'ಪೆಂಟಗನ್' ಟೀಸರ್ ವಿವಾದ: ರೋಲ್ಕಾಲ್ ಪದ ಕೇಳಿ ಕೆರಳಿದ ನಟಿ ಅಶ್ವಿನಿ, ರೂಪೇಶ್ ರಾಜಣ್ಣ!
ರಿಲೀಸ್ಗೆ ರೆಡಿಯಾಗಿರೋ ಸ್ಯಾಂಡಲ್ವುಡ್ನ ವಿಶಿಷ್ಟ ಸಿನಿಮಾಗಳ ಪಟ್ಟಿಯಲ್ಲಿ 'ಪೆಂಟಗನ್' ಕೂಡ ಇದೆ. ಇದು ಐದು ಕಥೆಗಳನ್ನು ಒಳಗೊಂಡ ಒಂದು ಸಿನಿಮಾ. ಐವರು ನಿರ್ದೇಶಕರು.. ಐವರು ಕಥೆಯನ್ನು ನಿರ್ದೇಶಿಸಿರುವ ಸಿನಿಮಾವೇ ಪೆಂಟಗನ್. ಈ ಸಿನಿಮಾದ 5ನೇ ಕಥೆ 'ಪೆಂಟಗನ್' ಟೀಸರ್ ಇಂದು(ಜನವರಿ 18) ರಿಲೀಸ್ ಆಗಿದೆ. ರಿಲೀಸ್ ಆಗುತ್ತದ್ದಂತೆ ವಿವಾದಕ್ಕೆ ಸಿಲುಕಿದೆ.
ಗುರು ದೇಶಪಾಂಡೆ ನಿರ್ದೇಶನ ಮಾಡಿರುವ 'ಪೆಂಟಗನ್' ಐದನೇ ಕಥೆಯಲ್ಲಿ ಕಿಶೋರ್ ಕನ್ನಡ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ 'ದಿಯಾ' ಖ್ಯಾತಿಯ ಪೃಥ್ವಿ ಅಂಬಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೂಪೇಶ್ ರಾಜಣ್ಣ ಹಾಗೂ ನಟಿ ಹಾಗೂ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ನಟಿಸಿರೋದು ವಿಶೇಷ.
ಸದ್ಯ ಈ ಸಿನಿಮಾದ 5ನೇ ಟೀಸರ್ ರಿಲೀಸ್ ಆಗಿದ್ದು ರೂಪೇಶ್ ಹಾಗೂ ಅಶ್ವಿನಿ ಗೌಡ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ಕಾರಣ, ಕನ್ನಡ ಪರ ಹೋರಾಟಗಾರನ ಪಾತ್ರ ಮಾಡುತ್ತಿರುವ ಕಿಶೋರ್ ಅವರನ್ನು ರೋಲ್ಕಾಲ್ ಅಂತ ಕರೆದಿರೋದಕ್ಕೆ ರೂಪೇಶ್ ಹಾಗೂ ಅಶ್ವಿನಿ ಅವರಲ್ಲಿ ಅಸಮಧಾನ ಎದ್ದು ಕಾಣುತ್ತಿತ್ತು. ಟೀಸರ್ ರಿಲೀಸ್ ವೇಳೆ ವೇದಿಕೆ ಮೇಲೆ ಅಶ್ವಿನಿ ಗೌಡ ಕನ್ನಡ ಹೋರಾಟಗಾರರ ಪರ ಧ್ವನಿಎತ್ತಿದ್ದಾರೆ. ಅದರ ಸಾರಾಂಶ ಇಲ್ಲಿದೆ.

