ಶುಕ್ರವಾರ ಛತ್ರಿಗಳಿಗೆ ಬಿಡುಗಡೆ ಭಾಗ್ಯವಿಲ್ಲ ಸಾರ್
ಇದೇ ಶುಕ್ರವಾರ (ಏ.19) ಬಿಡುಗಡೆಯಾಗಬೇಕಿದ್ದ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರ ಪೋಸ್ಟ್ ಪೋನ್ ಆಗಿದೆ. ಶುಕ್ರವಾರಕ್ಕೆ ಬದಲಾಗಿ ಶನಿವಾರ (ಏ.20) ಛತ್ರಿಗಳು ಥಿಯೇಟರ್ ಗೆ ಅಡಿಯಿಡುತ್ತಿದ್ದಾರೆ. ನಿರ್ಮಾಣ ನಂತರದ ಕೆಲಸಗಳಲ್ಲಿ ಸ್ವಲ್ಪ ತೊಂದರೆ ಉಂಟಾಗಿದ್ದೇ ಚಿತ್ರ ಬಿಡುಗಡೆ ಮುಂದೂಡಲು ಕಾರಣವಂತೆ.
ಚೆನ್ನೈನ ಪ್ರಸಾದ ಸ್ಟುಡಿಯೋದಲ್ಲಿ ಮುಷ್ಕರ ನಡೆದು ಚಿತ್ರದ ಪ್ರಥಮ ಪ್ರತಿ ಸಿಗುವುದು ಸ್ವಲ್ಪ ತಡವಾಯಿತಂತೆ. ಚಿತ್ರಕ್ಕೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಹಾಗಾಗಿ ಚಿತ್ರವನ್ನು ಒಂದು ದಿನ ಮುಂದೂಡಿದ್ದಾಗಿ ಎಸ್ ನಾರಾಯಣ್ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ನಾರಾಯಣ್ ಜೊತೆ ಮೋಹನ್, ರಮೇಶ್ ಅರವಿಂದ್ ಅವರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ಪದ್ಮಸುಂದರಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ.ಮಾನಸಿ, ಸನಾತನಿ, ಪವಿತ್ರಾ ಗೌಡ ಹಾಗೂ ಸುಷ್ಮಾ ರಾಜ್ ಛತ್ರಿಗಳ ಜೊತೆಗಿನ ಬಿತ್ರಿಗಳು. ಈ ಹಿಂದೆ ಎಸ್ ನಾರಾಯಣ್ ಅವರು ಕುರಿಗಳು ಸಾರ್ ಕುರಿಗಳು ಹಾಗೂ ಕೋತಿಗಳು ಸಾರ್ ಕೋತಿಗಳು ಎಂಬ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದರು. ಈಗ 'ಛತ್ರಿಗಳು ಸಾರ್ ಛತ್ರಿಗಳು' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಚಿತ್ರದ ಪಾತ್ರವರ್ಗದಲ್ಲಿ ಸಾಧು ಕೋಕಿಲ, ಸುಂದರ ರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಂ ಮುಂತಾದ ಹಾಸ್ಯ ನಟರ ಬಳಗವೇ ಚಿತ್ರದಲ್ಲಿದೆ. ಮಾಲೂರು ಶ್ರೀನಿವಾಸ್ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ. (ಏಜೆನ್ಸೀಸ್)


Click it and Unblock the Notifications












