ಅದ್ದೂರಿ ಅರ್ಜುನ್ ಮುಂದಿನ ಚಿತ್ರಕ್ಕೆ ದುನಿಯಾ ವಿಜಯ್
ಅಂಬಾರಿ ಸೂಪರ್ ಹಿಟ್ ಆದ ನಂತರ ಅದ್ದೂರಿ ಮೂಲಕ ಪ್ರೇಕ್ಷಕರೆದುರು ಬರಲು ಬರೋಬ್ಬರಿ ಎರಡು ವರ್ಷಗಳ ಅಂತರ ತೆಗೆದುಕೊಂಡಿದ್ದರು ಅರ್ಜುನ್. ಆದರೆ ಈಗ ಹಾಗಾಗಿಲ್ಲ, ಅದ್ದೂರಿ 50 ದಿನ ಪೂರೈಸಿ ಮುನ್ನುಗ್ಗುತ್ತಿದ್ದಂತೆ ಇತ್ತ ನಿರ್ದೇಶಕ ಅರ್ಜುನ್ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಅರ್ಜುನ್ ಚಿತ್ರದ ನಿರ್ಮಾಣವನ್ನು ವಹಿಸಿಕೊಂಡಿರುವವರು ನಿರ್ಮಾಪಕ ಜಯಣ್ಣ.
ಈ ಬಗ್ಗೆ ಮಾತುಕತೆ ಮುಗಿದಿದ್ದು ಸದ್ಯವೇ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸಲು ಕುಳಿತುಕೊಳ್ಳಲಿದ್ದಾರೆ ಅರ್ಜುನ್. ಸದ್ಯ ರಜನಿಕಾಂತ್ ಚಿತ್ರ ಮುಗಿಸಿ ಚಕ್ರವರ್ತಿ ಚಿತ್ರೀಕರಣಕ್ಕೆ ಸಿದ್ಧರಾಗಿರುವ ದುನಿಯಾ ವಿಜಯ್, ಆನಂತರ ಅರ್ಜುನ್ ಅವರ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚಿಗೆ ತಮ್ಮ ಅದ್ದೂರಿ ಚಿತ್ರದ ಪ್ರಚಾರಕಾರ್ಯದಲ್ಲೇ ಮುಳುಗಿ ಹೋಗಿದ್ದ ಅರ್ಜುನ್, ಈಗಲೂ ಅದರಿಂದ ಈಚೆ ಬಂದಿಲ್ಲ. ಅದು ಗಾಂಧಿನಗರದ ಮೆಚ್ಚುಗೆ ಗಳಿಸಿದೆ.
ಅರ್ಜುನ್ ನಿರ್ದೇಶನದ ಅದ್ದೂರಿ ಚಿತ್ರ ಅಂದುಕೊಂಡಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. 50 ದಿನಗಳನ್ನು ಪೂರೈಸಿ ಇನ್ನೂ ಜನಭರಿತ ಪ್ರದರ್ಶನ ದಾಖಲಿಸುತ್ತಿದೆ. ನಿರ್ದೇಶಕ ಅರ್ಜುನ್ ಈ ಚಿತ್ರದ ಮೂಲಕ ಹೆಚ್ಚು ಎತ್ತರಕ್ಕೇರಿದ್ದರೆ ನವನಟ ಧ್ರುವ ಸರ್ಜಾ ಕನ್ನಡದ ಹೊಸ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆ. ಇನ್ನು ನಟಿ ರಾಧಿಕಾ ಪಂಡಿತ್ ಅವರಿಗೆ ಅದ್ದೂರಿ ಮೂಲಕ ಎಕ್ಸ್ ಟ್ರಾ ಬೋನಸ್ ಸಿಕ್ಕಂತಾಗಿದೆ.
ಅದಿರಲಿ, ಅಂಬಾರಿ ಹಾಗೂ ಅದ್ದೂರಿ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರ ಮನ ಗೆದ್ದಿರುವ ನಿರ್ದೇಶಕ ಅರ್ಜುನ್ ಅವರ ಮುಂದಿನ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುವಂತಾಗಿದೆ. ಅದು ಅರ್ಜುನ್ ಅವರಿಗೂ ಗೊತ್ತು. ಹೀಗಾಗಿ ತಡಮಾಡದೇ ಮುಂದಿನ ಚಿತ್ರಕ್ಕೆ ಅರ್ಜುನ್ ಸಿದ್ಧವಾಗಲಿ ಎಂಬುದು ಅರ್ಜುನ್ ಅಭಿಮಾನಿಗಳು ಹಾಗೂ ಗಾಂಧಿನಗರದ ಜನರ ಅಭಿಲಾಷೆಯಾಗಿತ್ತು. ಇದಕ್ಕೆ ತಕ್ಷಣ ಅರ್ಜುನ್ ಸ್ಪಂದಿಸಿದ್ದು ಈಗ ಎಲ್ಲರಿಗೂ ಸಂತೋಷದ ವಿಷಯ. (ಒನ್ ಇಂಡಿಯಾ ಕನ್ನಡ)


Click it and Unblock the Notifications












