ಕನ್ನಡದ 'ಆಚಾರ್ಯ ಅರೆಸ್ಟ್' ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್
'ದಂಡುಪಾಳ್ಯ' ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ರಾಜು ಕಂಚಿ ಮಠದ ಸ್ವಾಮೀಜಿ ಕುರಿತ ಸಿನಿಮಾ ಮಾಡುತ್ತಿರುವ ಬಗ್ಗೆ ನಿನ್ನೆಯಷ್ಟೇ 'ಫಿಲ್ಮಿ ಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಈಗ ಆ ಸ್ವಾಮೀಜಿಯ ಪಾತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ನಟಿಸುವುದು ಫಿಕ್ಸ್ ಆಗಿದೆ ಎಂಬುದು ಖಾಸ್ ಖಬರ್.
ಅನುಪಮ್ ಖೇರ್ ಕನ್ನಡಕ್ಕೆ ಬರುತ್ತಿರುವ ವಿಷಯವನ್ನು ಸ್ವತಃ ನಿರ್ದೇಶಕ ಶ್ರೀನಿವಾಸ್ ರಾಜು 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಸ್ಪಷ್ಟ ಪಡಿಸಿದ್ದಾರೆ. 'ಆಚಾರ್ಯ ಅರೆಸ್ಟ್' ಎನ್ನುವ ಟೈಟಲ್ ನಲ್ಲಿ ಬರುತ್ತಿರುವ ಈ ಸಿನಿಮಾದ ಬಗೆಗಿನ ಕುತೂಹಲಕಾರಿ ವಿಷಯಗಳು ಇಲ್ಲಿದೆ ಓದಿ...

ಶ್ರೀನಿವಾಸ್ ರಾಜು ಹೇಳಿಕೆ
''ಬಾಲಿವುಡ್ ನಟ ಅನುಪಮ್ ಖೇರ್ ಕನ್ನಡಕ್ಕೆ ಬರುವುದು ನಿಜ. ಅವರು ನಮ್ಮ ಮುಂದಿನ ಸಿನಿಮಾ 'ಆಚಾರ್ಯ ಅರೆಸ್ಟ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ಶ್ರೀನಿವಾಸ್ ರಾಜು ತಿಳಿಸಿದರು.

ರಿಯಲ್ ಸ್ಟೋರಿ
ಕಂಚಿ ಮಠದ ಸ್ವಾಮೀಜಿ ಶಂಕರಾಚಾರ್ಯ ಜಯೇಂದ್ರ ಅವರ ಕಥೆ ಇಟ್ಟುಕೊಂಡು ರಿಯಲ್ ಸ್ಟೋರಿಯ ಮೇಲೆ ನಿರ್ದೇಶಕ ಶ್ರೀನಿವಾಸ್ ರಾಜು ಸಿನಿಮಾ ಮಾಡಲಿದ್ದಾರೆ. 'ಆನ್ ಇನ್ಸಲ್ಟ್ ಟು ಎವೆರಿ ಹಿಂದೂ' ಎಂಬ ಟ್ಯಾಗ್ ಲೈನ್ ಇರುವ ಈ ಚಿತ್ರ ಕನ್ನಡ ಮತ್ತು ತಮಿಳು.. ಎರಡು ಭಾಷೆಯಲ್ಲಿ ನಿರ್ಮಾಣವಾಗಲಿದೆ.

ದಕ್ಷಿಣ ಭಾರತಕ್ಕೆ ಎಂಟ್ರಿ
ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಅನುಪಮ್ ಖೇರ್ ಸ್ವಾಮೀಜಿ ಶಂಕರಾಚಾರ್ಯ ಜಯೇಂದ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಇದು ಅವರ ದಕ್ಷಿಣ ಭಾರತದ ಮೊದಲ ಸಿನಿಮಾ.

ಅಕ್ಟೋಬರ್ ನಲ್ಲಿ ಶುರು
'ದಂಡುಪಾಳ್ಯ 2' ಮತ್ತು 'ದಂಡುಪಾಳ್ಯ 3' ಸಿನಿಮಾದಲ್ಲಿ ಬಿಜಿ ಇರುವ ಶ್ರೀನಿವಾಸ್ ರಾಜು ಆ ಚಿತ್ರಗಳ ಬಳಿಕ ಅಂದರೆ ಅಕ್ಟೋಬರ್ ವೇಳೆಗೆ 'ಆಚಾರ್ಯ ಅರೆಸ್ಟ್' ಚಿತ್ರವನ್ನು ಶುರು ಮಾಡಲಿದ್ದಾಂತೆ.

ಉಳಿದ ಪಾತ್ರಗಳು
'ಆಚಾರ್ಯ ಅರೆಸ್ಟ್' ಚಿತ್ರ ಶ್ರೀನಿವಾಸ್ ರಾಜು ಅವರ ಬ್ಯಾನರ್ ನಲ್ಲಿಯೇ ನಿರ್ಮಾಣವಾಗಲಿದೆಯಂತೆ. ಸದ್ಯಕ್ಕೆ ಚಿತ್ರದಲ್ಲಿ ನಟಿಸುವುದಕ್ಕೆ ಅನುಪಮ್ ಖೇರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಉಳಿದ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಯುತ್ತದೆ.

ಏನಿದು ಘಟನೆ..?
2004ರಲ್ಲಿ ಕಂಚಿ ಮಠದ ವ್ಯವಸ್ಥಾಪಕ ಶಂಕರರಾಮನ್ ಅವರ ಕೊಲೆ ಮತ್ತು ಆ ನಂತರದ ಸ್ವಾಮೀಜಿ ಬಂಧನ ಮತ್ತಿತರ ಘಟನೆಗಳ ಸುತ್ತ ಈ ಚಿತ್ರ ಸುತ್ತಲಿದೆ. ಈ ಘಟನೆಗಳು ಹೆಚ್ಚು ಕುತೂಹಲ ತರಿಸುವ ರೀತಿ ಇದ್ದು, ಅದಕ್ಕೆ ಸಿನಿಮಾ ಮಾಡುವ ನಿರ್ಧಾರಕ್ಕೆ ಶ್ರೀನಿವಾಸ ರಾಜು ಬಂದರಂತೆ.


Click it and Unblock the Notifications











