'ರಮ್ಯಾ ಚೈತ್ರಾ ಕಾಲ' ಚಿತ್ರದ ನಾಯಕಿಯೇ.. 'ಕಾಂತಾರ' ಶಿವನ ತಾಯಿ
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನ ಬಹು ನಿರೀಕ್ಷಿತ ಚಿತ್ರ 'ಕಾಂತಾರ' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುವ ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ತೆರೆ ಕಂಡಿರುವ 'ಕಾಂತಾರ' ಚಿತ್ರ ಇಂದಿಗೂ (ಅಕ್ಟೋಬರ್ 8) ಯಶಸ್ವಿ ಪ್ರದರ್ಶನ ಕಾಣಿತ್ತಿದೆ. ಬಹುತೇಕ ಚಿತ್ರಮಂದಿರಗಳಲ್ಲಿ 'ಕಾಂತಾರ' ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಪ್ರತಿಯೊಬ್ಬ ಪ್ರೇಕ್ಷಕನಿಂದಲೂ ಮೆಚ್ಚುಗೆ ಪಡೆದಿರುವ 'ಕಾಂತಾರ' ಚಿತ್ರ, ಸೋಶಿಯಲ್ ಮೀಡಿಯಾಗಳಲ್ಲಿ ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಕೂಡ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆ ವಾವ್ ಎಂದಿದ್ದು, ಈವರೆಗೂ ಎಲ್ಲಿಯೂ ಕೂಡ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ..
ಈಗಾಗಲೇ ಪರಭಾಷೆ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಕಾಂತಾರ' ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ಈ ಮೂಲಕ ಕನ್ನಡ ಬಳಿಕ ಮತ್ತೊಂದು ಭಾಷೆಯಲ್ಲಿ 'ಕಾಂತಾರ' ತೆರೆ ಕಾಣಲಿದೆ. ಈಗಾಗಲೇ ಬಹುತೇಕರು ಸಿನಿಮಾ ವೀಕ್ಷಿಸಿದ್ದು, ಚಿತ್ರದ ಪ್ರತಿಯೊಂದು ಪಾತ್ರವೂ ಕೂಡ ಪ್ರೇಕ್ಷಕರ ಮನಸೂರೆಗೊಂಡಿದೆ. 'ಕಾಂತಾರ' ಚಿತ್ರದ ಶಿವ ಪಾತ್ರದಷ್ಟೇ ಪ್ರೇಕ್ಷಕರನ್ನು ಮೆಚ್ಚಸಿರುವ ಮತ್ತೊಂದು ಪಾತ್ರ ಕಮಲ. ಶಿವನ ತಾಯಿ ಪಾತ್ರ. ಈ ಪಾತ್ರವನ್ನು ನಿರ್ವಹಿಸಿರುವ ಮಾನಸಿ ಸುಧೀರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಯಾರು ಈ ಮಾನಸ ಸುಧೀರ್..?
'ಕಾಂತಾರ' ಸಿನಿಮಾದಲ್ಲಿ ಶಿವನ ತಾಯಿ ಪಾತ್ರ ಅಂದರೆ ಕಮಲ ಪಾತ್ರ ನಿರ್ವಹಿಸಿರುವ ನಿಜವಾದ ಹೆಸರು ಮಾನಸಿ ಸುಧೀರ್. ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಇವರು ಚಿರಪರಿಚಿತರು. ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿರುವ ಮಾನಸಿ ಸುಧೀರ್ ಅವರು, ಲಾಕ್ಡೌನ್ ಸಂದರ್ಭಗಳಲ್ಲಿ ಭಾವಗೀತೆಗಳನ್ನು ಹಾಡಿ, ಅದಕ್ಕೆ ತಕ್ಕಂತೆ ನಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಈ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಅನೇಕ ರಂಗಕರ್ಮಿಗಳು ಮಾನಸ ಸುಧೀರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾನಸಿ ಸುಧೀರ್ ಅವರು ಪತಿ ವಿದ್ವಾನ್ ಸುಧೀರ್ ಅವರೊಂದಿಗೆ ನೃತ್ಯ ಶಾಲೆ ನಡೆಸುತ್ತಿದ್ದಾರೆ.

ಮಾನಸಿ ಸುಧೀರ್ಗೆ 'ಕಾಂತಾರ' ಮೊದಲ ಚಿತ್ರವಲ್ಲ
ಮಾನಸಿ ಸುಧೀರ್ ಅವರಿಗೆ 'ಕಾಂತಾರ' ಮೊದಲ ಚಿತ್ರವಲ್ಲ. ಈ ಹಿಂದೆ ಕೂಡ ಅವರು ಸಿನಿಮಾದಲ್ಲಿ ನಟಿಸಿದ್ದರು. ಈ ಬಗ್ಗೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಾನು ಮೂಲತಃ ಭರತ ನಾಟ್ಯ ಕಲಾವಿದೆ. ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ನಟಿಸುತ್ತಿರುವುದಲ್ಲ. 2006 ನೇ ಇಸವಿಯಲ್ಲಿ ಸುನೀಲ್ ದೇಸಾಯಿ ಅವರ 'ರಮ್ಯಾ ಚೈತ್ರಾ ಕಾಲ' ಚಿತ್ರದ ನಾಯಕಿಯಾಗಿ ನಟಿಸಿದ್ದೆ. ನಿಖಿಲ್ ಮಂಜು ಅವರ ನಿರ್ದೇಶನದ 'ರಿಸರ್ವೇಶನ್' ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೆ, ರಾಘವೇಂದ್ರ ರಾಜ್ಕುಮಾರ್ ಅವರ ಚಿತ್ರದಲ್ಲೂ ನಟಿಸಿರುವುದಾಗಿ ಮಾನಸ ಸುಧೀರ್ ಹೇಳಿದ್ದಾರೆ.

