ನಟ ಮಯೂರ್ ಪಟೇಲ್ ವಿರುದ್ಧ ಜಾಮೀನು ರಹಿತ ವಾರೆಂಟ್
ಕನ್ನಡ ನಿರ್ದೇಶಕ ಕಮ್ ನಿರ್ಮಾಪಕ ಮದನ್ ಪಟೇಲ್ ಅವರ ಮಗ ಮಯೂರ್ ಪಟೇಲ್ ಅವರ ವಿರುದ್ಧ 'ಚೆಕ್ ಬೌನ್ಸ್' ಪ್ರಕರಣ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ದೊಡ್ಡಬಳ್ಳಾಪುರದ ಉದ್ಯಮಿ ಸೆಲ್ವಕುಮಾರ್ ಎಂಬುವವರಿಂದ 2014ರಲ್ಲಿ ನಟ ಮಯೂರ್ ಪಟೇಲ್ ಅವರು ಬರೋಬ್ಬರಿ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದೀಗ ಆ ಸಾಲ ವಾಪಸ್ ನೀಡುವ ಸಲುವಾಗಿ ಮಯೂರ್ ಪಟೇಲ್ ಅವರು ಉದ್ಯಮಿ ಸೆಲ್ವಕುಮಾರ್ ಅವರಿಗೆ 5 ಲಕ್ಷ ರೂಪಾಯಿಯ ಚೆಕ್ ನೀಡಿದ್ದರು.[ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಮಯೂರ್ ಪಟೇಲ್]
ಆದರೆ ಆ 5 ಲಕ್ಷದ ಚೆಕ್ ಬ್ಯಾಂಕ್ ನಲ್ಲಿ ಬೌನ್ಸ್ ಆಗಿತ್ತು. ಅದಕ್ಕಾಗಿ ಉದ್ಯಮಿ ಸೆಲ್ವಕುಮಾರ್ ಅವರು ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರಿನ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ನಟ ಮಯೂರ್ ಪಟೇಲ್ ಅವರಿಗೆ ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಆದರೆ ಕೋರ್ಟ್ ಗೆ ಗೈರು ಹಾಜರಾದ ಹಿನ್ನಲೆಯಲ್ಲಿ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.[ಚೆಕ್ ಬೌನ್ಸ್ ಕೇಸ್; ಮಯೂರ್ ಪಟೇಲ್ ವಿರುದ್ಧ ಎಫ್.ಐ.ಆರ್]
ಅಂದಹಾಗೆ ಕೋರ್ಟ್ ವಾರೆಂಟ್ ಹಿಡಿದು ಪೊಲೀಸರು ಬುಧವಾರದಂದು (ಫೆಬ್ರವರಿ 3) ಜೋಗು ಪಾಳ್ಯದ ಮಯೂರ್ ಪಟೇಲ್ ನಿವಾಸಕ್ಕೆ ತೆರಳಿದ್ದರು. ಆದರೆ ಮಯೂರ್ ಅವರು ಖುದ್ದು ಗುರುವಾರ (ಫೆಬ್ರವರಿ 4) ಕೋರ್ಟ್ ಗೆ ಹಾಜರಾಗುವುದಾಗಿ ತಿಳಿಸಿದ್ದರಿಂದ ಪೊಲೀಸರು ಹಿಂದಿರುಗಿದ್ದಾರೆ, ಎಂದು ಸುದ್ದಿಯಾಗಿದೆ.
ಇತ್ತೀಚೆಗಷ್ಟೆ ನಟ ಮಯೂರ್ ಅವರು ಮಂಗಳೂರಿನ ಕಮಿಷನರ್ ಮಗಳು ಕಾವ್ಯ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.


Click it and Unblock the Notifications













