ಅಂಬರೀಶ್, ವಿಷ್ಣುವರ್ಧನ್, ಪ್ರಭಾಕರ್ ಸ್ನೇಹವನ್ನು ನೆನೆದ ರವಿಚಂದ್ರನ್!
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾರಂಗಕ್ಕೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾರೆ. ಸಾಕಷ್ಟು ಸಿನಿಮಾ ಕಲಾವಿದರು ರವಿಚಂದ್ರನ್ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎಂದು ಅಪೇಕ್ಷೆ ಪಡುತ್ತಾರೆ. ರವಿಚಂದ್ರನ್ ಕೂಡ ಹೊಸಬರಿಗೆ ಮತ್ತು ಸಿನಿಮಾರಂಗದ ಕಲಾವಿದರಿಗೆ ಪ್ರೋತ್ಸಾಹ ಕೊಡುತ್ತಾರೆ. ಇತ್ತೀಚಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ರವಿಚಂದ್ರನ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ
ಟೈಗರ್ ಪ್ರಭಾಕರ್ ಪುತ್ರ ನಟ ವಿನೋದ್ ಪ್ರಭಾಕರ್ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆ ಲಾಂಚ್ ಕಾರ್ಯಕ್ರಮಕ್ಕೆ ನಟ ರವಿಚಂದ್ರನ್ ಅತಿಥಿಯಾಗಿ ಆಗಮಿಸಿದ್ದರು. ಇದೇ ವೇಳೆ ಹಳೆಯ ಸ್ನೇಹಿತರನ್ನು ನೆನೆದು ಹೊಸಬರಿಗೆ ಮಾರ್ಗದರ್ಶನದ ಮಾತುಗಳನ್ನಾಡಿದ್ದಾರೆ ರವಿಚಂದ್ರನ್.
ನಟ ವಿಷ್ಣುವರ್ಧನ್ ಅಂಬರೀಶ್ ಟೈಗರ್ ಪ್ರಭಾಕರ್ ದೇವರಾಜ್ ಎಲ್ಲರನ್ನೂ ನೆನೆದು ಆತನ ಹೇಗಿತ್ತು. ಈಗಿನ ಸಿನಿಮಾ ಮಂದಿ ಹೇಗೆ ಹೆಜ್ಜೆಯನ್ನು ಇಡಬೇಕು ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ ರವಿಚಂದ್ರನ್. ಅಷ್ಟಕ್ಕೂ ವಿಷ್ಣು ಅಂಬಿಗನ ನೆನೆದು ರವಿಮಾಮ ಹೇಳಿದ್ದೇನು ಎನ್ನುವುದನ್ನು ಮುಂದೆ ಓದಿ...

ವಿನೋದ್ ಪ್ರಭಾಕರ್ 'ಟೈಗರ್ ಟಾಕೀಸ್'!
ನಟ ವಿನೋದ್ ಪ್ರಭಾಕರ್ ಮತ್ತು ಅವರ ಪತ್ನಿ ನಿಶಾ ಸೇರಿಕೊಂಡು ಟೈಗರ್ ಟಾಕೀಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದೇ ಕಾರ್ಯಕ್ರಮಕ್ಕೆ ನಟ ರವಿಚಂದ್ರನ್ ಅತಿಥಿಯಾಗಿ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ರವಿಚಂದ್ರನ್ "ವಿನೋದ್ ಪ್ರಭಾಕರ್ ಮೊಟ್ಟಮೊದಲ ಸಿನಿಮಾ ದಿಲ್ ಚಿತ್ರದ ಮುಹೂರ್ತದ ವೇಳೆ ವಿನೋದ್ ಪ್ರಭಾಕರ್ ನೋಡಿದ್ದೆ. ಅದಾದ ಬಳಿಕ ಮತ್ತೆ ಎಂದು ಭೇಟಿಯಾಗಿಲ್ಲ ಇವಾಗಲೇ ನೋಡುತ್ತಿದ್ದೇನೆ. ಬಹಳ ಉತ್ಸಾಹದಿಂದ ಮುಂದುವರೆದಿದ್ದಾನೆ. ಉತ್ಸಾಹದ ಹಿಂದೆ ಒಳ್ಳೆ ಉದ್ದೇಶ ಇದ್ದರೆ ಅದನ್ನು ಉತ್ಸವ ಮಾಡಬಹುದು." ಎಂದು ವಿನೋದ್ ಪ್ರಭಾಕರ್ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