'ರೋಲ್ಕಾಲ್ ಅಂದಾಗ ನಮಗೆ ರೋಷ ಬರುತ್ತೆ'
"ಪ್ರತಿಯೊಬ್ಬ ಹೋರಾಟಗಾರರಿಗೂ ಸನ್ಮಾನ ಮಾಡಿ ಪ್ರಶಸ್ತಿಯನ್ನು ಕೊಟ್ಟಿದ್ದು ಏನೂ ಇಲ್ಲ. ನಾವು ಇಲ್ಲಿವರೆಗೂ ಹೋರಾಟ ಮಾಡಿ ಬಳುವಳಿಯಾಗಿ ಸಿಕ್ಕಿದ್ದು, ಕೋರ್ಟ್ ಕೇಸ್ಗಳು, ಒಂದಿಷ್ಟು ಸೆಕ್ಷನ್ಗಳನ್ನು ಹಾಕಿ ಜೈಲಿಗೆ ಕಳಿಸಿರುವಂತಹದ್ದು. ಪ್ರಾಮಾಣಿಕ ಹೋರಾಟಗಾರ್ತಿಯಾಗಿ ಹೇಳುತ್ತೇನೆ. ನನ್ನ ಮೇಲೂ ನಾಲ್ಕು ಕೇಸ್ಗಳಿವೆ. ಕಲಾವಿದೆಯಾಗಿ ನನ್ನ ಪಾತ್ರ ಒಂದಾದ್ರೆ, ಹೋರಾಟಗಾರ್ತಿಯಾಗಿ ನನ್ನ ಪಾತ್ರನೇ ಬೇರೆಯಾಗಿರುತ್ತೆ. ಕೆಲವು ಪದಬಳಕೆ ಏನಿರುತ್ತೆ ಅದು ಎಲ್ಲರಿಗೂ ನಾಟುವಂತಹದ್ದೇ. ರೋಲ್ಕಾಲ್ ಅಂದಾಗ ನಮಗೆ ಎಲ್ಲಿಲ್ಲದೆ ಇರೋ ರೋಷ ಬರುತ್ತೆ. ಅದು ಬರೀ ರೂಪೇಶ್ ರಾಜಣ್ಣ ಅಷ್ಟೇ ಅಲ್ಲ. ಪ್ರತಿಯೊಂದು ಸಂದರ್ಭದಲ್ಲಿಯೂ ಹೋರಾಟ ಮಾಡಿದಾಗ ನಮ್ಮನ್ನು ಹೀಯಾಳಿಸುತ್ತಾರಲ್ಲ ಆಗ ನಮಗೆ ರಕ್ತ ಕುದಿಯುತ್ತೆ."

'ಕನ್ನಡ ಕಾರ್ಯಕ್ರಮಕ್ಕೆ ಹಣ ಕೇಳುತ್ತಾರೆ'
"ನಮ್ಮ ನಾಡಿ, ನುಡಿ, ಭಾಷೆ ಅಂತ ಹೋರಾಟ ಮಾಡೋರು ತುಂಬಾನೇ ಕಡಿಮೆ. ಕನ್ನಡದ ಕಾರ್ಯಕ್ರಮಕ್ಕೆ ಯಾರಾದರೂ ಒಬ್ಬ ಕಲಾವಿದನನ್ನು ಕರೆದರೆ ಏನು ಹೇಳುತ್ತಾರೆ ಗೊತ್ತಾ ಸರ್, ನೀವು ಎಷ್ಟು ಕೊಡುತ್ತೀರ ಅಂತ ಕೇಳುತ್ತಾರೆ. ನಾನೊಬ್ಬ ಕಲಾವಿದೆಯಾಗಿ ನನಗೆ ಹೊಟ್ಟೆ ಉರಿಯುತ್ತೆ. ಕನ್ನಡದ ಕಾರ್ಯಕ್ರಮ ಯಾರಾದರೂ ಕರೆದರೆ, ಕನ್ನಡದ ಕಾರ್ಯಕ್ರಮ ಅಂತ ಬಿಟ್ಟಿ ಪೆಟ್ರೋಲ್ ಹಾಕೊಂಡು ಹೋಗಿಬರುತ್ತೇನೆ.ಯಾರಿಗೂ ಎಷ್ಟು ಕೊಡುತ್ತೀರ ಅಂತ ಕೇಳಿಲ್ಲ."

