ನನ್ನ ಆಸ್ತಿಯನ್ನು ತಂಗಿಯರಿಗೆ ಹಂಚುವಂತೆ ಹೇಳಿದ್ದೆ: ಪಾರುಲ್ ಯಾದವ್
'ಪ್ಯಾರ್ ಗೇ ಆಗ್ಬುಟ್ಟೈತೆ' ಹಾಡಿಗೆ ಕುಣಿದು ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಪಾರುಲ್ ಯಾದವ್ ಕೋವಿಡ್ ಸಮಯದಲ್ಲಿ ತಾವನುಭವಿಸಿದ ಆತಂಕಗಳ ಬಗ್ಗೆ ಮತ್ತು ಅದರಿಂದ ಹೊರ ಬಂದ ರೀತಿಯ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ.
''ಮೊದಲ ಲಾಕ್ಡೌನ್ನಲ್ಲಿ ನಾನು ಆರಾಮವಾಗಿ ಇದ್ದೆ. ಈ ಕಷ್ಟದ ಪರಿಸ್ಥಿತಿಯಿಂದ ಬಹುಬೇಗನೆ ನಾವು ಹೊರಬರುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ ಕೊರೊನಾ ಎರಡನೇ ಅಲೆ ಅಪ್ಪಳಿಸಿದಾಗ ನಿಜವಾಗಿಯೂ ಬಹಳ ಭಯ ಭೀತಳಾಗಿದ್ದೆ. ನನ್ನ ಹತ್ತಿರದ ಸ್ನೇಹಿತರು, ಅವರ ಕುಟುಂಬದವರೇ ನಿಧನ ಹೊಂದಿದರು. ಇದು ನನ್ನನ್ನು ಬಹಳ ಭೀತಿಗೆ ಒಳಪಡಿಸಿತ್ತು'' ಎಂದಿದ್ದಾರೆ ಪಾರುಲ್.
''ನನಗೆ ಕೋವಿಡ್ ಇರುವುದು ಏಪ್ರಿಲ್ 22ರಂದು ಗೊತ್ತಾಯಿತು. ನನ್ನ ಮನೆಯಲ್ಲಿ ಕೆಲಸದ ಮಹಿಳೆಯನ್ನೂ ಸೇರಿ ಏಳು ಜನಕ್ಕೆ ಕೋವಿಡ್ ಆಗಿತ್ತು. ನನ್ನ ತಾಯಿ ಎರಡು ಬಾರಿ ಕ್ಯಾನ್ಸರ್ ಗೆದ್ದು ಬಂದಿದ್ದಾರೆ ಅವರಿಗೂ ಕೊರೊನಾ ಆಗಿತ್ತು. ಆದರೆ ನನಗೆ ತೀವ್ರವಾಗಿ ಪರಿಣಾಮ ಬೀರಿತು'' ಎಂದಿದ್ದಾರೆ ಪಾರುಲ್.

ನನಗೆ ಎಲ್ಲ ರೋಗಲಕ್ಷಣಗಳೂ ಇತ್ತು: ಪಾರುಲ್
''ನನಗೆ ಎಲ್ಲ ರೋಗ ಲಕ್ಷಣಗಳು ಒಟ್ಟಿಗೆ ಕಾಣಿಸಿಕೊಂಡಿದ್ದವು. ವಾಸನೆ, ರುಚಿ ಗೊತ್ತಾಗುತ್ತಿರಲಿಲ್ಲ. 12 ದಿನ ವಿಪರೀತ ಜ್ವರದಿಂದ ಬಳಲಿದೆ. ವಾಂತಿಯಾಗುತ್ತಿತ್ತು. ತಲೆ ತಿರುಗುತ್ತಿತ್ತು. ಎಲ್ಲ ಲಕ್ಷಣಗಳೂ ಇದ್ದವು. ಇದು ನನಗೆ ಬಹಳ ಆತಂಕ ತಂದಿತು'' ಎಂದು ನೆನಪು ಮಾಡಿಕೊಂಡಿದ್ದಾರೆ ಪಾರುಲ್.

