ಜಲೀಲ ಟು ಅಂಬಿ: ರೆಬೆಲ್ ಆಗಿ ಬಾಳಿದ 'ಪಾಳೇಗಾರ'ನ ಕಥೆ
'ರೆಬೆಲ್ ಸ್ಟಾರ್' ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಭಾರತೀಯ ಚಿತ್ರರಂಗ ಕಂಡ ಆಂಗ್ರಿ ಯಂಗ್ ಮ್ಯಾನ್. ಸಣ್ಣ ಪಾತ್ರದಿಂದ ಸೂಪರ್ ಸ್ಟಾರ್ ಆಗೋವರೆಗೂ ಒಂದೇ ರೀತಿ ವ್ಯಕ್ತಿತ್ವ ಹೊಂದಿದ್ದ ಏಕೈಕ ನಟ ಅಂಬರೀಶ್.
29 ಮೇ 1952 ರಲ್ಲಿ ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆ ಗ್ರಾಮದಲ್ಲಿ ಅಂಬಿ ಜನಿಸಿದ್ದರು. ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ. ಇವರ ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಮಂಡ್ಯದಲ್ಲಿ. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದಾರೆ.
1991 ರಲ್ಲಿ ಕನ್ನಡದ ಖ್ಯಾತ ನಟಿ ಸುಮಲತಾ ಅವರೊಂದಿಗೆ ಅಂಬರೀಶ್ ದಾಂಪತ್ಯ ಜೀವನ ಆರಂಭಿಸಿದರು. ಅದಕ್ಕೂ, ಮುಂಚೆ 1972ರಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಲ್ ಅಂಬಿಯ ಸ್ಟೈಲ್ ಗುರುತಿಸಿ 'ನಾಗರಹಾವು' ಚಿತ್ರದಲ್ಲಿ ಅವಕಾಶ ಕೊಟ್ಟರು. ಈ ಚಿತ್ರದಲ್ಲಿ 'ಜಲೀಲ' ನಿರ್ವಹಿಸಿದ ಅಂಬಿ, ಅಲ್ಲಿಂದ ಇಂಡಸ್ಟ್ರಿಯಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡರು. ಅದೇ ರೆಬೆಲ್ ಸಾಮಾಜ್ಯ. ಮುಂದೆ ಓದಿ.....

'ಜಲೀಲ' ಸಿಗ್ನೇಚರ್ ಪಾತ್ರ
ಅಂಬರೀಶ್ ಇದುವರೆಗೂ ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಆದ್ರೆ, ಅವರ ಮೊದಲ ಚಿತ್ರ, ಮೊದಲ ಡೈಲಾಗ್ ಎಂದೆಂದಿಗೂ ಮೆರಯಲು ಸಾಧ್ಯವಿಲ್ಲ. 'ನಾಗರಹಾವು' ಚಿತ್ರದಲ್ಲಿ ವಿಷ್ಣುವರ್ಧನ್ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯನ್ನ ಚುಡಾಯಿಸುವ 'ಜಲೀಲ' ಎಂಬ ಯುವಕನ ಪಾತ್ರದಲ್ಲಿ ಅಂಬರೀಶ್ ಮಿಂಚಿದ್ದರು. 'ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ....' ಎಂದು ಅಂಬಿ ಹೇಳಿದ ಡೈಲಾಗ್ ಈಗಲೂ ಎವರ್ ಗ್ರೀನ್ ಆಗಿಯೇ ಉಳಿದುಕೊಂಡಿದೆ.

ಬಲವಂತವಾಗಿ ಪಾತ್ರ ಮಾಡಿಸಿದ್ದ ಗೆಳೆಯ
ಪುಟ್ಟಣ್ಣ ಕಣಗಾಲ್ ಅವರು 'ಜಲೀಲ'ನ ಪಾತ್ರಕ್ಕಾಗಿ ಹಲವು ಯುವ ಪ್ರತಿಭೆಗಳನ್ನ ಪರೀಕ್ಷಿಸಿದ್ದರು. ಇದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ಆದ್ರೆ, ಯಾರೊಬ್ಬರು ಈ ಕ್ಯಾರೆಕ್ಟರ್ ಗೆ ಸೂಕ್ತವಾಗಿಲ್ಲ. ನಂತರ ಅಂಬರೀಶ್ ಸ್ನೇಹಿತ ಸಂಗ್ರಾಮ್ ಅವರ ಬಲವಂತದಿಂದ ಅಂಬರೀಶ್, ನಿರ್ದೇಶಕ ಪುಟ್ಟಣ್ಣ ಅವರ ಎದುರು ಬಂದರು. ಆಗ, ಮೊದಲ ನೋಟದಿಂದಲೇ ಅಂಬರೀಶ್ ಪುಟ್ಟಣ್ಣಗೆ ಇಷ್ಟವಾದರು. ಬಣ್ಣ ಹಚ್ಚಿಸಿ ನಟಿಸಲು ಹೇಳಿದರು. ಟೇಕ್ ಓಕೆ ಆಯ್ತು.

