ಶಿವಣ್ಣ 'ಅಂದರ್ ಬಾಹರ್' ಚಿತ್ರಕ್ಕೆ ಕತ್ತರಿ ಪ್ರಯೋಗ
ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ 'ಅಂದರ್ ಬಾಹರ್' ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಚಿತ್ರ ಎರಡು ಗಂಟೆ ನಲವತ್ತು ನಿಮಿಷಗಳಷ್ಟು ಸುದೀರ್ಘವಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ ಹದಿನೆಂಟು ನಿಮಿಷಗಳಷ್ಟು ಮೊಟಕುಗೊಳಿಸಲಾಗಿದೆ ಎಂದಿದ್ದಾರೆ ನಿರ್ದೇಶಕರು.
ಈಗಾಗಲೆ ಹೊಸ ಆವೃತ್ತಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ನಿರ್ದೇಶಕ ಫಣೀಶ್ ಎಸ್ ರಾಮನಾಥಪುರ ಅವರು ಸಂಕಲನಕಾರ ಜೋ.ನಿ.ಹರ್ಷ ಅವರೊಂದಿಗೆ ಚರ್ಚಿಸಿ ಅನಗತ್ಯ ಎನ್ನಿಸುವ ಕೆಲವು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದಾರೆ. ಆದರೆ ಚಿತ್ರದ ಒಟ್ಟಾರೆ ಆಶಯಕ್ಕೆ ಎಲ್ಲೂ ಧಕೆಯಾಗಿಲ್ಲ ಎಂದಿದ್ದಾರೆ.
'ಅಂದರ್ ಬಾಹರ್' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಚಿತ್ರ ಸುದೀರ್ಘವಾಯಿತು ಎಂಬ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಚಿತ್ರದಲ್ಲಿ ಎಲ್ಲ ಸನ್ನಿವೇಶಗಳು ಒಂದಕ್ಕೊಂದು ಪೂರಕವಾಗಿದ್ದವು. ಯಾವುದನ್ನು ತೆಗೆಯಬೇಕು ಎಂಬುದು ನಿಜಕ್ಕೂ ಸವಾಲಿನ ಪ್ರಶ್ನೆಯಾಯಿತು ಎಂದಿದ್ದಾರೆ ಫಣೀಶ್.ಅಂದರ್ ಬಾಹರ್ ಚಿತ್ರದಲ್ಲಿ ಭೂಗತದ ನೆರಳಿದೆ. ಆದರೆ ಎಲ್ಲೂ ರಕ್ತಪಾತ ನಡೆಯಲ್ಲ. ಇದೇ ಸಬ್ಜೆಕ್ಟ್ ಮತ್ತಿನ್ಯಾರ ಕೈಗಾದರೂ ಸಿಕ್ಕಿದ್ದರೆ ಮತ್ತೊಂದು ಲಾಂಗು ಮಚ್ಚಿನ ಚಿತ್ರವಾಗುತ್ತಿತ್ತು. ಆದರೆ ನಿರ್ದೇಶಕ ಫಣೀಶ್ ಅವರು ಬಹಳ ಜಾಣ್ಮೆಯಿಂದ ಚಿತ್ರವನ್ನು ತೆರೆಗೆ ತಂದಿದ್ದಾರೆ. (ಅಂದರ್ ಬಾಹರ್ ಚಿತ್ರ ವಿಮರ್ಶೆ)
ಚಿತ್ರವನ್ನು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ನಿರಾಸೆಯಾಗದಂತೆ, ಕಥೆಗೆ ಮೋಸ ಆಗದಂತೆ ತೆರೆಗೆ ತಂದಿದ್ದೇವೆ ಎನ್ನುತ್ತಾರೆ ನಿರ್ದೇಶಕ ಫಣೀಶ್. ಚಿತ್ರದ ನಾಯಕಿ ಪಾರ್ವತಿ ಮೆನನ್. ತಾರಾಬಳಗದಲ್ಲಿ ಶಶಿಕುಮಾರ್, ಶ್ರೀನಾಥ್, ಅರುಂಧತಿ ನಾಗ್, ಸೃಜನ್ ಲೋಕೇಶ್, ರಘು ರಾಮ್, ಜೋಶ್ವಾ ಮುಂತಾದವರಿದ್ದಾರೆ. (ಏಜೆನ್ಸೀಸ್)


Click it and Unblock the Notifications












