ತಮಿಳಿಗೆ ಹೆಚ್ಚು ಹಣ, ರಾಜ್ಯಕ್ಕೆ ಕಡಿಮೆ; ಕೇಂದ್ರದ ವಿರುದ್ಧ ಎಪಿ ಅರ್ಜುನ್ ಬೇಸರ
2009ರಲ್ಲಿ ತೆರೆಕಂಡ ಯೋಗೇಶ್ ನಟನೆಯ ಅಂಬಾರಿ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಟ್ಟ ನಿರ್ದೇಶಕ ಎ ಪಿ ಅರ್ಜುನ್ ನಂತರ ಅದ್ಧೂರಿ ಎಂಬ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರನ್ನು ಲಾಂಚ್ ಮಾಡಿ ಗೆದ್ದರು. ನಂತರ ಡಾಲಿ ಧನಂಜಯ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಚಿತ್ರಗಳನ್ನು ನಿರ್ದೇಶಿಸಿದ ಎ ಪಿ ಅರ್ಜುನ್ ಸದ್ಯಕ್ಕೆ ಧೃವ ಸರ್ಜಾಗೆ ಮಾರ್ಟಿನ್ ಚಿತ್ರದ ಮೂಲಕ ಮತ್ತೊಮ್ಮೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಹೀಗೆ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮಾಡಿರುವ ನಿರ್ದೇಶಕ ಎ ಪಿ ಅರ್ಜುನ್ ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಹಾಗೂ ಕನ್ನಡ ಜನತೆಗೆ ಅನ್ಯಾಯವಾದಾಗ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತುವ ಕನ್ನಡದ ಕಲಾವಿದರ ಪೈಕಿ ಓರ್ವರು. ಇದೀಗ ಅದೇ ರೀತಿ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಸುದ್ದಿಯ ಕುರಿತು ಪ್ರತಿಕ್ರಿಯಿಸಿರುವ ಎಪಿ ಅರ್ಜುನ್ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ತಮಿಳುನಾಡಿಗೆ ಪ್ರಾದೇಶಿಕ ಭಾಷಾ ಅಭಿವೃದ್ಧಿಯ ಅನುದಾನದ ಅಡಿಯಲ್ಲಿ 50 ಕೋಟಿ, ಸಂಸ್ಕೃತಕ್ಕೆ 1200ಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ನೀಡುತ್ತಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ 8.39 ಕೋಟಿ ರೂಪಾಯಿಗಳನ್ನು ನೀಡಿ ತಾರತಮ್ಯ ಮಾಡಿದೆ, ಇದರಿಂದ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕನ್ನಡ ಪ್ರೇಮಿಗಳು ಹಾಗೂ ಕನ್ನಡದ ಪರ ಸಾಮಾಜಿಕ ಜಾಲತಾಣದಲ್ಲಿ ಹೋರಾಡುವವರು ಈ ಸುದ್ದಿಯನ್ನು ಕಂಡು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ನಿರ್ದೇಶಕ ಎಪಿ ಅರ್ಜುನ್ ಕೂಡ ಪ್ರತಿಕ್ರಿಯಿಸಿದ್ದಾರೆ. 'ಹೀಗೆ ಆದರೆ ಕೊನೆಗೊಂದಿನ ಏನೂ ಕೊಡಲ್ಲ' ಎಂದು ಬೇಸರದಿಂದ ಎಪಿ ಅರ್ಜುನ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











