ತುಳು ಚಿತ್ರರಂಗದ ಕಡೆ ಮುಖ ಮಾಡಿದ ಭಾರತಿ ವಿಷ್ಣುವರ್ಧನ್
ಸ್ಯಾಂಡಲ್ ವುಡ್ ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ ಹಾಗೂ ಸಿಂಧು ಲೋಕನಾಥ್ ರವರು ಈಗ ತುಳು ಸಿನಿಮಾ ರಂಗದಲ್ಲಿ ಬಣ್ಣ ಹಚ್ಚಲು ರೆಡಿ ಆಗುತ್ತಿದ್ದಾರೆ. ಸುರೇಶ್ ಭಂಡಾರಿ ನಿರ್ಮಾಣದ 'ಅಂಬರ್ ಕೇಟರರ್ಸ್' ಎಂಬ ಪಕ್ಕಾ ಕಾಮಿಡಿ ಚಿತ್ರಕ್ಕೆ ಇವರು ಬಣ್ಣ ಹಚ್ಚಲಿದ್ದಾರೆ.
"ಇದೊಂದು ಮರೆಯದ ಕ್ಷಣ. ಕರಾವಳಿಯಲ್ಲೂ ನನ್ನ ಅಭಿಮಾನಿಗಳಿದ್ದಾರೆ. ನನ್ನ ಯಜಮಾನ (ದಿವಂಗತ ವಿಷ್ಣುವರ್ಧನ್)ರನ್ನು ಇಷ್ಟಪಡುವವರೂ ಇದ್ದಾರೆ ಇದೀಗ ತುಳು ಚಿತ್ರದಲ್ಲೇ ನಟಿಸುವ ಅವಕಾಶ ದೊರಕಿದೆ. ಕಲಾವಿದರಿಗೆ ಭಾಷೆಯ ಹಂಗಿಲ್ಲ. ಅಲ್ಲಿ ನಟನೆಗೆ ಪ್ರಾಮುಖ್ಯತೆ. ಭಾಷೆ ಗೊತ್ತಿಲ್ಲದಿದ್ದರೂ ನಟನೆಯ ಮೂಲಕ ಪ್ರೇಕ್ಷಕರನ್ನು ಗೆಲ್ಲಬಹುದು'' ಎಂಬ ವಿಶ್ವಾಸವನ್ನು ಭಾರತಿ ವಿಷ್ಣುವರ್ಧನ್ ವ್ಯಕ್ತಪಡಿಸಿದ್ದಾರೆ.

ಹಾಗೆ ನೋಡಿದರೆ ಬಹುಭಾಷಾ ನಟ ಶರತ್ ಲೋಹಿತಾಶ್ವ ರವರಿಗೂ ತುಳು ಚಿತ್ರರಂಗ ಹೊಸದು. ತುಳುವಿನಲ್ಲೂ ನಟಿಸಬೇಕೆಂದು ನಿರ್ದೇಶಕ ಜಯಪ್ರಸಾದ್ ಕೇಳಿಕೊಂಡಾಗ ತಕ್ಷಣ ಒಪ್ಪಿಕೊಂಡಿದ್ದಾರೆ. ಕೋಸ್ಟಲ್ ವುಡ್ ಕೂಡ ಕೆಲವು ದಾಖಲೆಗಳನ್ನು ಸೃಷ್ಟಿ ಮಾಡುತ್ತಿರುವುದರಿಂದ ನಟಿಸುವಾಸೆ ಗರಿಗೆದರಿದೆ ಎಂದಿದ್ದಾರೆ ಶರತ್ ಲೋಹಿತಾಶ್ವ.
'ಅಂಬರ್ ಕೇಟರರ್ಸ್' ಸಿನಿಮಾ ಕುರಿತು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿ ವೇಳೆ ಮದುಮಗಳ ಧಿರಿಸಿನಲ್ಲಿ ಮುದ್ದಾಗಿಯೇ ಕಾಣುತ್ತಿದ್ದ ಸಿಂಧು ಲೋಕಾನಾಥ್, "ಭಾರತಿಯಮ್ಮ, ಶರತ್ ಸರ್ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ ತನಗೆ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ತುಳುವಿನಲ್ಲಿ, ಇದು ನನ್ನ ಸಂತೋಷಕ್ಕೆ ಕಾರಣವಾಗಿದೆ" ಎಂದು ಹೇಳಿದರು.


Click it and Unblock the Notifications











