ಸಿನಿಮಾ ಸ್ಟಾರ್ಗಳು ಮಾತ್ರವಲ್ಲ.. ಕಿರುತೆರೆ ನಟರಲ್ಲೂ ಹೆಚ್ಚಿದ ಟ್ರಾನ್ಸ್ ಫಾರ್ಮೇಶನ್ ಗೀಳು!
'ಸ್ಪರ್ಧೆ' ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಚಾರ ಎನ್ನಬಹುದು. ಯಾಕೆಂದರೆ ಸ್ಪರ್ಧೆ ಎನ್ನುವ ಚಿಕ್ಕ ಪದವು ನಟನಾ ಕ್ಷೇತ್ರವನ್ನು ಕೂಡಾ ಬಿಟ್ಟಿಲ್ಲ. ನಟ ಅಥವಾ ನಟಿಯಾಗಬೇಕು ಎಂದು ಯಾರು ಕೂಡಾ ಅಂದುಕೊಳ್ಳಬಹುದು. ಅದು ಕಷ್ಟದ ವಿಚಾರವಲ್ಲ. ಆದರೆ ನಟ ಅಥವಾ ನಟಿಯಾಗಿ ಬಣ್ಣದ ಲೋಕದಲ್ಲಿ ಸ್ಥಿರವಾಗಿ ನಿಲ್ಲಲು ಅದರದೇ ಆದ ರೀತಿ ನೀತಿ ಇದೆ. ನಟನೆಯನ್ನು ಕಲಿಯಬೇಕು, ಮುಖ್ಯವಾಗಿ ತಮ್ಮ ಕೆಲಸಕ್ಕೆ ಸಂಪೂರ್ಣ ಸಮರ್ಪಣೆ ಬೇಕು. ಕೊಟ್ಟಿರುವಂತಹ ಸ್ಕ್ರಿಪ್ಟ್ ಕಂಠಪಾಠ ಮಾಡಬೇಕು ಅದರ ಜೊತೆಗೆ ಪೂರ್ವ ತಯಾರಿ ಹೀಗೆ ಒಂದೆರಡಲ್ಲ.
ನಟನೆಯಲ್ಲಿ ಎಲ್ಲದಕ್ಕಿಂತ ಮುಖ್ಯವಾದ ವಿಚಾರವೆಂದರೆ ಬಾಡಿ ಟ್ರಾನ್ಸ್ ಫಾರ್ಮೇಶನ್ ಕೂಡಾ ಇತ್ತೀಚಿನ ದಿನಗಳಲ್ಲಿ ಮುಖ್ಯವಾದ ಸಂಗತಿಯಾಗಿಬಿಟ್ಟಿದೆ. ಮೊದಲೆಲ್ಲಾ ಹಿರಿತೆರೆ ಕಲಾವಿದರುಗಳಿಗೆ ಮಾತ್ರ ಸೀಮಿತವಾಗಿದ್ದ ಈ 'ಬಾಡಿ ಟ್ರಾನ್ಸ್ ಫಾರ್ಮೇಶನ್' ಈಗ ಕಿರುತೆರೆ ಜಗತ್ತಿಗೂ ಕೂಡಾ ಲಗ್ಗೆ ಇಟ್ಟಿದೆ.

ಗೀತಾ ಭಾರತಿ ಭಟ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಗೀತಾ ಭಾರತಿ ಭಟ್ ತಮ್ಮ ತೂಕ ಇಳಿಸಿಕೊಂಡಿದ್ದಾರೆ. ಒಂದೂವರೆ ನವರ್ಷದಿಂದ ಜಿಮ್ ನಲ್ಲಿ ವರ್ಕೌಟ್ ಮಾಡಿ ತಮ್ಮ ತೂಕ ಇಳಿಸಿಕೊಂಡಿದ್ದಾರೆ. ಅಂದ ಹಾಗೇ ಗೀತಾ ಭಾರತಿ ಭಟ್ ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ಆಗಲಿ, ಅಥವಾ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುವುದಕ್ಕಾಗಲಿ ತೂಕ ಇಳಿಸಲಿಲ್ಲ. ಬದಲಿಗೆ ತೂಕ ಇಳಿಸಲು ಗೀತಾ ಅವರು ಬಯಸಿದ್ದು ಆರೋಗ್ಯದ ಕಾರಣಕ್ಕಾಗಿ. ಗೀತಾ ಭಾರತಿ ಭಟ್ ಅವರಿಗೆ ಆರೋಗ್ಯ ಸಮಸ್ಯೆ ಅದರಲ್ಲೂ ಪಿಸಿಓಎಸ್ ಸಮಸ್ಯೆಯಿತ್ತು. ಅವರ ಆರೋಗ್ಯ ಸಮಸ್ಯೆ ಈಗ ಪರಿಹಾರವಾಗಿದ್ದು, ಈಗ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಗೀತಾ ಅವರು ಸದೃಢರಾಗಿದ್ದಾರೆ. ಉತ್ತಮ ಆಹಾರ ಮತ್ತು ಜಿಮ್ ತೂಕ ಇಳಿಸಲು ಅತ್ಯುತ್ತಮ ಆಯ್ಕೆ ಎಂಬುದು ಗೀತಾ ಅವರ ಅನಿಸಿಕೆ.ಜೊತೆಗೆ ಉತ್ತಮ ತರಬೇತುದಾರರನ್ನು ಆಯ್ಕೆ ಮಾಡಿಕೊಂಡ ಗೀತಾ ಇಲ್ಲಿಯವರೆಗೆ ಇಳಿಸಿದ್ದು 30 ಕೆಜಿ. ಇನ್ನು 30 ಕೆಜಿ ಇಳಿಸಿಕೊಳ್ಳುವ ಗುರಿ ಆಕೆಗಿದೆ.

