ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹೊಸ ಕನ್ನಡ ಚಿತ್ರ ಪ್ರಕಟ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಸ್ವಲ್ಪ ಗ್ಯಾಪ್ ನ ಬಳಿಕ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಅಭಿಮನ್ಯು' ತ್ರಿಭಾಷಾ ಚಿತ್ರದ ಬಳಿಕ ಅವರು ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಈ ಚಿತ್ರ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.
ಸೈನೇಡ್, ಪೊಲೀಸ್ ಕ್ವಾರ್ಟರ್ಸ್, ಅಟ್ಟಹಾಸ ಚಿತ್ರಗಳನ್ನು ನಿರ್ದೇಶಿಸಿರುವ ಎಎಂಆರ್ ರಮೇಶ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ಗೇಮ್' ಎಂದು ಹೆಸರಿಡಲಾಗಿದೆ. 'ಅಟ್ಟಹಾಸ' ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರು ಡಿಜಿಪಿ ಕೆ ವಿಜಯ್ ಕುಮಾರ್ ಪಾತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದರು. [ಅಭಿಮನ್ಯು ಚಿತ್ರ ವಿಮರ್ಶೆ]
ದಂತಚೋರ, ಕಾಡುಗಳ್ಳ ಹಾಗೂ ನರಹಂತಕ ವೀರಪ್ಪನ್ ಅಟ್ಟಹಾಸಕ್ಕೆ ಅಂತ್ಯಹಾಡುವ 'ಆಪರೇಷನ್ ಕಕೂನ್'ನ ಮುಖ್ಯಸೂತ್ರಧಾರಿಯಾಗಿ ಅರ್ಜುನ್ ಚಿತ್ರದಲ್ಲಿ ಪಾತ್ರ ಪೋಷಣೆ ಮಾಡಿದ್ದಾರೆ. ಇದೀಗ ರಮೇಶ್ ಮತ್ತು ಅರ್ಜುನ್ ಮತ್ತೆ ಒಂದಾಗುತ್ತಿರುವುದು ವಿಶೇಷ.

ಸಂದೀಪ್ ಚೌಟ ಅವರ ಸಂಗೀತ ಇರುವ 'ಗೇಮ್' ಚಿತ್ರವು ಮರ್ಡರ್ ಮಿಸ್ಟರಿ ಕಥೆಯನ್ನು ಒಳಗೊಂಡಿದೆ. ಅರ್ಜುನ್ ಜೊತೆ ಶಾಮ್ ಮತ್ತೊಬ್ಬ ನಾಯಕರಾಗಿ ಕಾಣಿಸಲಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಅಜೆಂಡಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದಂತಹ ಆಟ ಆಡುತ್ತಿರುತ್ತಾರೆ ಎಂಬ ಕಥಾವಸ್ತುವನ್ನಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ.
ಮಕ್ಕಳ ಶಿಕ್ಷಣ ಹಕ್ಕುಗಳ ಪರ ಏಕಾಂಗಿಯಾಗಿ ಹೋರಾಡೋ ಅಭಿಮನ್ಯು ಶಿಕ್ಷಣ ವ್ಯವಸ್ಥೆಯನ್ನ ಬದಲಿಸೋಕೆ ಭೇಧಿಸುವ ಚಕ್ರವ್ಯೂಹವೇ ಅಭಿಮನ್ಯು ಚಿತ್ರದ ಕಥಾಹಂದರವಾಗಿತ್ತು. ಈ ಬಾರಿ ಮರ್ಡರ್ ಮಿಸ್ಟರಿ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ನೈಜ ಘಟನೆಗಳನ್ನು ಆಧಾರವಾಗಿ ತೆಗೆದುಕೊಂಡು ಅದಕ್ಕೊಂದು ಕಾಲ್ಪನಿಕ ಚೌಕಟ್ಟು ಹಾಕಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎನ್ನುತ್ತವೆ ಮೂಲಗಳು. ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಇನ್ನಷ್ಟೇ ಅಂತಿಮವಾಗಬೇಕಿದೆ. (ಏಜೆನ್ಸೀಸ್)


Click it and Unblock the Notifications











