ಮೂವತ್ತೈದು ಲಕ್ಷ ಮೀರಿದ ಅಣ್ಣಾವ್ರ ಪುಸ್ತಕ ಗಳಿಕೆ

ಈ ಪುಸ್ತಕ ಮಾರಾಟದಿಂದ ಬಂದಿರುವ ರು. 35 ಲಕ್ಷಗಳನ್ನು ಬಡಸ್ಥಿತಿಯಲ್ಲಿರುವ ಕನ್ನಡ ಶಾಲೆಗಳ ಉದ್ಧಾರಕ್ಕಾಗಿ ಬಳಸಲಾಗುವುದೆಂದು ನಟ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಒಂಭತ್ತು ವರ್ಷಗಳ ಸತತ ಪರಿಶ್ರಮದ ಫಲವಾಗಿ ಹೊರಬಂದಿರುವ ತಮ್ಮ ತಂದೆಯ ಈ ಪುಸ್ತಕ ಇಷ್ಟು ಕಡಿಮೆ ಅವಧಿಯಲ್ಲಿ ಪಡೆದ ಈ ಪರಿ ಜನಪ್ರಿಯತೆಯಿಂದ ಇದರ ರೂವಾರಿ ಪುನೀತ್ ಖುಷಿಯಾಗಿದ್ದಾರೆ.
ಇತ್ತೀಚಿಗಷ್ಟೇ ಫಿಲಂ ಪೇರ್ ಪ್ರಶಸ್ತಿ ಪಡೆದಿರುವ ಪುನೀತ್ ಕನ್ನಡದ ಅಗ್ರಮಾನ್ಯ ನಟರಲ್ಲೊಬ್ಬರು. ಬಹಳಷ್ಟು ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮೂಲೆಮೂಲೆಯಲ್ಲೂ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಇದೀಗ 'ಯಾರೇ ಕೂಗಾಡಲಿ' ಚಿತ್ರದ ಚಿತ್ರೀಕರಣದಲ್ಲಿ ಬಿಜಿ. ಪುನೀತ್ ಜೊತೆ ಯೋಗೇಶ್ ಕೂಡ ನಟಿಸುತ್ತಿರುವ ಈ ಚಿತ್ರ ತಮಿಳಿನ 'ಪೊರಾಲಿ' ಚಿತ್ರದ ರೀಮೇಕ್.
ಡಾ ರಾಜ್ ಕುಮಾರ್-ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ ಪುಸ್ತಕವನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಅರ್ಪಿಸಿ ತಮ್ಮ ಜೀವನದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿಕೊಂಡಿರುವ ಪುನೀತ್, ತಮ್ಮ ಅಣ್ಣ ಶಿವರಾಜ್ ಕುಮಾರ್ ಅವರಿಗೆ ಚಿತ್ರವೊಂದನ್ನು ನಿರ್ದೇಶಿಸುವ ಕನಸು ಹೊಂದಿದ್ದಾರೆ. ಕನಸುಗಳನ್ನು ನನಸು ಮಾಡಿಕೊಳ್ಳುವಲ್ಲಿ ಎತ್ತಿದ ಕೈ ಎನಿಸಿರುವ ಇವರಿಂದ ಈ ಜುಗಲ್ಬಂದಿ ಚಿತ್ರ ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ.
ಸದ್ಯಕ್ಕೆ ಕೋಟ್ಯಾಧಿಪತಿ ಶೋವನ್ನು ಯಶಸ್ವಿಯಾಗಿ ಮುಗಿಸಿ, ಏಕಕಾಲಕ್ಕೆ ಕನ್ನಡದಲ್ಲೂ ಬಿಡುಗಡೆ ಆಗುವಂತಿದ್ದರೆ ತಮಿಳು ಅಥವಾ ಬಹುಭಾಷೆಗಳ ಚಿತ್ರಗಳಲ್ಲಿ ನಟಿಸಲು ಸಿದ್ಧ ಎಂದು ಘೊಷಿಸಿರುವ ಪುನೀತ್, ಸದ್ಯಕ್ಕೇ ಯಾರೇ ಕೂಗಾಡಲಿ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪರಿಶ್ರಮದ ಪ್ರತಿಫಲವಾಗಿ ಮೂಡಿಬಂದಿರುವ ಅಪ್ಪಾಜಿ ಪುಸ್ತಕಕ್ಕೆ ಬಂದಿರುವ ಭಾರೀ ಪ್ರತಿಕ್ರಿಯೆಯಿಂದ ಪುನೀತ್ ಖುಷಿ ಇಮ್ಮಡಿಯಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