ನನ್ನ ಆಸ್ತಿ ಸಹೋದರಿಯರಿಗೆ ಹಂಚಿಬಿಡಿ ಎಂದಿದ್ದೆ: ಪಾರುಲ್
''ನಾನು ಬಹಳ ಹೆದರಿದ್ದೆ ಹಾಗಾಗಿ ನನ್ನ ಆಪ್ತರು ಕೆಲವರಿಗೆ ಇ-ಮೇಲ್ ಮಾಡಿ, ನಾನು ಸತ್ತರೆ ನನ್ನ ಆಸ್ತಿಯನ್ನು ನನ್ನ ಸಹೋದರಿಯರಿಗೆ ಹಂಚಿ ಬಿಡಿ ಎಂದು ಹೇಳಿದ್ದೆ. ಇದನ್ನು ಓದಿ ನನ್ನ ಸಹೋದರಿಯರು ಬಹಳ ಗಾಬರಿಯಾಗಿದ್ದರು. ನನಗೆ ಕರೆ ಮಾಡಿ ಅಳಲು ಪ್ರಾರಂಭಿಸಿದರು. ನಾನೆಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ ಎಂದು ಈಗ ನಗು ಬರುತ್ತದೆ. ಆದರೆ ನಿಜವಾಗಿಯೂ ಆಗ ನಾನು ಕುಗ್ಗಿಹೋಗಿದ್ದೆ.'' ಎಂದು ನೆನಪಿಸಿಕೊಂಡಿದ್ದಾರೆ ನಟಿ ಪಾರುಲ್.

''ಆ ಮಧ್ಯರಾತ್ರಿ ನಾನು ಬದುಕುವುದಿಲ್ಲ ಎಂದುಕೊಂಡಿದ್ದೆ''
''ಒಂದು ದಿನ ಮಧ್ಯರಾತ್ರಿ ಜ್ವರ ವಿಪರೀತ ಏರಿಬಿಟ್ಟಿತ್ತು. ಮೈ-ಕೈ ಎಲ್ಲ ನಡುಕ. ಏನು ಮಾಡಿದರೂ ಜ್ವರ್ ಕಡಿಮೆ ಆಗಲಿಲ್ಲ. ವೈದ್ಯರಿಗೆ ಕರೆ ಮಾಡಿದರೆ ನೀವು ಧೈರ್ಯವಾಗಿದ್ದರಷ್ಟೆ ಬದುಕುತ್ತೀರಿ ಎಂದು ಬಿಟ್ಟರು. ನಾನು ಆ ರಾತ್ರಿಯೆಲ್ಲ ಏನೇನೋ ಪ್ರಯತ್ನ ಮಾಡಿದೆ. ಟವೆಲ್ ಒದ್ದೆ ಮಾಡಿ ಹೊಚ್ಚಿಕೊಂಡೆ ಕೊನೆಗೆ ಮಾರನೆಯ ದಿನ ನಾನು ಜೀವಂತವಾಗಿದ್ದೆ. ಆಗ ನನಗೆ ಧೈರ್ಯ ಬಂತು ನಾನು ಏನನ್ನಾದರೂ ಗೆಲ್ಲಬಹುದು ಎಂದು'' ಅಂದು ನಡೆದ ಘಟನೆ ಬಗ್ಗೆ ಹೇಳಿದ್ದಾರೆ ಪಾರುಲ್.

ಆರೋಗ್ಯವಂತಳಾದ ನನ್ನನ್ನೇ ಕೊರೊನಾ ಕಾಡಿಸಿಬಿಟ್ಟಿತು: ಪಾರುಲ್
ನಾನು ಸಾಮಾನ್ಯವಾಗಿ ಆರೋಗ್ಯವಾಗಿರುತ್ತೇನೆ. ಜಿಮ್ ಮಾಡುತ್ತೇನೆ, ಒಳ್ಳೆಯ ಆಹಾರ ಸೇವಿಸುತ್ತೇನೆ, ದುಶ್ಚಟಗಳಿಂದ ದೂರ ಇರುತ್ತೇನೆ ಆದರೂ ನನ್ನನ್ನು ಕೊರೊನಾ ವಿಪರೀತ ಕಾಡಿಸಿತ್ತು. ಆದರೆ ಕೊರೊನಾ ನಂತರ ನಾನು ಜೀವನವನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದೇನೆ. ಮುಂಚೆ ಎಲ್ಲ ಸಿಗ್ನಲ್ನಲ್ಲಿ ನಿಂತಾಗ ಕಿರಿ-ಕಿರಿ ಅನುಭವಿಸುತ್ತಿದ್ದೆ. ಆದರೆ ಈಗ ಸಿಗ್ನಲ್ ನಲ್ಲಿ ಗಾಡಿ ನಿಂತರೆ ಖುಷಿಯಿಂದ ಸುತ್ತ-ಮುತ್ತ ಇರುವ ಜನರನ್ನು ನೋಡುತ್ತೇನೆ, ಸಂತೋಷಿಸುತ್ತೇನೆ. ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ'' ಎಂದಿದ್ದಾರೆ ಪಾರುಲ್ ಯಾದವ್.


Click it and Unblock the Notifications











