ನಟ ಮುಸುರಿ ಕೃಷ್ಣಮೂರ್ತಿ ವೆಬ್ ಸೈಟ್ ಲೋಕಾರ್ಪಣೆ
ಕನ್ನಡ ಚಿತ್ರಪ್ರೇಮಿಗಳಿಗೆ ಮುಸುರಿ ಕೃಷ್ಣಮೂರ್ತಿ ಅವರ ಬಗ್ಗೆ ಪರಿಚಯ ಅಗತ್ಯವಿಲ್ಲ. ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಅವರು. 'ಪಡುವಾರಳ್ಳಿ ಪಾಂಡವರು' ಚಿತ್ರದ ಕನೆಕ್ಷನ್ ಕಾಳಪ್ಪನ ಪಾತ್ರವನ್ನು ಯಾರೂ ಮರೆತಿರಲಿಕ್ಕೆ ಸಾಧ್ಯವಿಲ್ಲ.
ತಮ್ಮದೇ ಆದಂತಹ ವಿಶಿಷ್ಟ ಅಭಿನಯಕ್ಕೆ ಹೆಸರಾಗಿದ್ದರು ಮುಸುರಿ ಕೃಷ್ಣಮೂರ್ತಿ. ಇಂಥಹ ಮಹಾನ್ ಕಲಾವಿನ ಸ್ಮರಣಾರ್ಥ ಚಿತ್ರಲೋಕ ಡಾಟ್ ಕಾಮ್ ಇತ್ತೀಚೆಗೆ ವೆಬ್ ಸೈಟ್ ಲೋಕಾರ್ಪಣೆ ಮಾಡಿದೆ. ಈ ವೆಬ್ ಸೈಟ್ ನಲ್ಲಿ ಮುಸುರಿ ಕೃಷ್ಣಮೂರ್ತಿ ಅವರ ಕುರಿತು, ಅವರು ಅಭಿನಯಿಸಿದ ಚಿತ್ರಗಳು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳಿವೆ.

ಇಲ್ಲಿ ಅವರ ಅಪರೂಪದ ಫೋಟೋಗಳನ್ನೂ ವೀಕ್ಷಿಸಬಹುದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್ ಡಿ ಗಂಗರಾಜು, ಕಾರ್ಯದರ್ಶಿ ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಮಾಜಿ ಅಧ್ಯಕ್ಷ ಬಿ ವಿಜಯಕುಮಾರ್, ಎ ಗಣೇಶ್ ಮುಂತಾದವರು ವೆಬ್ ಸೈಟ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಸುರಿ ಪುತ್ರರಾದ ಗುರುದತ್ ಹಾಗೂ ಜಯಸಿಂಹ ಅವರು ಉಪಸ್ಥಿತರಿದ್ದರು. ಕನ್ನಡ ಚಿತ್ರರಂಗಕ್ಕೆ ಮುಸುರಿ ಅವರು ಸಲ್ಲಿಸಿದ ಅನನ್ಯ ಸೇವೆಯನ್ನು ಗಂಗರಾಜು ಸ್ಮರಿಸಿದರು. ಮುಸುರಿ ಜೊತೆಗಿನ ತಮ್ಮ ಒಡನಾಟವನ್ನು ಸಾ.ರಾ.ಗೋವಿಂದು ಮೆಲುಕು ಹಾಕಿದರು.
ಚಿತ್ರಲೋಕ ವೆಬ್ ಸೈಟ್ ಸಂಪಾದಕ ಕೆ.ಎಂ.ವೀರೇಶ್ ಮಾತನಾಡುತ್ತಾ, "ಮುಸುರಿ ಕೃಷ್ಣಮೂರ್ತಿ ಅವರಿಗೆ ಅಭಿಮಾನಿಗಳು, ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಗೌರವಗಳನ್ನು ಕೊಟ್ಟಿದ್ದಾರೆ. ಆದರೆ ಸರ್ಕಾರದ ಕಡೆಯಿಂದ ಅವರಿಗೆ ಯಾವುದೇ ಪ್ರಶಸ್ತಿ ಸಿಗದೇ ಇರುವುದು ಖೇದಕರ ಸಂಗತಿ" ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಹಿರಿಯ ಕಲಾವಿದರ ವೆಬ್ ಸೈಟ್ ಆರಂಭಿಸುವುದಾಗಿ ಅವರು ಹೇಳಿದ್ದಾರೆ.
ತಮ್ಮದೇ ಬಗೆಯ ವಿಶಿಷ್ಟ ಸಂಭಾಷಣೆಯಿಂದ ಹಾಸ್ಯಪಾತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪೋಷಿಸಿ ನಂತರ ಖಳನಟನ ಪಾತ್ರಗಳಲ್ಲಿಯೂ, ಪೋಷಕನಟನ ಪಾತ್ರಗಳಲ್ಲಿಯೂ ಸುಮಾರು 150 ಚಿತ್ರಗಳಲ್ಲಿ ಮುಸುರಿ ಕೃಷ್ಣಮೂರ್ತಿ ಅಭಿನಯಿಸಿದ್ದಾರೆ. ಪ್ರಣಯರಾಜ ಶ್ರೀನಾಥ್, ಜಯಮಾಲಾ ಅಭಿನಯಿಸಿರುವ ನಂಬರ್ ಐದು ಎಕ್ಕ (1981) ಚಿತ್ರವನ್ನು ನಿರ್ಮಿಸಿ ನಿರ್ಮಾಪಕರಾಗಿದ್ದಾರೆ.
ಪಡುವಾರಳ್ಳಿ ಪಾಂಡವರು, ಧರ್ಮಸೆರೆ, ಗುರು ಶಿಷ್ಯರು, ಬಂಧನ, ಹಾಲುಜೇನು, ಬೆಂಕಿಯ ಬಲೆ, ಮುಡುಡಿದ ತಾವರೆ ಅರಳಿತು, ಕರಿನಾಗ, ಬಂಗಾರದ ಜಿಂಕೆ, ಪೊಲೀಸ್ ಪಾಪಣ್ಣ, ಹುಲಿಯಾದ ಕಾಳ ಮುಂತಾದವು ಮುಸುರಿ ಕೃಷ್ಣಮೂರ್ತಿ ಅಭಿನಯದ ಕೆಲವು ಚಿತ್ರಗಳು. (ಒನ್ಇಂಡಿಯಾ ಕನ್ನಡ)


Click it and Unblock the Notifications











