿಯತ್ತ ಮುಖ ಮಾಡಿದ್ದರು. ಬೆಂಗಳೂರಿಗೆ ಬಂದ ಆರಂಭದಲ್ಲಿ 'ಜಯನಗರ 4th ಬ್ಲಾಕ್' ಎನ್ನುವ ಶಾರ್ಟ್ಫಿಲ್ಮ್ನಲ್ಲಿ ನಟಿಸಿದ್ದರು. ನಂತರ ಗುರುಪ್ರಸಾದ್ ನಿರ್ದೇಶನದ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.

'ಹೆಡ್ಬುಷ್' ಚಿತ್ರದಲ್ಲಿ ಧನು ಆರ್ಭಟ
ಡಾಲಿ ಧನಂಜಯ ನಿರ್ಮಿಸಿ ನಟಿಸಿರುವ 'ಹೆಡ್ಬುಷ್' ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಬೆಂಗಳೂರು ಭೂಗತಲೋಕದ ಕಥೆಯನ್ನು ಹೇಳಲಾಗಿದ್ದು, ಡಾನ್ ಜಯರಾಜ್ ಪಾತ್ರದಲ್ಲಿ ಧನು ಅಬ್ಬರಿಸಿದ್ದಾರೆ. 'ಬಡವ ರಾಸ್ಕಲ್' ಸಿನಿಮಾ ಮೂಲಕ ಡಾಲಿ ನಿರ್ಮಾಪಕರು ಆಗಿದ್ದರು. ತಮ್ಮ ಬ್ಯಾನರ್ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ಮಾಡುತ್ತಿದ್ದಾರೆ. ಶೂನ್ಯ ನಿರ್ದೇಶನದ ಈ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಧನು ನಟನೆ
ಈಗಾಗಲೇ ಧನು ಒಂದು ತಮಿಳು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. 'ಜಮಾಲಿಗುಡ್ಡ' ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. 'ಹೊಯ್ಸಳ' ಹಾಗೂ 'ಪುಷ್ಪ'-2 ಸಿನಿಮಾ ಚಿತ್ರೀಕರಣದಲ್ಲಿ ಡಾಲಿ ಬ್ಯುಸಿಯಾಗಿದ್ದಾರೆ. 'ಟಗರು ಪಲ್ಯ' ಎನ್ನುವ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುವ ಲೆಕ್ಕಾಚಾರದಲ್ಲಿದ್ದಾರೆ.


Click it and Unblock the Notifications











