'ಪ್ರಚಂಡ ಕುಳ್ಳನಿಗೆ' ಹ್ಯಾಪಿ ಬರ್ತ್ ಡೇ ಹೇಳಿ
ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಪ್ರಚಂಡ ಕುಳ್ಳ' ಎಂದೇ ಫೇಮಸ್ ಆಗಿರುವ ದ್ವಾರಕೀಶ್ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದವರು ಅಂದ್ರೂ ತಪ್ಪಾಗ್ಲಿಕ್ಕಿಲ್ಲ.
ಚಿತ್ರರಂಗ ಕ್ಷೇತ್ರದಲ್ಲಿ 'ಕುಳ್ಳ' ದ್ವಾರಕೀಶ್ ಅವರು ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಮಿಂಚಿದ್ದಾರೆ. ಇಂತಿಪ್ಪ ಅದ್ಭುತ ಪ್ರತಿಭೆಗೆ ಇಂದು ಹುಟ್ಟು ಹಬ್ಬದ ಸಂಭ್ರಮ, ಸಡಗರ.
ಹೆಚ್ಚಾಗಿ ಹಾಸ್ಯ ಪಾತ್ರಗಳಿಂದಲೇ ಖ್ಯಾತಿಯಾಗಿರುವ ನಟ-ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ಅವರು ಇಂದು 73 ನೇ ವಸಂತಕ್ಕೆ ಕಾಲಿರಿಸುತ್ತಿದ್ದಾರೆ.
1942 ಆಗಸ್ಟ್ 19 ರಂದು ಮೈಸೂರು ಜಿಲ್ಲೆಯ ಹುಣಸೂರು ಸಮೀಪ ನಲ್ಲಿ ಜನಿಸಿದರು. ಬಂಗ್ಲೆ ಶ್ಯಾಮರಾವ್ ದ್ವಾರಕನಾಥ್ ಇವರ ಹುಟ್ಟು ಹೆಸರು. ಇವರ ತಂದೆ ಬಂಗ್ಲೆ ಶ್ಯಾಮರಾವ್, ತಾಯಿ ಜಯಮ್ಮ.
ಶಾರದಾ ವಿಲಾಸ್ ಹಾಗು ಭಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ದ್ವಾರಕೀಶ್ ಪದವಿ ಶಿಕ್ಷಣವನ್ನು ಸಿಪಿಸಿ ಪಾಲಿಟೆಕ್ನಿಕ್ ಜೊತೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮೋ ಮುಗಿಸಿದ್ದಾರೆ.
ದ್ವಾರಕೀಶ್ ಅವರು ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸಿ 'ಸತ್ಯ ಹರಿಶ್ಚಂದ್ರ ಚಿತ್ರದ ಮೂಲಕ 1965 ರಲ್ಲಿ ಬಣ್ಣ ಹಚ್ಚಿದರು. ತದನಂತರ 'ಮೇಯರ್ ಮುತ್ತಣ್ಣ', 'ಕುಳ್ಳ ಏಜೆಂಟ್ ೦೦೦', 'ಕಳ್ಳ 'ಕುಳ್ಳ', 'ಭಕ್ತ ಕುಂಬಾರ', 'ಆಟೋರಾಜ', 'ಪೆದ್ದ ಗೆದ್ದ', 'ಆಫ್ರಿಕಾದಲ್ಲಿ ಶೀಲಾ', 'ರಸಿಕ', 'ಆಪ್ತಮಿತ್ರ', 'ವಿಷ್ಣುವರ್ಧನ', ಮುಂತಾದ ಚಿತ್ರಗಳಲ್ಲಿ ನಡೆಸಿದ್ದಾರೆ.
1966ರಲ್ಲಿ 'ಮಮತೆಯ ಬಂಧನ', 'ಮೇಯರ್ ಮುತ್ತಣ್ಣ', ಮೂಲಕ ನಿರ್ಮಾಪಕರಾದರು. 'ನೀ ಬರೆದ ಕಾದಂಬರಿ' ಚಿತ್ರದ ಮೂಲಕ 1985ರಲ್ಲಿ ನಿರ್ದೇಶಕರಾಗಿ ಕೆಲಸ ಪ್ರಾರಂಭಿಸಿದ ದ್ವಾರಕೀಶ್ 'ನೀ ತಂದ ಕಾಣಿಕೆ', 'ರಾಯರು ಬಂದರು ಮಾವನ ಮನೆಗೆ', 'ರಸಿಕ', 'ಆಪ್ತಮಿತ್ರ', 'ವಿಷ್ಣುವರ್ಧನ', 'ಚಾರುಲತಾ' ಸೇರಿದಂತೆ ಹಲವಾರು ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದಾರೆ.
ಇದೀಗ ತಮ್ಮ 'ದ್ವಾರಕಾ' ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 49 ನೇ ಚಿತ್ರ 'ಆಟಗಾರ' ಇದೇ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಾಣುತ್ತಿದೆ. ಅದೇನೇ ಇರಲಿ ಚಿತ್ರರಂಗದಲ್ಲಿ ಸತತವಾಗಿ ಸಾಧಿಸಿಕೊಂಡು ಬರುತ್ತಿರುವ 'ಕುಳ್ಳ' ದ್ವಾರಕೀಶ್ ಅವರು ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಎನ್ನುವ ಹಾರೈಕೆಯೊಂದಿಗೆ ದ್ವಾರಕೀಶ್ ಅವರಿಗೆ ಹ್ಯಾಪಿ ಬರ್ತ್ ಡೇ ಹೇಳೋಣ.


Click it and Unblock the Notifications













