ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಭೇಟಿಯಾದ ಸುದೀಪ್
ನಟ ಸುದೀಪ್ ಇಂದು ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದಾರೆ. ಇದು ಕೇವಲ ಅನೌಪಚಾರಿಕ ಭೇಟಿಯಾಗಿತ್ತಷ್ಟೆ ಎನ್ನಲಾಗಿದೆ.
ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಮೊದಲಿನಿಂದಲೂ ಆಪ್ತರು. ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಟ್ವೀಟ್ ಮಾಡಿದ್ದ ಸುದೀಪ್, ''ನಿಮ್ಮ ಸರಳತೆ ನೋಡಿ ಬೆಳೆದವನು ನಾನು. ನನ್ನ ಆರಂಭಿಕ ದಿನಗಳಲ್ಲಿ ನನಗೆ ಬೆಂಬಲವಾಗಿದ್ದವರು ನೀವು. ನಿಮಗೆ ಒಳ್ಳೆಯದಾಗಲಿ ಮಾಮ'' ಎಂದಿದ್ದರು.
ಸುದೀಪ್ ಸಿನಿಮಾರಂಗ ಪ್ರವೇಶಿಸಿದ ಆರಂಭಿಕ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲವಾಗಿದ್ದರು. ಹಾಗಾಗಿ ಬೊಮ್ಮಾಯಿ ಅವರೊಟ್ಟಿಗೆ ಸುದೀಪ್ಗೆ ಆತ್ಮೀಯತೆ. ಹಾಗಾಗಿಯೇ ಸಿಎಂ ಅವರನ್ನು ಮಾಮ ಎಂದು ಕರೆಯುವ ಸಲುಗೆ ಸುದೀಪ್ಗಿದೆ.

ಬಸವರಾಜ ಬೊಮ್ಮಾಯಿ, ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಸುದೀಪ್ ನೇರವಾಗಿ ಭೇಟಿ ಆಗಿರಲಿಲ್ಲ. ಹಾಗಾಗಿ ಇದೀಗ ಅಧಿಕೃತವಾಗಿ ಅವರನ್ನು ಕಂಡು ಶುಭಾಶಯ ಕೋರಿದ್ದಾರೆ.
ನಟ ಸುದೀಪ್ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ರಾಜಕೀಯ ಗೆಳೆಯರ ಪರವಾಗಿ ಪ್ರಚಾರ ನಡೆಸಿದ್ದರು ಸುದೀಪ್. ಸಿದ್ದರಾಮಯ್ಯ ಪರವಾಗಿಯೂ ಪ್ರಚಾರ ಮಾಡಿದ್ದರು.
ರಾಜಕೀಯ ಪ್ರವೇಶದ ಮೊದಲ ಮೆಟ್ಟಿಲಾಗಿರುವ ಸಮಾಜ ಸೇವೆಯಲ್ಲಿ ಸುದೀಪ್ ಬಹಳ ವರ್ಷಗಳಿಂದಲೂ ತೊಡಗಿಕೊಂಡಿದ್ದಾರೆ. ಕೋವಿಡ್ ಬಳಿಕವಂತೂ ಸುದೀಪ್ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.
ಸ್ವತಃ ಸಿಎಂ ಸುದೀಪ್ಗೆ ಆಪ್ತರಾಗಿರುವ ಕಾರಣ ಸರ್ಕಾರಿ ಯೋಜನೆಗಳಿಗೆ ಸುದೀಪ್ ರಾಯಭಾರಿ ಆಗುವ ಸಾಧ್ಯತೆ ಇದೆ. ಸರ್ಕಾರಿ ಯೋಜನೆಗಳಿಗೆ, ಇಲಾಖೆಗಳಿಗೆ ರಾಯಭಾರಿ ಆಗುವುದು ಗೌರವದ ವಿಷಯ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಯಾವ ನಟರೂ ಸರ್ಕಾರಿ ಯೋಜನೆಗಳಿಗೆ ರಾಯಭಾರಿ ಆಗಲು ಹಣ ಪಡೆಯುವುದಿಲ್ಲ.
ಬಸವರಾಜ ಬೊಮ್ಮಾಯಿ ಅವರಿಗೆ ಸಿನಿಮಾ ಜೊತೆ ಅತ್ಯಾಪ್ತ ಸಂಬಂಧ ಇಲ್ಲದಿದ್ದರೂ ಅಂತರವಂತೂ ಇಲ್ಲ. ಕೆಲವು ದಿನಗಳ ಹಿಂದೆ ಸಿನಿಮಾ ಸಂಬಂಧಿ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ದ ಬೊಮ್ಮಾಯಿ ಅವರು, ಡಾ.ರಾಜ್ಕುಮಾರ್ ಕುರಿತ ತಮ್ಮ ಅಭಿಮಾನದ ಬಗ್ಗೆ ಮಾತನಾಡಿದರು. ಹಾಗೆಯೇ ನಟ ಪುನೀತ್ ರಾಜ್ಕುಮಾರ್, ತಮ್ಮ ನೆಚ್ಚಿನ ಸಿನಿಮಾ ಹೀಗೆ ಹಲವು ವಿಷಯಗಳನ್ನು ಬೊಮ್ಮಾಯಿ ಮಾತನಾಡಿದ್ದರು.


Click it and Unblock the Notifications