ಈ ಪಾತ್ರಕ್ಕಾಗಿ ಹಲವು ಬಾರಿ ಲುಕ್ ಟೆಸ್ಟ್ ನಡೆಯಿತು
'ಕಾಂತಾರ' ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಮಾತನಾಡಿದ ಅವರು, ಮೊದಲಿಗೆ ನನಗೆ 'ಕಾಂತಾರ' ಚಿತ್ರತಂಡದಿಂದ ಕರೆ ಬರುತ್ತದೆ. ನಾನು ಮೊದಲು ಕಥೆ ಕೇಳಿ ಈ ಪಾತ್ರ ನನಗೆ ಮಾಡಲು ಆಗುತ್ತದಾ ಅಂತಾ ಅನುಮಾನ ಬಂದಿತ್ತು. ತುಂಬಾ ಹಿರಿಯ ನಟಿಯೊಬ್ಬರು ಈ ಪಾತ್ರ ಮಾಡಬೇಕಿತ್ತಂತೆ. ಅವರಿಗೆ ಆಗಾದೇ ಇದ್ದಾಗ ನನ್ನನ್ನೇ ಆಯ್ಕೆ ಮಾಡಿದರು. ಈ ಪಾತ್ರಕ್ಕಾಗಿ ಹಲವು ಬಾರಿ ಲುಕ್ ಟೆಸ್ಟ್ ನಡೆಯಿತು. ಆ ಪಾತ್ರದಲ್ಲಿ ಸಣ್ಣ ಬದಲಾವಣೆ ಮಾಡಿ ನನಗೆ ಅವಕಾಶ ಕೊಟ್ಟರು.ರಿಷಬ್ ಸರ್ ನನ್ನ ಮೇಲೆ ನಂಬಿಕೆ ಇಟ್ಟು ಪಾತ್ರ ಕೊಟ್ಟಿದ್ದರು. ಒಬ್ಬ ಒಳ್ಳೆಯ ನಿರ್ದೇಶಕನ ಕೈ ಕೆಳಗೆ ಕೆಲಸ ಮಾಡಿದಾಗ ನಾವು ವಿಭಿನ್ನ ಪಾತ್ರಗಳನ್ನು ಸುಲಭವಾಗಿ ಮಾಡುತ್ತೇವೆ ಎನ್ನುವುದಕ್ಕೆ ಕಮಲಾ ಪಾತ್ರ ಸಾಕ್ಷಿ ಎಂದರು.

ಮೊದಲ ಬಾರಿಗೆ ಜನ ಸಾಗರ ನೋಡಿ ಕಂಗಾಲಾಗಿದ್ದೆ
ಇನ್ನು 'ಕಾಂತಾರ' ಚಿತ್ರದ ಬಗ್ಗೆ ಮಾತನಾಡಿದ ಅವರು, ಕಾಂತಾರದಲ್ಲಿ ಮೊದಲ ದೃಶ್ಯವೇ ರಿಷಬ್ ಸರ್ ಅವರ ಕೆನ್ನೆಗೆ ಭಾರಿಸುವವುದು. ಆ ಕ್ಷಣವನ್ನು ಈಗ ನೆನಪು ಮಾಡಿಕೊಂಡರೂ ಮೈ ಜುಮ್ ಎನ್ನುತ್ತದೆ. ಮೊದಲ ಬಾರಿಗೆ ಶೂಟಿಂಗ್ ವೇಳೆ ನೆರೆದಿದ್ದ ಜನ ಸಾಗರ ನೋಡಿ ಕಂಗಾಲಾಗಿದ್ದೆ. ಮೊದಲೆ ನಮಗೆ ವರ್ಕ್ಶಾಪ್ಗಳನ್ನು ಮಾಡಿ, ಆ ಪಾತ್ರವನ್ನು ಸ್ವೀಕರಿಸುವಂತೆ ನಮ್ಮನ್ನು ತಯಾರಿ ಮಾಡಿದ್ದರು, ಆ ಕ್ಷಣಕ್ಕೆ ನಟಿಸುವಾಗ ಭಯವಾಗಿತ್ತು. ಚಿತ್ರ ಈಗ ನಿರೀಕ್ಷೆಗೂ ಮೀರಿ ಹಿಟ್ ಆಗಿದೆ ತುಂಬಾ ಖುಷಿ ಇದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಕಾಂತಾರ ಅಬ್ಬರ: ಎರಡನೇ ಶನಿವಾರದ ಮುಂಬೈ ಬುಕ್ಕಿಂಗ್ಸ್ ಅಸಾಮಾನ್ಯ, ಹಿಂದೆಂದೂ ಕಂಡಿಲ್ಲ!


Click it and Unblock the Notifications











