ಮೈಸೂರಿನಲ್ಲಿ 'ತಪ್ಪಾಯ್ತು ಕ್ಷಮಿಸು' ಎಂದ ಅಮೂಲ್ಯಾ
ಗೋಲ್ಡನ್ ಸ್ಟಾರ್ ಗಣೇಶ್ ಜತೆ 'ಚೆಲುವಿನ ಚಿತ್ತಾರ' ಬಿಡಿಸಿ ಕನ್ನಡಿಗರೆಲ್ಲರ ಮನಗೆದ್ದಿರುವ ನಟಿ ಅಮೂಲ್ಯಾ, ನಾನಿನ್ನು ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮೈಸೂರಿನ ಮನೆಯೊಂದರಲ್ಲಿ ಅದೇ ಅಮೂಲ್ಯಾ 'ತಪ್ಪಾಯ್ತು ಕ್ಷಮಿಸು' ಎನ್ನುತ್ತಿದ್ದಾರೆ. ಅಮೂಲ್ಯಾ ಅಂತಹ ಯಾವ ತಪ್ಪನ್ನು ಮಾಡಿದ್ದಾರೆ? ಯಾರಲ್ಲಿ ಕ್ಷಮೆ ಕೇಳುತ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಪಕ್ಕಾ ಉತ್ತರವಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಮುಂದೆ ನಿಂತು 'ತಪ್ಪಾಯ್ತು ಕ್ಷಮಿಸು' ಎನ್ನುತ್ತಿದ್ದಾರೆ ಅಮೂಲ್ಯಾ. ನಾನಿನ್ನು ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದ ಅಮೂಲ್ಯಾ, ಗಣೇಶ್ ಜತೆ ಮತ್ತೆ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಇತ್ತೀಚಿಗಷ್ಟೇ ಸುದ್ದಿಯಾಗಿತ್ತು. ಅದೀಗ ನಿಜವಾಗಿದೆ. 'ಶಿಶಿರ' ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರು ಹಾಗೂ ಮಾಧ್ಯಮಗಳಿಂದ ಪ್ರಶಂಸೆ ಪಡೆದಿದ್ದ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅಮೂಲ್ಯಾ ನಟಿಸುತ್ತಿದ್ದಾರೆ.
ಕಳೆದ ಸೋಮವಾರದಿಂದ (06 ಆಗಸ್ಟ್ 2012) ಚಿತ್ರೀಕರಣ ಪ್ರಾರಂಭವಾಗಿದೆ. ಬೆನ್ನಿಗೆ 'ತಪ್ಪಾಯ್ತು ಕ್ಷಮಿಸು' ಎಂದು ಬರೆದಿರುವ ಪೇಪರ್ ಅಂಟಿಸಿಕೊಂಡ ಅಮೂಲ್ಯಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ನಿನ್ನೆ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ನಿರ್ದೇಶಕ ಮಂಜು ಸ್ವರಾಜ್ 'ಆಕ್ಷನ್-ಕಟ್' ನಲ್ಲಿ ಈ ದೃಶ್ಯ ಶೂಟ್ ಆಗುತ್ತಿತ್ತು. ಅಮೂಲ್ಯಾ ಗಣೇಶ್ ಜೋಡಿ ಮೈಸೂರಿನ ಮನೆಯೊಂದರಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು.
ಅಮೂಲ್ಯಾ ನಾಯಕಿಯಾಗಿ ಮೊಟ್ಟಮೊದಲು ನಟಿಸಿರುವ ಚೆಲುವಿನ ಚಿತ್ತಾರ, ಸೂಪರ್ ಹಿಟ್ ಆಗಿತ್ತು. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರಕ್ಕೆ ಗಣೇಶ್ ನಾಯಕರಾಗಿದ್ದರು. 'ಮಾದೇಸ-ಐಸೂ' ಜೋಡಿ ಜನಮಾನಸದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಚೆಲುವಿನ ಚಿತ್ತಾರದ ನಂತರ ಈಗ ಗಣೇಶ್ ಹಾಗೂ ಅಮೂಲ್ಯಾ ಜೋಡಿ ಮತ್ತೆ ಒಂದಾಗಿದೆ. ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಮತ್ತೆ ಒಂದಾಗಿರುವ ಈ ಜೋಡಿಯಿಂದ ಪ್ರೇಕ್ಷಕರು ಇನ್ನೊಂದು ಚೆಲುವಿನ ಚಿತ್ತಾರ ನಿರೀಕ್ಷಿಸಿದ್ದಾರೆ.
ಈ ಕುರಿತು 'ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿರುವ ಅಮೂಲ್ಯಾ, "ನಾನು ನಟಿಸುವುದಿಲ್ಲವೆಂದಿದ್ದೆ ನಿಜ. ನಟಿಸುವ ಇಷ್ಟವಿದ್ದರೂ ಆ ವೇಳೆ ಹಾಗೆ ಹೇಳುವುದು ನನಗೆ ಅನಿವಾರ್ಯವಾಗಿತ್ತು. ಈಗ ನಟಿಸುತ್ತಿರುವ ಈ ಚಿತ್ರ ನಾನು ಮೊದಲೇ ಕಮಿಟ್ ಆಗಿದ್ದು. ನಾನು ನಟಿಸುವುದಿಲ್ಲವೆಂದರೆ ಚಿತ್ರವನ್ನೇ ಮಾಡುವುದಿಲ್ಲವೆಂದಿದ್ದರು ಮಂಜು ಸ್ವರಾಜ್. ಹೀಗಾಗಿ ಒಪ್ಪಿಕೊಂಡಿದ್ದೆ. ಈಗ ಚಿತ್ರ ಶುರುವಾಗಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











