'1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು'- ಜಗ್ಗೇಶ್ ಮಾತಿನ ಅರ್ಥ ಏನು?
ಕನ್ನಡ ಚಿತ್ರರಂಗದ ಇಬ್ಬರು ನಿರ್ಮಾಪಕರ ಗಲಾಟೆ ಈಗ ಬೀದಿಗೆ ಬಿದ್ದಿದೆ. ಹಣಕಾಸಿನ ವಿಚಾರವಾಗಿ ದ್ವಾರಕೀಶ್ ಹಾಗೂ ಜಯಣ್ಣ ನಡುವೆ ಬಿರುಕು ಮೂಡಿದೆ. ಮನೆಗೆ ಬಂದು ದಾಂದಲೆ ಮಾಡಿದ್ದಾರೆ ಎಂದು ಯೋಗೇಶ್ ದ್ವಾರಕೀಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಈ ಘಟನೆಯ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದ್ವಾರಕೀಶ್ ಹಾಗೂ ಜಯಣ್ಣ ಗಲಾಟೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದ ಹಣಕಾಸಿನ ವ್ಯವಹಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಕೊಟ್ಟವ ಕೋಡಂಗಿ.. ಇಸ್ಕೊಂಡವ ಈರಭದ್ರ.. ಎಂದಿರುವ ಅವರು ಗಾಂಧಿನಗರದ ಮುಖವಾಡದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಚಿತ್ರರಂಗದಲ್ಲಿ ತಮಗೂ ಆಗಿರುವ ಮೋಸದ ಬಗ್ಗೆ ತಿಳಿಸಿದ್ದಾರೆ.

ನಾನು ತಾಳ್ಮೆಯಿಂದ ಕಾಯುತ್ತಿರುವ ಮೂರ್ಖ
''ಕೊಟ್ಟವ ಸ್ನೇಹಿತ, ಬಳಸಿಕೊಂಡವರು ಸ್ನೇಹಿತರು. ಇದು ಹಣದ ವಿಷಯ ಮಾತಾಡುವುದು ಕಷ್ಟ. ನನಗೆ ಬರಬೇಕಾದ್ದ 1 ಕೋಟಿ ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು. ಹಣ ಬೇಕಾದಾಗ ಪ್ರಾಮಾಣಿಕ ವ್ಯವಹಾರಸ್ಥರು. ವಾಪಸ್ ಕೊಡುವಾಗ ಮಾಧ್ಯಮ, ಪೋಲಿಸ್, ಮಾನಹಾನಿ ಎಂಥ ದೌರ್ಭಾಗ್ಯ ವ್ಯವಹಾರ. ಬರುವ ಹಣಕ್ಕಾಗಿ ನಾನು ತಾಳ್ಮೆಯಿಂದ ಕಾಯುತ್ತಿರುವ ಮೂರ್ಖ.'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕೊಟ್ಟವ ಕೋಡಂಗಿ.. ಇಸ್ಕೊಂಡವ ಈರಭಧ್ರ
''ರಮೇಶ್ ಹಾಗು ಜಯಣ್ಣ ಗೌರವಸ್ಥ ವ್ಯವಹಾರಿಗಳು! ಕೊಟ್ಟವ ಕೋಡಂಗಿ.. ಇಸ್ಕೊಂಡವ ಈರಭಧ್ರ. ಇದು ಗಾಂಧಿನಗರ. Even I am fedup with gandhinagar business. ಗಾಂಧಿನಗರ ಬಿಲ್ಡ್ ಅಪ್ ರಾತ್ರಿ ನೆನೆದರು ನಿದ್ರೆ ಬಾರದು ನನಗೆ. ಎಲ್ಲರೂ ಸ್ಟಾರ್ಸ್ ಇನ್ ಮೀಡಿಯಾ, ಪ್ರೊಡ್ಯೂಸರ್ ಮಾತ್ರ ಫುಟ್ ಪಾತ್. ನಿಜ ಗಾಂಧಿನಗರ ದುನಿಯಾ. ನೇರನುಡಿ ನಿಷ್ಟೂರವಾದಿ ವ್ಯಾಖ್ಯಾನ'' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ಜಗ್ಗೇಶ್ ರಿಗೂ ಒಂದು ಕೋಟಿ ಬರಬೇಕು
ಜಯಣ್ಣ ಹಾಗೂ ದ್ವಾರಕೀಶ್ ಹಣಕಾಸಿನ ವ್ಯವಹಾರದ ಗಲಾಟೆ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ತಮಗೆ ಆದ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಹಣಕಾಸಿನ ವ್ಯವಹಾರದಲ್ಲಿ ಜಗ್ಗೇಶ್ ರಿಗೂ ಒಂದು ಕೋಟಿ ಹಣ ಬರಬೇಕಿದೆ. ಒಳ್ಳೆಯ ಮಾತು ಆಡಿ ಹಣ ತೆಗೆದುಕೊಂಡು ಹೋದವರು ವಾಪಸ್ ಹಣ ನೀಡುತ್ತಿಲ್ಲ ಎಂದು ಜಗ್ಗೇಶ್ ತಮ್ಮ ಮಾತಿನ ಮೂಲಕ ತಿಳಿಸಿದ್ದಾರೆ.

ಜಯಣ್ಣ, ದ್ವಾರಕೀಶ್ ಪ್ರತಿಕ್ರಿಯೆ
ತಮ್ಮ ಹಣಕಾಸಿನ ಗಲಾಟೆ ಬಗ್ಗೆ ಈಗಾಗಲೇ ಜಯಣ್ಣ ಹಾಗೂ ದ್ವಾರಕೀಶ್ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ''ಯೋಗೇಶ್ ದ್ವಾರಕೀಶ್ 5 ಕೋಟಿ ಹಣ ನೀಡಬೇಕು ಅದನ್ನು ಕೇಳಲು ದ್ವಾರಕೀಶ್ ಮನೆಗೆ ಹೋಗಿದ್ದು ನಿಜ ಆದರೆ, ಗಲಾಟೆ ಮಾಡಿಲ್ಲ'' ಎಂದು ಜಯಣ್ಣ ಹೇಳಿದ್ದಾರೆ. ''ನಾವು ಹಣ ನೀಡುತ್ತೇವೆ. ಆದರೆ ಸ್ವಲ್ಪ ಸಮಯ ಕೊಡಿ'' ಎಂದು ಯೋಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











