ಡೆಂಟಲ್ ಸರ್ಜರಿ ಮಾಡಿಸಿಕೊಂಡ ನಟ ಸುದೀಪ್
ಈ ಬಗ್ಗೆ ಅವರು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಅಭಿಮಾನಿಗಳ ಜೊತೆ ಹೇಳಿಕೊಂಡಿದ್ದಾರೆ. ದಂತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಅತೀವ ಯಾತನೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಈ ನೋವಿನಿಂದ ಚೇತರಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಅವರ ಕೆಳದವಡೆಗೆ ಡ್ರಿಲ್ ಮಾಡಿ ಕೃತಕ ದಂತಮೂಲ ಅಳವಡಿಸಿ ಹೊಲಿಗೆ ಹಾಕಲಾಗಿದೆ. ಅಸಾಧ್ಯ ನೋವು, ತಡೆಯಲು ಸಾಧ್ಯವಾಗುತ್ತಿಲ್ಲ. ಹಲ್ಲುಗಳು ಹಾಳಾಗಲು ನಮ್ಮ ನಿರ್ಲಕ್ಷ್ಯವೇ ಕಾರಣ. ಅದಕ್ಕೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ ಎಂಬರ್ಥದಲ್ಲಿ ಟ್ವೀಟಿಸಿದ್ದಾರೆ. ಬೆಂಗಳೂರಿನಲ್ಲಿ ಚುಮು ಚುಮು ಚಳಿ ಬೇರೆ, ಕಟಕಟ ಎಂದು ಹಲ್ಲು ಕಡಿಯುವಂಗೂ ಇಲ್ಲ ಸುದೀಪ್, ಪಾಪ.
ಹಾಗೆಯೇ 2013ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ತಾವು ಭಾಗವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. 2012ರ ಸಿಸಿಎಲ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ಜೊತೆ ಸೆಣೆಸಾಡಿ ವೀರ ಸೋಲನ್ನು ಅಪ್ಪಿಕೊಂಡಿತ್ತು.
ತಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸುವಲ್ಲಿ ಸುದೀಪ್ ಅವರ ಶ್ರಮ ಎದ್ದು ಕಾಣುತ್ತಿತ್ತು. 2013ರಲ್ಲಿ ಅವರು ಇದೇ ರೀತಿಯ ಹುಮ್ಮಸ್ಸಿನಲ್ಲಿ ಆಡುವುದಾಗಿ ಹೇಳಿದ್ದಾರೆ. ಈಗಾಗಲೆ ಕಪ್ ಮಿಸ್ ಮಾಡಿಕೊಂಡಿರುವ ಸುದೀಪ್ ಮುಂಬರುವ ಸೀಸನ್ ನಲ್ಲಿ ಗೆಲ್ಲಲಿ ಎಂದು ಆಶಿಸೋಣ.
ಸದ್ಯಕ್ಕೆ ಬಚ್ಚನ್ ಚಿತ್ರದಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಮಲ್ಲು ಬೆಡಗಿ ಭಾವನಾ ಚಿತ್ರದ ನಾಯಕಿ. ತೆಲುಗು ಚಿತ್ರರಂಗದ ಸ್ಟಾರ್ ಜಗಪತಿ ಬಾಬು ಅವರು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಶಶಾಂಕ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದನ್ನು ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