ರೂಪೇಶ್ ರಾಜಣ್ಣಗೂ ಬೇಜಾರು
"ನಮ್ಮ ಸಮಾಜ ಹೋರಾಟಗಾರರು, ಅದರಲ್ಲೂ ಹೆಣ್ಣು ಮಕ್ಕಳ ಹೋರಾಟಗಾರರು ಅಂದ್ರೆ, ತುಂಬಾನೇ ಕೀಳಾಗಿ ನೋಡುತ್ತಾರೆ. ಹಾಗಾಗಿ ರೋಲ್ಕಾಲ್ ಅಂತ ಪದ ಬಳಕೆ ಮಾಡಿದ್ದಾಗ ಎಂತಹವರಿಗಾದರೂ ನೋವಾಗುತ್ತೆ. ಇವತ್ತು ರೂಪೇಶ್ ರಾಜಣ್ಣ ಅವರಿಗೂ ಅದೇ ನೋವಾಗಿದೆ. ನನಗೂ ಅದೇ ನೋವಾಗಿದೆ. ಚಿತ್ರೀಕರಣ ಆಗುವಾಗ ಕೇವಲ ನಮ್ಮ ಪಾತ್ರವನ್ನ ಮಾತ್ರ ಕೇಳಿರುತ್ತೇವೆ. ಇಡೀ ಸಿನಿಮಾ ಏನಿರುತ್ತೆ ಅಂತ ನಾವು ಕೇಳಿರುವುದಿಲ್ಲ. ನಾವು ಹೋದ್ವಾ? ನಮ್ಮ ಪಾತ್ರ ಮಾಡಿದ್ವಾ? ಬಂದ್ವಾ? ಅಂತಿರುತ್ತೇವೆ." ಎಂದು ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಹೇಳಿದ್ದಾರೆ.

'ಎಲ್ಲದರಲ್ಲೂ ಭ್ರಷ್ಟರಿದ್ದಾರೆ'
"ಯಾವುದೇ ಕ್ಷೇತ್ರದಲ್ಲಿ ತಗೊಳ್ಳಿ. ಸಿನಿಮಾ ಕ್ಷೇತ್ರದಲ್ಲಿ ತಗೊಳ್ಳಿ. ಕನ್ನಡ ಹೋರಾಟದ ವಿಚಾರದಲ್ಲಿ ತಗೊಳ್ಳಿ. ಎಲ್ಲದರಲ್ಲೂ ಭ್ರಷ್ಟರಿದ್ದಾರೆ. ಎಲ್ಲಿಲ್ಲ ಭ್ರಷ್ಟರು. ಯಾವ ಮಾಧ್ಯಮದಲ್ಲಿ ಇಲ್ಲ ಭ್ರಷ್ಟರು? ನನಗೆ ಅನಿಸುತ್ತೆ. ಈ ಸಿನಿಮಾದಲ್ಲಿ ಏನು ಸೀನ್ ಅನ್ನು ಕ್ರಿಯೇಟ್ ಮಾಡಿದ್ದಾರೆ. ಅಂತಹ ಭ್ರಷ್ಟರು ಇದ್ದಾರಲ್ಲ ಅಂತವರಿಗೆ ಈ ಸಿನಿಮಾ ಖಂಡಿತವಾಗಿಯೂ ನಾಟಬೇಕು. ಕನ್ನಡದ ಹೋರಾಟ ಅಂದ್ರೆ ಬ್ಯುಸಿನೆಸ್ ಅಲ್ಲ. ಕನ್ನಡದ ಹೋರಾಟ ಅಂದ್ರೆ, ನಮ್ಮ ಭಾವನೆಗಳು ತುಂಬಿದೆ ಅಲ್ಲಿ. ಈ ಸಿನಿಮಾದಲ್ಲಿ ಮೆಸೇಜ್ ಕೊಡುತ್ತಿರಾ ಅನ್ನೋದಾದರೆ ನಾವೆಲ್ಲರೂ ನಿಮ್ಮ ಜೊತೆ ನಿಂತುಕೊಳ್ಳುತ್ತೇವೆ.ಒಂದ್ವೇಳೆ ಅಂತಹ ಮೆಸೇಜ್ ಇಲ್ಲಾ ಅಂತಾರೆ, ಸಮಾಜಕ್ಕೆ ಬೇರೆ ತರಹದ ಸಂದೇಶ ನೀಡಿದಂತಾಗುತ್ತೆ." ಎಂದು ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಹೇಳಿದ್ದಾರೆ.


Click it and Unblock the Notifications