ಟೈಗರ್ ಪ್ರಭಾಕರ್ ಬಗ್ಗೆ ರವಿಚಂದ್ರನ್ ಮಾತು!
ಟೈಗರ್ ಪ್ರಭಾಕರ್ ಬಗ್ಗೆ ಮಾತನಾಡಿದ ರವಿಚಂದ್ರನ್ "ನಾವೆಲ್ಲ ಇವರ ತಂದೆಯ ತೊಡೆ ಮೇಲೆ ಕೂತು ಬೆಳೆದವರು. ಪ್ರಭಾಕರ್ ಇಲ್ಲದೆ ನಾನು ಸಿನಿಮಾ ಮಾಡುತ್ತಲೇ ಇರಲಿಲ್ಲ. ಪ್ರಭಾಕರ್ ಸಹಕಲಾವಿದನಾಗಿ, ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದವರು. ನಮ್ಮ ತಂದೆಗೆ ಪ್ರಭಾಕರ್ ಎಂದರೆ ತುಂಬಾ ಇಷ್ಟ. ಅವರು ಬಿಡುವಿದ್ದಾಗ ನಮ್ಮ ಆಫೀಸಿಗೆ ಬಂದು ಕಾಲ ಕಳೆಯುತ್ತಿದ್ದರು. ಹಾಗಾಗಿ ಪ್ರಭಾಕರ್ ಅವರನ್ನು ಹೀರೋ ಮಾಡಬೇಕು ಎಂದು 'ಖದೀಮ ಕಳ್ಳರು' ಸಿನಿಮಾ ಶುರು ಆಯ್ತು. ಆಗಲೇ 'ಜಿದ್ದು' ಸಿನಿಮಾ ಸ್ಟಾರ್ಟ್ ಆಗಿ ಅವರು ಹೀರೋ ಆದರು. ಪ್ರಭಾಕರ್ ಸಾವಿರ ಸಿನಿಮಾ ಮಾಡಿದರೂ 'ಪ್ರೇಮ ಲೋಕ'ಕ್ಕೆ ಅವರೇ ಪ್ರಿನ್ಸಿಪಾಲ್" ಎಂದರು.

ವಿಲನ್ಗಳ ಮಕ್ಕಳೆಲ್ಲ ಹೀರೋಗಳಾಗಿದ್ದಾರೆ!
ಎಲ್ಲಾ ವಿಲನ್ ಮಕ್ಕಳು ಕೂಡ ಇಂದು ಹೀರೋ ಆಗಿ ಬೆಳೆದಿದ್ದಾರೆ. ವಿನೋದ್ ಪ್ರಭಾಕರ್ ಆಗಿರಲಿ, ದರ್ಶನ್ ಆಗಿರಲಿ, ದೇವರಾಜ್ ಮಕ್ಕಳಾಗಲಿ ಎಲ್ಲರೂ ಹೀರೋ ಆದರು. ಇಂದು ನಾವೆಲ್ಲ ಹೀರೋಗಳಾಗಿ ಬೆಳೆಯಲು ವಿಲನ್ಗಳೇ ಕಾರಣ. ವಿಲನ್ಗಳಾಗಿ ಅವರು ನಮ್ಮನ್ನ ಚೆನ್ನಾಗಿ ಹೊಡೆದು ಹೊಡೆದು ಹೀರೋ ಮಾಡಿದ್ದಾರೆ. ಸಹಕಲಾವಿದರು ಮತ್ತು ವಿಲನ್ಗಳು ಇಲ್ಲದೆ ಹೀರೋ, ಹೀರೋ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ ನಾವು ಹೀರೋಗಳಾಗಿ ಬೆಳೆಯಲು ಇವರೆಲ್ಲರೂ ಕಾರಣ.

ಹಳೆ ಗೆಳೆಯರನ್ನು ನೆನೆದ ಪ್ರಭಾಕರ್!
ನಮ್ಮ ತಂದೆ ಇಪ್ಪತ್ತು ರೂಪಾಯಿಗೆ ಡಬ್ಬ ಹೊತ್ತುಕೊಂಡು ಸಿನಿಮಾರಂಗಕ್ಕೆ ಬಂದವರು. ಅವರು ಬೆಳೆಸಿದ್ದಕ್ಕೆ ನಾವೆಲ್ಲಾ ಇಂದು ಈ ರೀತಿಯಲ್ಲಿ ಇದ್ದೇವೆ. ಅಂಬರೀಶ್, ವಿಷ್ಣುವರ್ಧನ್, ಪ್ರಭಾಕರ್ ಇವರ ನಡುವೆಯೇ ಬೆಳೆದಿದ್ದೇನೆ. ಅವರಿಂದಲೇ ಎಲ್ಲವನ್ನೂ ಕಲಿತಿದ್ದೇನೆ ನಮ್ಮಂತಹ ಸ್ನೇಹಿತರನ್ನು ನೋಡಲು ಸಾಧ್ಯವೇ ಇಲ್ಲ. ಸಿನಿಮಾ ನಿರ್ಮಾಣ ಎನ್ನುವುದು ದೊಡ್ಡ ಜವಾಬ್ದಾರಿ. ಉತ್ತಮ ಸಿನಿಮಾ ಮಾಡಿದರೆ ಜನ ನೋಡೇ ನೋಡುತ್ತಾರೆ." ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.


Click it and Unblock the Notifications











