ಮೂರಕ್ಷರದ ಮದುವೆ ಬಗ್ಗೆ ಶ್ರುತಿ ನಾಲ್ಕು ಮಾತು
ಕನ್ನಡ ಚಿತ್ರರಂಗದ ಅಭಿನೇತ್ರಿ ಶ್ರುತಿ ಅವರು ನೂತನ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ. ಅವರ ಮದುವೆ ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಜತೆ ಗುರುವಾರ (ಜೂ.6) ಕೊಲ್ಲೂರಿನಲ್ಲಿ ನೆರವೇರಿದ್ದು ಗೊತ್ತೇ ಇದೆ.
ಈ ಮದುವೆ ಶ್ರುತಿ ಅವರಿಗೂ ಹಾಗೂ ಅವರ ಪತಿ ಚಂದ್ರಶೇಖರ್ ಅವರಿಗೂ ಎರಡನೇ ಮದುವೆ. ಈಗಾಗಲೇ ಇಬ್ಬರಿಗೂ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಮೂರಕ್ಷರದ ಮದುವೆ ಬಗ್ಗೆ ಶ್ರುತಿ ಅವರು ನಾಲ್ಕು ಮಾತುಗಳನ್ನು ಕೇಳಿ.
ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಚಂದ್ರಶೇಖರ್ ಅವರು ತಮಗೆ ಸತತವಾಗಿ ಐದು ವರ್ಷಗಳಿಂದ ಪರಿಚಯ. ತಮ್ಮ ಮಗಳು ನನಗಿಂತಲೂ ಹೆಚ್ಚಾಗಿ ಅವರೊಂದಿಗೆ ಬೆರೆಯುತ್ತಾರೆ. ನಮ್ಮ ಮಗಳೇ ನಮ್ಮಿಬ್ಬರ ಮದುವೆ ಫೋಟೋಗಳನ್ನು ಮಾಧ್ಯಮಗಳಿಗೆ ಕಳುಹಿಸಿದ್ದು.ಚಂದ್ರಶೇಖರ್ ಅವರು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನನ್ನ ಭಾವನೆಗಳನ್ನು ಹಾಗೂ ಭಾವಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಅವರಿಗಿದೆ. ನಮ್ಮ ವಿವಾಹ ನನ್ನ ಮಗಳ ಹುಟ್ಟುಹಬ್ಬದ ದಿನ ನೆರವೇರಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ನನ್ನ ವಿವಾಹ ಮಗಳ ಜನ್ಮ ದಿನದ ಕೊಡುಗೆ.
ಮದುವೆಯಾಗಬೇಕೆಂದು ಬಹಳಷ್ಟು ದಿನಗಳಿಂದ ಅಂದುಕೊಂಡಿದ್ದೆವು. ಆದರೆ ಸೂಕ್ತ ಸಮಯ ಕೂಡಿ ಬಂದಿರಲಿಲ್ಲ. ಎಲ್ಲಾ ಅವನ ಇಚ್ಛೆ. ನನ್ನ ಮತ್ತು ಅವರ ಭೇಟಿ ಬಹಳ ಸಣ್ಣ ವಯಸ್ಸಿನಲ್ಲೇ ಆಗಿದೆ. ಆದರೆ ತಡವಾಗಿ ಈ ವಿಷಯ ಗೊತ್ತಾಯಿತು.
ಇಬ್ಬರೂ ಒಂದೇ ಸ್ಕೂಲಲ್ಲಿ ಹೊಳೆನರಸೀಪುರದಲ್ಲಿ ಓದಿದ್ದು. ದೇವರ ನಿರ್ಧಾರ ಯಾರಿಗೆ ಗೊತ್ತು. ಅವನ ಇಚ್ಛೇಯಂತೆ ನಾವಿಬ್ಬರೂ ಒಂದಾಗಿದ್ದೇವೆ. ಮದುವೆಗೆ ತುಂಬಾ ಆತ್ಮೀಯರನ್ನು ಮಾತ್ರ ಆಹ್ವಾನಿಸಿದ್ದೆವು. ಇನ್ನು ಮುಂದೆಯೂ ತಮ್ಮ ಕಲಾಸೇವೆ ಮುಂದುವರಿಯಲಿದೆ.
ಸಾಂಸಾರಿಕ ಬದುಕಿನ ಜೊತೆಗೆ ಸಮಾಜಸೇವೆಯೂ ಮುಂದುವರಿಯಲಿದೆ. ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಬರುತ್ತವೆ. ಅವನ್ನು ಧೈರ್ಯವಾಗಿ ಎದುರಿಸಬೇಕು. ತಮ್ಮ ಸಮಸ್ಯೆ ಏನು ಎಂಬುದು ಎಲ್ಲರಿಗೂ ಗೊತ್ತು. ಕಲಾವಿದರೂ ಎಲ್ಲರಂತೆ ಮನುಷ್ಯರೇ ಅಲ್ಲವೇ. ಇದೆಲ್ಲಾ ಎಲ್ಲರ ಜೀವನದಲ್ಲೂ ಇದ್ದದ್ದೇ.
ಇನ್ನು ಮುಂದೆಯೂ ಅಭಿಮಾನಿಗಳ ಆಶೀರ್ವಾದ, ಅವರ ಪ್ರೀತಿ, ಅನುರಾಗ ಇದೇ ರೀತಿ ಇರಲಿ. ಇನ್ನೂ ಹೆಚ್ಚುಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತೇನೆ. ಪ್ರಸ್ತುತ ತಮ್ಮ ಕೈಯಲ್ಲಿ ಎರಡು ಕನ್ನಡ, ಒಂದು ಮಲಯಾಳಂ, ಇನ್ನೊಂದು ತಮಿಳು ಚಿತ್ರಗಳಿವೆ. ಒಂದು ಕನ್ನಡ ಚಿತ್ರವನ್ನೂ ನಿರ್ಮಿಸಬೇಕೆಂದಿದ್ದೇನೆ ಎಂದು ಶ್ರುತಿ ಹೇಳಿದ್ದಾರೆ.


Click it and Unblock the Notifications












