ದೌರ್ಜನ್ಯ ತಡೆಗೆ ಕಾನೂನು ಗಟ್ಟಿಯಾಗಬೇಕಿದೆ-ನಟ ಭುವನ್ಗೌಡ
ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಮಳವಳ್ಳಿಯ ಬಾಲಕಿಯ ಮನೆಗೆ ಇಂದು ಮಂಡ್ಯ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಭೇಟಿ ನೀಡಿದ್ದರು. ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಗೌಡ ಸಹ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವಾನ ಹೇಳಿದರು.
ಬಾಲಕಿಯ ಪೋಷಕರನ್ನು ಭೇಟಿ ಮಾಡಿದ ಹರ್ಷಿಕಾ ಪೂಣಚ್ಚ ನಿಮ್ಮ ಜೊತೆ ನಾವೀದ್ದೇವೆ ಭಯ ಪಡಬೇಡಿ, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು, ಮೃತ ಬಾಲಕಿಗೆ ನ್ಯಾಯಾ ಸಿಗೋವರೆಗೂ ಹೋರಾಟ ಮಾಡೋಣವೆಂದು ಭರವಸೆ ನೀಡಿದರು.
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟಿ ಹರ್ಷಿಕಾ ಪೂಣಚ್ಚ, ಬಾಲಕಿಯ ಮೇಲೆ ನಡೆದಿರುವ ಕೃತ್ಯ ನಾಗರೀಕರು ತಲೆ ತಗ್ಗಿಸುವಂತಹ ವಿಚಾರವಾಗಿದೆ, ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರಿಯಾದ ಶಿಕ್ಷೆ ನೀಡಿದಲ್ಲಿ ಮಾತ್ರ ಇಂತಹುದ್ದನ್ನು ತಡೆಯಲು ಸಾಧ್ಯ' ಎಂದರು.

ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ: ನಟ ಭುವನ್
ನಟ ಭುವನ್ ಮಾತನಾಡಿ, ಮಕ್ಕಳ ಮೇಲೆ ದೌರ್ಜನ್ಯವನ್ನು ತಡೆಯಲು ಕಾನೂನು ಇನ್ನಷ್ಟು ಗಟ್ಟಿಯಾಗಬೇಕಿದೆ. ದೇಶದಲ್ಲಿ ಕಾನೂನು ಇನ್ನಷ್ಕು ಗಟ್ಟಿಗೊಂಡು ಆರೋಪಿಗೆ ತಕ್ಕ ಶಾಸ್ತಿಯಾದರೇ ಇಂತಹ ಕೃತ್ಯಗಳನ್ನು ತಡೆಯಬಹುದಾಗಿದೆ, ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜನೀಯವಾಗಿ ಕಾಣುತ್ತೇವೆ. ಆದರೆ ಇಂತಹ ಹೇಯ ಕೃತ್ಯದಿಂದ ಜನ ತಲೆ ತಗ್ಗಿಸುವಂತಾಗಿದೆ, ಅಪ್ಪ ಅಮ್ಮನನ್ನ ಬಿಟ್ಟು ಬೇರೆ ಯಾರನ್ನು ನಂಬುವ ಪರಿಸ್ಥಿತಿ ಇಲ್ಲ, ಈ ಘಟನೆ ಮತ್ತೆ ಮರುಕಳಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದು ಹೇಳಿದರು.

ಚೆಕ್ ವಿತರಿಸಿದ ಗೋಪಾಲಯ್ಯ ಹಾಗೂ ಸುಮಲತಾ
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಬಾಲಕಿ ಕುಟುಂಬದವರಿಗೆ ಸರ್ಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂ ಪರಿಹಾರ ಮಂಜೂರು ಮಾಡಲಾಗಿದ್ದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಮಂಡ್ಯ ಸಂಸದೆ ಸುಮಲತಾ ಇಂದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿ ಸಾಂತ್ವನ ಹೇಳಿದರು.

10 ಲಕ್ಷ ಪರಿಹಾರ ಘೋಷಿಸಿದ್ದ ಸಿಎಂ
ಮುಖ್ಯಮಂತ್ರಿಗಳು ಕುಂಭ ಮೇಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಬಾಲಕಿಯ ಮೇಲೆ ನಡೆದಿರುವುದು ಅಮಾನುಷ ಕೃತ್ಯವಾಗಿದ್ದು, ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಮಂಜೂರು ಮಾಡುವಂತೆ ಮನವಿ ಮಾಡಿದ್ದರು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ವೇದಿಕೆಯಲ್ಲೇ ಪರಿಹಾರ ಘೋಷಿಸಿದರು.

ಅಕ್ಟೋಬರ್ 11 ರಂದು ನಡೆದಿದ್ದ ಅಮಾನವೀಯ ಘಟನೆ
ಅಕ್ಟೋಬರ್ 11 ರಂದು ಟ್ಯೂಶನ್ಗೆಂದು ತೆರಳಿದ್ದ ಬಾಲಕಿಯ ಮೇಲೆ ಟ್ಯೂಶನ್ ಸೆಂಟರ್ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ. ಆರೋಪಿ ಕಾಂತರಾಜು ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ತನಿಖೆ ಹಂತದಲ್ಲಿ ಪೊಲೀಸರೊಟ್ಟಿಗೆ ಸೇರಿ ಆರೋಪಿಯನ್ನು ಹುಡುಕುವ ನಾಟಕ ಮಾಡಿದ್ದ. 'ಹತ್ಯಾಚಾರ' ಖಂಡಿಸಿ ಮಂಡ್ಯ ಹಾಗೂ ಮಳವಳ್ಳಿಗಳಲ್ಲಿ ಕೆಲವು ಸಂಘಟನೆಗಳವರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಿಎಂ ಎಚ್ಡಿಕೆ ಸೇರಿದಂತೆ ಹಲವು ರಾಜಕಾರಣಿಗಳು ಘಟನೆಯನ್ನು ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.


Click it and Unblock the Notifications