ವಿನಯ್ ಗೌಡ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಹರಹರ ಮಹಾದೇವ' ಧಾರಾವಾಹಿಯಲ್ಲಿ ನಾಯಕ ಮಹಾದೇವ ಆಗಿ ನಟಿಸಿದ್ದ ವಿನಯ್ ಗೌಡ ಆ ಪಾತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದರು. "ಹರಹರ ಮಹಾದೇವ ಧಾರಾವಾಹಿಯಲ್ಲಿ ಮಹಾದೇವನ ಪಾತ್ರಕ್ಕಾಗಿ ನಾನು ತೂಕ ಇಳಿಸಬೇಕಾದುದು ಅನಿವಾರ್ಯವಾಗಿತ್ತು. ಹಾಗಾಗಿ ಕೇವಲ ಹತ್ತು ದಿನಗಳಲ್ಲಿ ನಾನು 8 ಕೆಜಿ ಇಳಿಸಿಕೊಂಡೆ. ಧಾರಾವಾಹಿಯ ತಂಡದವರು ನನ್ನನ್ನು ಪ್ರೋತ್ಸಾಹಿಸಿದ್ದು ಮಾತ್ರವಲ್ಲದೇ ತೂಕ ಇಳಿಸಿಕೊಳ್ಳುವುದಕ್ಕಾಗಿ ಸಮಯವನ್ನು ಕೂಡಾ ನೀಡಿದರು. ಇದರ ಜೊತೆಗೆ 'ಹರಹರ ಮಹಾದೇವ' ಚಿತ್ರೀಕರಣದ ಸಮಯದಲ್ಲಿ ನಾನು ಮಾಂಸಹಾರವನ್ನು ಸಂಪೂರ್ಣ ನಿಲ್ಲಿಸಿದ್ದೆ" ಎಂದು ಹೇಳಿದರು.

ಚಂದನ್ ಕುಮಾರ್
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟು ತದ ನಂತರ ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಚಂದನ್ ಕುಮಾರ್ ಕೂಡಾ ಅಷ್ಟೇ.. ಪಾತ್ರದ ಸಲುವಾಗಿ ತೂಕ ಇಳಿಸಿಕೊಂಡಿದ್ದರು. ಕೇವಲ ಏಳು ದಿನಗಳಲ್ಲಿ ಥ್ರೆಡ್ ಮಿಲ್ ಮೇಲೆ 100 ಕಿಮೀ ಓಡುವ ಮೂಲಕ ಐದು ಕೆಜಿಗಳನ್ನು ಇಳಿಸಿಕೊಂಡಿದ್ದರು.

ಅಕುಲ್ ಬಾಲಾಜಿ
ನಟನೆಯ ಜೊತೆಗೆ ನಿರೂಪಕರಾಗಿಯೂ ಗುರುತಿಸಿಕೊಂಡಿರುವ ಅಕುಲ್ ಬಾಲಾಜಿ ಅವರು ತಮ್ಮ ತಾಯಿಗೋಸ್ಕರ ತೂಕ ಇಳಿಸಿಕೊಂಡಿದ್ದರು. "ನನ್ನ ತಾಯಿಗೆ ನಾನು ತೂಕ ಇಳಿಸಬೇಕು ಎಂಬ ಮಹಾದಾಸೆ ಇತ್ತು. ದೇಹದಲ್ಲಿನ ಕೊಬ್ಬು ಕರಗಿಸಿಕೊಳ್ಳಬೇಕು ಎಂದು ಕೂಡಾ ಅವರು ಬಯಸಿದ್ದರು. ಒಟ್ಟಿನಲ್ಲಿ ತನ್ನ ಮಗ ಫಿಟ್ ಆಗಿ ಕಾಣಬೇಕು ಎಂಬುದು ಅಮ್ಮನ ಆಸೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳುವ ನಿರ್ಧಾರ ಮಾಡಿದೆ" ಎನ್ನುತ್ತಾರೆ ಅಕುಲ್ ಬಾಲಾಜಿ.


Click it and Unblock the Notifications











