ಹೃದಯಾಘಾತದಿಂದ ನಟ ರಘುವೀರ್ ವಿಧಿವಶ
'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ನಟ ರಘುವೀರ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಗುರುವಾರ (ಮೇ.8) ರಾತ್ರಿ ವಿಧಿವಶರಾಗಿದ್ದರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಕೆಲಕಾಲದಿಂದ ಅವರು ಆನಾರೋಗ್ಯದಿಂದ ಬಳಲುತ್ತಿದ್ದರು.
ಸಂಪಂಗಿರಾಮ ನಗರದ ತಮ್ಮ ನಿವಾಸದಲ್ಲಿ ಇದಕ್ಕಿದ್ದಂತೆ ಕುಸಿದುಬಿದ್ದ ಅವರನ್ನು ಕೂಡಲೆ ಬಿಟಿಎಂ ಲೇಔಟ್ ನ ಗಂಗೋತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅಲ್ಲಿಂದ ಅವರನ್ನು ಬನ್ನೇರುಘಟ್ಟದ ಸಾಗರ್ ಅಪಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾಗಿ ಖಚಿತಪಡಿಸಿದರು. [ಚೈತ್ರದ ಪ್ರೇಮಾಂಜಲಿ ರಘುವೀರ್ ಈಗ ಆಟೋ ಡ್ರೈವರ್!]

ರಘುವೀರ್ ಅವರು ಬಹಳ ಚಿಕ್ಕ ವಯಸ್ಸಿಗೆ ಮೃತಪಟ್ಟಿರುವುದು ದುರದೃಷ್ಟಕರ. ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿಗಳು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ರಘುವೀರ್ ಅವರ ಅಂತ್ಯಕ್ರಿಯೆ ಶುಕ್ರವಾರ (ಮೇ 9) ದೊಡ್ಡ ಆಲದ ಮರದ ಸಮೀಪ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಲಿದೆ. ಬಹುತೇಕ ಅವರ ಸಂಬಂಧಿಕರು ಚೆನ್ನೈನಲ್ಲಿದ್ದು ಅವರೆಲ್ಲ ಇಂದು ಬೆಂಗಳೂರಿಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
1992ರಲ್ಲಿ 'ಚೈತ್ರದ ಪ್ರೇಮಾಂಜಲಿ' ಚಿತ್ರದ ಮೂಲಕ ಕನ್ನಡಚಿತ್ರರಂಗಕ್ಕೆ ಅಡಿಯಿಟ್ಟ ರಘು ಬಳಿಕ ಹಲವಾರು ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ ಕಲಾವಿದ. ಚೈತ್ರದ ಪ್ರೇಮಾಂಜಲಿ ಚಿತ್ರ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಚೊಚ್ಚಲ ನಿರ್ದೇಶನದ ಚಿತ್ರವೂ ಹೌದು. ಹಂಸಲೇಖ ಅವರ ಸಂಗೀತದ ಹಾಡುಗಳು ಚಿತ್ರಕ್ಕೆ ಇನ್ನಷ್ಟು ಮೆರುಗು ತಂದಿದ್ದವು.
ಶೃಂಗಾರ ಕಾವ್ಯ, ಉಯ್ಯಾಲೆ, ಕಾವೇರಿ ತೀರದಲಿ, ನವಿಲೂರ ನೈದಿಲೆ, ಆಗಸ್ಟ್ 15 ಮುಂತಾದ ಚಿತ್ರಗಳಲ್ಲಿ ರಘುವೀರ್ ಅಭಿನಯಿಸಿದ್ದಾರೆ. 'ಮೊದಲ ಚುಂಬನ' ಚಿತ್ರ ಇನಷ್ಟೆ ತೆರೆಕಾಣಬೇಕಾಹಿದೆ. ರಘುವೀರ್ ಅವರ ಅಕಾಲಿಕ ಸಾವು ಕನ್ನಡಚಿತ್ರರಂಗಕ್ಕೆ ಆಘಾತ ನೀಡಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