ಚಿತ್ರರಂಗಕ್ಕೆ ಬಂದ ಎರಡು ಧ್ರುವತಾರೆ
ಈ ಚಿತ್ರದಿಂದ ವಿಷ್ಣುವರ್ಧನ್ ಎಂಬ ರೋಮ್ಯಾಂಟಿಕ್ ಹೀರೋ ಜೊತೆಗೆ ಅಂಬರೀಶ್ ಎಂಬ ರೆಬೆಲ್ ವಿಲನ್ ಚಿತ್ರರಂಗಕ್ಕೆ ಸಿಕ್ಕರು. ಇಲ್ಲಿಂದ ಅಂಬರೀಶ್ ಮತ್ತು ವಿಷ್ಣು ಸ್ನೇಹಿತರಾದರು. ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಅಂದ್ರೆ, ಅಂಬಿ ಇಲ್ಲದೇ ವಿಷ್ಣುವರ್ಧನ್ ಎಲ್ಲಿಯೂ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ ಎನ್ನುವಷ್ಟು ಆತ್ಮೀಯರಾದರು.
ಹಿರಿಯ ನಟ, ಮಾಜಿ ಸಚಿವ ಎಂ.ಎಚ್.ಅಂಬರೀಶ್ ಪರಿಚಯ

ಅಂಬಿಗೆ ಇನ್ನೊಂದು 'ಸ್ಟಾರ್' ನೀಡಿದ್ದು 'ಅಂತ'
'ನಾಗರಹಾವು' ಚಿತ್ರದಿಂದ 'ರಂಗನಾಯ'ಕಿ ಚಿತ್ರದವರೆಗೂ ಅಂಬರೀಶ್ ಎಲ್ಲ ರೀತಿಯ ಪಾತ್ರಗಳನ್ನ ಮಾಡಿದ್ದರು. 'ಪಡುವಾರಳ್ಳಿ ಪಾಂಡವರು', 'ಮಸಣದ ಹೂವು', 'ಶುಭಮಂಗಳ' ಅಂತಹ ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ, ನಾಯಕ, ನಾಯಕಿಯರ ಸಹೋದರನಾಗಿ, ಸ್ನೇಹಿತನಾಗಿ ಅಭಿನಯಿಸಿದ್ದರು. ಆದ್ರೆ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು 'ಅಂತ' ಸಿನಿಮಾದಲ್ಲಿ ಅಂಬರೀಶ್ ಅವರನ್ನ ಪೂರ್ಣ ಪ್ರಮಾಣದ ನಾಯಕನನ್ನಾಗಿಸಿ ಚಿತ್ರರಂಗಕ್ಕೊಬ್ಬ 'ರೆಬೆಲ್ ಸ್ಟಾರ್' ನೀಡುವಲ್ಲಿ ನೆರವಾದರು.

ಕ್ಲಾಸ್ ಅಂಡ್ ಮಾಸ್ ಸಿನಿಮಾಗಳು
ಚಕ್ರವ್ಯೂಹ, ಗಂಡ ಬೇರುಂಡ, ಕಾಳಿಂಗ ಸರ್ಪ, ಗೂಂಡಾ ಗುರು, ಒಂಟಿ ಸಲಗ, ಇಂದ್ರಜಿತ್, ಗರುಡ ಧ್ವಜ, ರೌಡಿ ಎಂಎಲ್ಎ, ಎಂಟೆದೆ ಭಂಟ, ಮೈಸೂರು ಜಾಣ, ಮಂಡ್ಯದ ಗಂಡು, ಕಲಿಯುಗದ ಕರ್ಣ ಅಂತಹ ಮಾಸ್ ಸಿನಿಮಾ ಮಾಡಿದ ಅಂಬರೀಶ್, ಮೇಘಮಾಲೆ, ಮಣ್ಣಿನ ದೋಣಿ, ಮಲ್ಲಿಗೆ ಹೂವು, ಸೋಲಿಲ್ಲದ ಸರದಾರ, ಹೃದಯ ಹಾಡಿತು, ಒಲವಿನ ಉಡುಗೊರೆ, ಮಿಡಿದ ಹೃದಯ, ಪ್ರೇಮ ಸಂಗಮ ಸೇರದಂತೆ ಹಲವು ಕಾದಂಬರಿ ಆಧಾರಿತ ಹಾಗೂ ಕೌಟುಂಬಿಕ ಆಧರಿತ ಚಿತ್ರಗಳನ್ನ ನೀಡಿದ್ದರು.

