ದೊಡ್ಡ ತೆರೆಯ ಮೇಲೆ ಚಿಕ್ಕಣ್ಣನ ಹೊಸ ಜರ್ನಿ: ಹೀರೋ ಆದ ಹಾಸ್ಯನಟ
ಹಾಸ್ಯನಟರು ನಾಯಕ ನಟರಾಗುವುದು ಸಾಮಾನ್ಯ ಎಂಬತಾಗಿಬಿಟ್ಟಿದೆ. ಎಲ್ಲಾ ಸಿನಿಮಾ ಉದ್ಯಮಗಳಲ್ಲಿಯೂ ಅದು ಸಾಮಾನ್ಯ. ಆದರೆ ನಾಯಕನಟರಾದ ಹಾಸ್ಯನಟರು ಯಶಸ್ವಿಯಾದ ಉದಾಹರಣೆ ಹೆಚ್ಚಿಲ್ಲ.
ಕನ್ನಡದಲ್ಲಿಯೂ ಸಹ ಹಲವು ಹಾಸ್ಯ ನಟರು ಹೀರೋಗಳಾಗಿ ಸಿನಿಮಾಗಳನ್ನು ಮಾಡಿದರು. ಆದರೆ ಹಲವರು ಮುಗ್ಗರಿಸಿದರು. ಕೆಲವರು ದೊಡ್ಡ ಯಶಸ್ಸುಗಳಿಸಿದರು. ಕೆಲವರು ಸಾಧಾರಣ ಯಶಸ್ಸಿನೊಂದಿಗೆ ಮುಂದುವರೆಯುತ್ತಿದ್ದಾರೆ.
ಇದೇ ಸಾಲಿಗೆ ಈಗ ಮತ್ತೊಬ್ಬ ಖ್ಯಾತ ಹಾಸ್ಯನಟ ಸೇರುತ್ತಿದ್ದಾರೆ. ಕಿರುತೆರೆಯಿಂದ ನಟನೆ ಪ್ರಾರಂಭಿಸಿ ಹಿರಿ ತೆರೆಗೆ ಬಂದು, ಪ್ರಸ್ತುತ ಬೇಡಿಕೆಯ ಹಾಸ್ಯನಟ ಎನಿಸಿಕೊಂಡಿರುವ ಚಿಕ್ಕಣ್ಣ, ಹಾಸ್ಯನಟನಿಂದ ಬಡ್ತಿ ಪಡೆದು ಹೀರೋ ಆಗಲು ರೆಡಿಯಾಗಿದ್ದಾರೆ.

ಚಂದ್ರಮೋಹನ್ ನಿರ್ದೇಶನದ ಸಿನಿಮಾ
ಚಿಕ್ಕಣ್ಣ ಸಿನಿಮಾ ಒಂದರಲ್ಲಿ ಹೀರೋ ಆಗುತ್ತಿದ್ದಾರೆ. 'ಬಾಂಬೆ ಮಿಠಾಯಿ', 'ಡಬ್ಬಲ್ ಎಂಜಿನ್' ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಚಿಕ್ಕಣ್ಣ ಹೀರೋ.

ಖ್ಯಾತ ಪಾತ್ರದ ಹೆಸರೇ ಸಿನಿಮಾಕ್ಕೆ!
ಚಿಕ್ಕಣ್ಣಗೆ ದೊಡ್ಡ ಖ್ಯಾತಿ ತಂದುಕೊಟ್ಟ ಪಾತ್ರದ ಹೆಸರನ್ನೇ ಅವರು ಹೀರೋ ಆಗಲಿರುವ ಸಿನಿಮಾಕ್ಕೂ ಇಡಲಾಗಿದೆ. 'ಅಧ್ಯಕ್ಷ' ಸಿನಿಮಾದ ಉಪಾಧ್ಯಕ್ಷ ಪಾತ್ರ ಚಿಕ್ಕಣ್ಣನಿಗೆ ದೊಡ್ಡ ಹೆಸರುಗಳಿಸಿಕೊಟ್ಟಿತ್ತು. ಈಗ ಅದೇ ಹೆಸರಿನ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ ಚಿಕ್ಕಣ್ಣ.

ಹಳ್ಳಿ ಹೈದನ ಪಾತ್ರದಲ್ಲಿ ಚಿಕ್ಕಣ್ಣ
'ಉಪಾಧ್ಯಕ್ಷ' ಸಿನಿಮಾ ಹಾಸ್ಯಪ್ರಧಾನ ಸಿನಿಮಾ ಆಗಿರಲಿದೆ ಎಂದು ನಿರ್ದೇಶಕರು ಹೇಳಿದ್ದು, ಸಿನಿಮಾದಲ್ಲಿ ನಾರಾಯಣ ಎಂಬ ಯುವಕನ ಪಾತ್ರದಲ್ಲಿ ಮಿಂಚಲಿದ್ದಾರಂತೆ ಚಿಕ್ಕಣ್ಣ. ಹಳ್ಳಿ ಪ್ರಧಾನವಾಗಿಟ್ಟುಕೊಂಡು ನಡೆಯುವ ಸಿನಿಮಾದ ಕತೆ ಡಾರ್ಜಲಿಂಗ್, ಮುನ್ನಾರ್ಗಳಿಗೂ ಸಾಗುತ್ತದೆಯಂತೆ. ಅಲ್ಲಿಯೂ ಚಿತ್ರೀಕರಣ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕರು.
Recommended Video

ಹೀರೋ ಆಗಲೆಂದು ಸಿನಿಮಾ ಮಾಡುತ್ತಿಲ್ಲ: ಚಿಕ್ಕಣ್ಣ
'ಹೀರೋ ಆಗಲೆಂದು ಸಿನಿಮಾ ಮಾಡುತ್ತಿಲ್ಲ, ಸಿನಿಮಾದ ಕತೆ ಚೆನ್ನಾಗಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ' ಎಂದಿದ್ದಾರೆ ಚಿಕ್ಕಣ್ಣ. ಸಿನಿಮಾದಲ್ಲಿ ಸಾಧುಕೋಕಿಲಾ, ರವಿಶಂಕರ್, ರಾಕ್ಲೈನ್ ಸುಧಾಕರ್ ಇನ್ನೂ ಹಲವರಿದ್ದಾರೆ. ಹೊಸ ನಾಯಕಿಯನ್ನು ಪರಿಚಯಿಸಲಾಗುತ್ತದೆಯಂತೆ.


Click it and Unblock the Notifications











