ಬ್ರೇಕ್ ನಿರೀಕ್ಷೆಯಲ್ಲಿ ಅಮೂಲ್ ಬೇಬಿ ಅಮೂಲ್ಯ
'ಮನಸಾಲಜಿ' ಚಿತ್ರದ ಬಳಿಕ ಕಾಣೆಯಾಗಿದ್ದ ಚಿಲಿಪಿಲಿ ಬೆಡಗಿ ಅಮೂಲ್ಯ ಎರಡನೇ ಇನ್ನಿಂಗ್ಸ್ ಗೆ ಸಜ್ಜಾಗಿದ್ದಾರೆ. ಈ ಬಾರಿ ಅವರು 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ನಾಯಕ ನಟರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ ಇದೊಂದು ಸವಾಲಿನ ಚಿತ್ರ.
ಏಕೆಂದರೆ ಅವರ 'ಆಟೋರಾಜ' ಚಿತ್ರದ ಮೀಟರ್ ನಿರೀಕ್ಷಿಸಿದ ಮಟ್ಟದಲ್ಲಿ ಓಡಿಲ್ಲ. ಈಗ ಅವರೂ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಇಷ್ಟಕ್ಕೂ ಈ ಚಿತ್ರಕ್ಕೂ ತೆಲುಗಿನ 'ಶ್ರಾವಣಿ ಸುಬ್ರಹ್ಮಣ್ಯಂ' ಚಿತ್ರಕ್ಕೂ ಸಂಬಂಧವಿಲ್ಲವಂತೆ. ಹೆಸರಷ್ಟೇ ರಿಮೇಕ್, ಕಥೆ ಸ್ವಮೇಕ್ ಎನ್ನುತ್ತದೆ ಚಿತ್ರತಂಡ.
'ಶಿಶಿರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಂಜು ಸ್ವರಾಜ್ ಈ ಚಿತ್ರದ ನಿರ್ದೇಶಕರು. ಈಗಾಗಲೆ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಜುಲೈ ತಿಂಗಳಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದೊಂದು ನವಿರಾದ ಪ್ರೇಮಕಥೆ ಎನ್ನುತ್ತಾರೆ ಮಂಜು ಸ್ವರಾಜ್. (ಶ್ರಾವಣಿ ಸುಬ್ರಹ್ಮಣ್ಯ ಟೀಸರ್ ನೋಡಿ)ಚಿತ್ರದಲ್ಲಿ ಗಣೇಶ್ ಅವರದು ಆರ್ಕೆಸ್ಟ್ರಾದಲ್ಲಿ ಹಾಡುವ ಹುಡುಗನ ಪಾತ್ರ. ಹೆಸರು ಬಾಲಸುಬ್ರಹ್ಮಣ್ಯಂ. ಇಳಯರಾಜಾರಂತಹ ಮಹಾನ್ ಸಾಧಕರನ್ನು ನೆನೆಯುತ್ತಲೇ ತಾನೂ ಅಷ್ಟು ಎತ್ತರಕ್ಕೆ ಏರಬೇಕೆಂದು ಬಯಸುತ್ತಿರುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ತೆರೆಯ ಮೇಲೆಯೇ ನೋಡಿ ಆನಂದಿಸಿ ಎನ್ನುತ್ತದೆ ಚಿತ್ರತಂಡ.
ಸುರೇಶ್ ನಿರ್ಮಿಸುತ್ತಿರುವ ಈ ಚಿತ್ರದ ಸಂಗೀತ ನಿರ್ದೇಶಕರು ವಿ ಹರಿಕೃಷ್ಣ. 'ಮನಸಾಲಜಿ' ಚಿತ್ರದ ಬಳಿಕ ನಡೆದ ಕೆಲವು ಅಹಿತಕರ ಘಟನೆಗಳಿಂದ ನೊಂದಿದ್ದ ಅಮೂಲ್ಯ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಆಗ ಆ ರೀತಿ ಮನನೊಂದು ಹೇಳಿದ್ದೆ. ಇಷ್ಟಕ್ಕೂ ಆ ಮಾತನ್ನು ನಾನು ಹೇಳಿರಲಿಲ್ಲ. ನಮ್ಮ ಅಣ್ಣ ಹೇಳಿದ್ದರು ಎನ್ನುತ್ತಾರೆ. (ಏಜೆನ್ಸೀಸ್)


Click it and Unblock the Notifications