ಇಮೇಜ್ ಬದಲಿಸಿದ್ದ ಚಿತ್ರಗಳು
ಅಂತ, ಚಕ್ರವ್ಯೂಹ ಚಿತ್ರದಿಂದ ಅಂಬರೀಶ್ ಗೆ ಹೊಸ ಇಮೇಜ್ ಸಿಕ್ಕವು. ಚಕ್ರವ್ಯೂಹ ಸಿನಿಮಾ ಹಿಂದಿಗೂ ರೀಮೇಕ್ ಆಗಿತ್ತು. ನ್ಯೂಡೆಲ್ಲಿ ಚಿತ್ರವೂ ಅಷ್ಟೇ ದೊಡ್ಡ ಸದ್ದು ಮಾಡಿತ್ತು. ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್, ಏಳು ಸುತ್ತಿನ ಕೋಟೆ ಅಂತಹ ಚಿತ್ರಗಳು ಅಂಬಿಯ ಹಿಟ್ ಲಿಸ್ಟ್ ನಲ್ಲಿವೆ.

ಮಲ್ಟಿಸ್ಟಾರ್ ಸಿನಿಮಾಗಳು
ಬಹುಶಃ ಅಂಬರೀಶ್ ಅವರು ಭಾರತದಲ್ಲೇ ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿನಯಿಸಿರುವ ಖ್ಯಾತಿ ಹೊಂದಿದ್ದಾರೆ. ರಾಜ್ ಕುಮಾರ್ ಜೊತೆ ಒಡಹುಟ್ಟಿದವರು, ವಿಷ್ಣು ಜೊತೆ ಸ್ನೇಹಿತರ ಸವಾಲ್, ಮಹಾ ಪ್ರಚಂಡರು, ಅವಳ ಹೆಜ್ಜೆ, ದಿಗ್ಗಜರು ಅಂತಹ ಹಿಟ್ ಸಿನಿಮಾ, ರಜನಿಕಾಂತ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ, ಶಂಕರ್ ನಾಗ್, ಅನಂತ್ ನಾಗ್, ದರ್ಶನ್, ಸುದೀಪ್, ಯಶ್, ಹೀಗೆ ಕನ್ನಡದ ಆಲ್ ಮೋಸ್ಟ್ ಈಗಿನ ನಟರ ಜೊತೆಯಲ್ಲೂ ಬಣ್ಣಹಚ್ದಿದ್ದಾರೆ. ಇದು ಅಂಬಿಯ ವಿಶೇಷ ದಾಖಲೆ.

ಕೊನೆಯ ಚಿತ್ರದ 'ಅಂಬಿ ನಿಂಗ್ ವಯಸ್ಸಾಯ್ತು'
ಅಂಬರೀಶ್ ಅವರ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತು'. ಸುದೀಪ್ ಜೊತೆ ಅಭಿನಯಿಸಿದ್ದ ಈ ಸಿನಿಮಾವೇ ಕೊನೆಯ ಚಿತ್ರವಾಯಿತು. ಈ ಸಿನಿಮಾವನ್ನ ಮಾಡಲು ತುಂಬಾ ಕಷ್ಟವಾಗುತ್ತಿತ್ತು ಎಂದು ಸ್ವತಃ ಅಂಬರೀಶ್ ಅವರೇ ಹೇಳಿಕೊಂಡಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದಲ್ಲಿ 'ಭೀಷ್ಮ'ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಬೇಕಿತ್ತು.

2013ರಲ್ಲಿ ಗೌರವ ಡಾಕ್ಟರೇಟ್
ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 1982ರಲ್ಲಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಮಸಣದ ಹೂವು ಚಿತ್ರಕ್ಕಾಗಿ ಅತ್ಯುತ್ತಮ ಸಹಾಯ ನಟ ರಾಜ್ಯ ಪ್ರಶಸ್ತಿ, ಒಲವಿನ ಉಡುಗೊರೆ ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ, 2005ರಲ್ಲಿ ಆಂಧ್ರ ಪ್ರದೇಶದ ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ, 2009ರಲ್ಲಿ ಆಂಧ್ರಸರ್ಕಾರದಿಂದ ನಂದಿ ಪ್ರಶಸ್ತಿ, 2011 ರಲ್ಲಿ ಕರ್ನಾಟಕ ಸರ್ಕಾರದಿಂದ ವಿಷ್ಣುವರ್ದನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.


Click it and Unblock the Notifications











