ಮಾರ್ಚ್ 3ಕ್ಕೆ ಬೆಂಗಳೂರು ಸಿನಿಮೋತ್ಸವಕ್ಕೆ ಚಾಲನೆ: ದರ್ಶನ್ ಅತಿಥಿ, ಹಲವು ವಿಶೇಷತೆಗಳು
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ 13ನೇ ಬೆಂಗಳೂರು ಅಂತರಾಷ್ಟ್ರೀ ಸಿನಿಮಾ ಉತ್ಸವವು ಮಾರ್ಚ್ 03ರಂದು ಉದ್ಘಾಟನೆಗೊಳ್ಳಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಹಾಗೂ ಸಿನಿಮಾ ರಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಾರ್ಚ್ 03ರ ಸಂಜೆ 4:30 ಕ್ಕೆ ಕಾರ್ಯಕ್ರಮವು ಕೃಷಿ ವಿವಿ (ಜಿಕೆವಿಕೆ)ಯ ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಭವನದಲ್ಲಿ ಸಿನಿಮೋತ್ಸವದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದುದ್ಘಾಟನೆಯನ್ನು ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದ ವೀಶೇಷ ಆಹ್ವಾನಿತರಾಗಿ ನಟ ದರ್ಶನ್ ಭಾಗವಹಿಸಲಿದ್ದು, 'ಚಿತ್ರೋತ್ಸವ ಸ್ಮರಣ ಸಂಚಿಕೆ'ಯನ್ನು ಬಿಡುಗಡೆಗೊಳಿಸಲಿದ್ದಾರೆ. ಜೊತೆಗೆ ಪಂಚಭಾಷಾ ನಟಿ ಭಾರತಿ ವಿಷ್ಣುವರ್ಧನ್ ಸಹ ಹಾಜರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ ಪ್ರಿಯದರ್ಶನ್ ಭಾಗವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ.

ಮಾರ್ಚ್ 03 ರಿಂದ 10ನೇ ದಿನಾಂಕದ ವರೆಗೆ ಸಿನಿಮೋತ್ಸವ ನಡೆಯಲಿದ್ದು, 55 ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರ ವಿಭಾಗ, ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗ, ಕನ್ನಡ ಜನಪ್ರಿಯ ಮನೊರಂಜನಾ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆ ಸಹ ನಡೆಯಲಿದೆ. ಗೆದ್ದ ಸಿನಿಮಾಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ದೊರಕಲಿದೆ.
ಸಾಧನೆ ಸ್ಮರಣೆ ವಿಭಾಗದಲ್ಲಿ ನಟ ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ ಅವರ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ತುಳು ಚಿತ್ರರಂಗದ ಸುವರ್ಣೋತ್ಸವ ಅಂಗವಾಗಿ ಕೆಲವು ಕಾರ್ಯಕ್ರಮಗಳ ಜೊತೆಗೆ ಸಿನಿಮಾ ಪ್ರದರ್ಶನ ಇರಲಿದೆ.
'ಆಜಾದಿ ಕೀ ಅಮೃತ್ಮಹೋತ್ಸವ್' ಅಡಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಸವಿನೆನಪಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಿನಿಮಾಗಳ ಪ್ರದರ್ಶನ ಸಹ ನಡೆಯಲಿದೆ. ಇವುಗಳ ಜೊತೆಗೆ ಹಲವು ವಿದೇಶಿ ಸಿನಿಮಾ ನಿರ್ದೇಶಕರು, ತಂತ್ರಜ್ಞರ ಜೊತೆಗೆ ಸಂವಾದ ಸಹ ಇರಲಿದೆ.
ರಾಜಾಜಿನಗರದ ಒರಾಯಿನ್ ಮಾಲ್ನ 11 ಪರದೆಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಚಾಮರಾಜಪೇಟೆಯಲ್ಲಿನ ಕಲಾವಿದರ ಸಂಘದ ರಾಜ್ ಸಭಾಂಗಣ ಹಾಗೂ ಬನಶಂಕರಿಯ ಸುಚಿತ್ರಾ ಅಕಾಡೆಮಿಯಲ್ಲಿ ಸಿನಿಮಾಗಳ ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಸಿನಿಮಾ ಪ್ರದರ್ಶನ ಆಫ್ಲೈನ್ ಹಾಗೂ ಆನ್ಲೈನ್ ಎರಡೂ ಮಾದರಿಯಲ್ಲಿ ಇರಲಿದೆ.


Click it and Unblock the Notifications











