ಮಾಲಾಶ್ರೀ ಎಲೆಕ್ಷನ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಬ್ರೇಕ್
ಚುನಾವಣೆಗೂ ಮುನ್ನವೇ ತಮ್ಮ 'ಎಲೆಕ್ಷನ್' ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ರಾಮು ಕನಸು ಕಂಡಿದ್ದರು. ಅವರ ಕನಸಿಗೆ ಬ್ರೇಕ್ ಬಿದ್ದಿದೆ. ಅವರ ನಿರ್ಮಾಣದ ಎಲೆಕ್ಷನ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣೆ ಮುಗಿದ ಬಳಿಕಷ್ಟೇ ಸೆನ್ಸಾರ್ ಎಂದು ಖಡಾಖಂಡಿತವಾಗಿ ಹೇಳಿದೆ.
ಎಲೆಕ್ಷನ್ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು, 'ಎಲೆಕ್ಷನ್' ಚಿತ್ರ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದಕಾರಣ ಸೆನ್ಸಾರ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ರಾಮು ಅವರು ತಮ್ಮ ಪತ್ನಿ ಮಾಲಾಶ್ರೀ ಅವರನ್ನು ಹಾಕಿಕೊಂಡು ನಿರ್ಮಿಸಿದ ಚಿತ್ರವನ್ನು ಮೇ.5ರಂದು ತೆರೆಗೆ ತರಲು ಪ್ಲಾನ್ ಮಾಡಿದ್ದರು.
ಆದರೆ ಈಗ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರ ಪ್ಲಾನ್ ಎಲ್ಲಾ ಉಲ್ಟಾಪಲ್ಟಾ ಆಗಿದೆ. ರಿವೈಸಿಂಗ್ ಕಮಿಟಿಗೆ ಹೋಗಲು ಸ್ವತಃ ಸೆನ್ಸಾರ್ ಮಂಡಳಿಯೇ ಸೂಚಿಸಿದೆ ಎನ್ನಲಾಗಿದೆ. ಎಲೆಕ್ಷನ್ ಆಧರಿಸಿ ಮಾಡಿದ ಚಿತ್ರ ಇದಾಗಿದೆ.

ಒಳ್ಳೆ ಮೆಸೇಜ್ ಓರಿಯಂಟೆಡ್ ಸಿನಿಮಾ
ತಮ್ಮ ಎಲೆಕ್ಷನ್ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಬಗ್ಗೆ ರಾಮು ಅವರ ತಕ್ಷಣದ ಪ್ರತಿಕ್ರಿಯೆ, "ಒಳ್ಳೆಯ ಮೆಸೇಜ್ ಓರಿಯಂಟೆಡ್ ಸಿನಿಮಾ ಮಾಡಿದ್ದೆವು. ತಮ್ಮ ಸಿನಿಮಾ ನೋಡಿ ಹತ್ತು ಪರ್ಸೆಂಟ್ ಜನ ಆದರೂ ಬದಲಾಗುತ್ತಾರೆ ಎಂದು ಭಾವಿಸಿದ್ದೆವು. ಆದರೆ ತಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪರ್ಮಿಷನ್ ಕೊಟ್ಟಿಲ್ಲ"

ರಾಜಕೀಯ ಎಂದರೆ ಬರೀ ದುಡ್ಡು ಮಾಡೋದಲ್ಲ
ಇದರ ಹಿಂದೆ ಏನು ಉದ್ದೇಶವಿದೆಯೋ ಏನೋ ಗೊತ್ತಿಲ್ಲ. ರಾಜಕೀಯ ಎಂದರೆ ಬರೀ ದುಡ್ಡು ಮಾಡುವುದೇ ಆಗಿದೆ. ಒಬ್ಬೊಬ್ಬರ ಬಳಿ ನೂರು, ಐನೂರು ಕೋಟಿ ರೂಗಳಿವೆ. ಬಡವರ ಪರಿಸ್ಥಿತಿ ಏನಾಗಬೇಡ. ಜನಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಚಿತ್ರ ಮಾಡಿದೆ.

ಒಂದಷ್ಟು ಜನ ಬದಲಾಗುತ್ತಾರೆ ಎಂದುಕೊಂಡಿದ್ದೆವು
ತಮ್ಮ ಸಿನಿಮಾ ನೋಡಿ ಒಂದಷ್ಟು ಜನ ಬದಲಾಗಲಿ. ಒಳ್ಳೆಯ ನಾಯಕನನ್ನು ಆಯ್ಕೆ ಮಾಡಲಿ ಎಂಬ ಉದ್ದೇಶ ತಮ್ಮದಾಗಿತ್ತು. ಅದಕ್ಕಾಗಿ ಚಿತ್ರವನ್ನು ಚುನಾವಣೆಗೂ ಮುನ್ನವೇ ಬಿಡುಗಡೆ ಮಾಡಬೇಕೆಂದುಕೊಂಡಿದ್ದೆ. ಡಿಸೆಂಬರ್ ನಿಂದಲೂ ಹಗಲು ರಾತ್ರಿ ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಈಗ ಪರಿಸ್ಥಿತಿ ಈ ರೀತಿ ಆಗಿದೆ ಎಂದಿದ್ದಾರೆ ರಾಮು.

ಹಂಸಲೇಖ ಅವರ ಸಂಗೀತ ಸಾಹಿತ್ಯ ಚಿತ್ರಕ್ಕಿದೆ
ಎಲೆಕ್ಷನ್ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ, ರಾಜೇಶ್ ಅವರ ಛಾಯಾಗ್ರಹಣವಿದೆ. ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.

ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿರುವ ಚಿತ್ರ
ರಾಮು ಎಂಟರ್ ಪ್ರೈಸಸ್ ಬ್ಯಾನರ್ ನ ಲಾಕಪ್ ಡೆತ್, ಎಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಕನ್ನಡದ ಕಿರಣ್ ಬೇಡಿ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಇದು. ಓಂ ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದ್ದಾರೆ. ರಾಮು ಲೆಕ್ಕಾಚಾರ ಉಲ್ಟಾ ಆಗಿದೆ.


Click it and Unblock the Notifications











