ಹಾಸ್ಯ ನಟ ಎಂಎಸ್ ಉಮೇಶ್ ಜೊತೆ ಮಾತುಕತೆ

ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ 'ಮುನಿತಾಯಿ'ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯೂ ದೊರಕಿತು.
ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕಲಾವಿದರಾಗಿ ಸಕ್ರಿಯರಾಗಿರುವ ಉಮೇಶ್ ಉತ್ತಮ ಬರಹಗಾರರು. ಈ ಹಿರಿಯ ಚೇತನದೊಂದಿಗೆ ಈ ತಿಂಗಳ ಬೆಳ್ಳಿ ಹೆಜ್ಜೆ ಕಾರ್ಯಕ್ರಮ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ವಿಭಿನ್ನ ಕಾರ್ಯಕ್ರಮ.
ಇದೇ ಶನಿವಾರ, 28ನೇ ಜುಲೈ 2012, ಸಂಜೆ 5 ಗಂಟೆಗೆ, ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್, ಬೆಂಗಳೂರು-2 ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಎಂ ಎಸ್ ಉಮೇಶ್ ಕುರಿತಾದ ಕಿರುಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಅಂದಹಾಗೆ 'ಗೋಲ್ ಮಾಲ್ ರಾಧಾಕೃಷ್ಣ' ಚಿತ್ರದಲ್ಲಿನ ಅವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. "ಅಯ್ಯೂ ನನ್ನ ಹೆಂಡ್ತಿ ಅಂದುಕೊಂಡು ನಿಮ್ಮ ಹೆಂಡ್ತೀನಾ ತಬ್ಬುಕೊಂಡು ಬಿಟ್ಟೆನಲ್ಲಾ. ಅಯ್ಯೂ ಇವರು ನನ್ನ ಅಪಾರ್ಥ ಮಾಡಿಕೊಂಡು ಬಿಟ್ರಲ್ಲ..." ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ.
ವರನಟ ಡಾ.ರಾಜ್ ಕುಮಾರ್ ಜೊತೆ 'ಶೃತಿ ಸೇರಿದಾಗ' ಚಿತ್ರದಲ್ಲಿನ "ಇದು ಬೊಂಬೆಯಾಟವಯ್ಯಾ..." ಹಾಡಿನಲ್ಲಿ ಅಮೋಘ ಅಭಿನಯವಂತೂ ಪ್ರೇಕ್ಷಕರನ್ನು ರಂಜಿಸಿತ್ತು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಉಮೇಶ್ ಅಭಿನಯದ ಕೆಲವು ಚಿತ್ರಗಳು.
ಎಲ್ಲರಂತಲ್ಲ ನನ್ನ ಗಂಡ, ಜೇನುಗೂಡು, ಚನ್ನ ಚಿತ್ರಗಳು ಉಮೇಶ್ ನಿರ್ದೇಶನದ ಚಿತ್ರಗಳು. ಇಂತಹ ಹಿರಿಯ ಚೇತನ ತಮ್ಮ ಬೆಳ್ಳಿಹೆಜ್ಜೆ ಜಾಡುಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











