ರಾಜ್-ವಿಷ್ಣು-ಅಂಬಿ ಸಾವನ್ನ ಸಂಭ್ರಮಿಸಿದ 'ದುಷ್ಟರ'ನ್ನ ಏನು ಮಾಡಬೇಕು.?
Recommended Video

ಮೊದಲ ರಾಜ್ ಕುಮಾರ್, ನಂತರ ವಿಷ್ಣುವರ್ಧನ್ ಈಗ ಅಂಬರೀಶ್....ಈ ಮೂರು ದಿಗ್ಗಜರು ಅಗಲಿಕೆ ಕನ್ನಡ ಚಿತ್ರರಂಗವನ್ನ ಅನಾಥ ಮಾಡಿದೆ. ರಾಜ್ ವಿಷ್ಣು ನಂತರ ಇಂಡಸ್ಟ್ರಿಗೆ ಅಣ್ಣನಂತಿದ್ದ ಅಂಬಿ ಕೂಡ ಈಗ ಬಾರದ ಲೋಕಕ್ಕೆ ಹೋದರು.
ಇದು ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದು ಇಡೀ ರಾಜ್ಯ ಶೋಕದಲ್ಲಿದೆ. ಆದ್ರೆ, ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಂಬರೀಶ್ ಅವರ ಸಾವನ್ನ ಸಂಭ್ರಮಿಸಿದ್ದಾರೆ. ಜೊತೆಗೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಬಗ್ಗೆಯೂ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ.
ಇದನ್ನ ನೋಡಿ ಕನ್ನಡ ಕಲಾವಿಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಪೋಸ್ಟ್ ಮಾಡಿದ್ದು ಯಾರು ಎಂದು ಹುಡುಕಲು ಮುಂದಾಗಿದ್ದರು. ಈ ಮಧ್ಯೆ ಕೆಲವು ಅಭಿಮಾನಿಗಳು ಈ ದುಷ್ಟರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂದೆ ಓದಿ....

ದುಷ್ಟಸಂಹಾರ ಪೇಜ್ ನಲ್ಲಿ ಕೃತ್ಯ
ದಿವಂಗತ ಡಾ.ರಾಜ್ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ನಿಧನದ ನೋವಿನಿಂದ ಹೊರಬರುವ ಮುನ್ನವೇ ಡಾ.ಅಂಬರೀಶ್ ಅವರ ನಿಧನದ ವಾರ್ತೆ ಕನ್ನಡಿಗರ ಪಾಲಿಗೆ ರ್ದುದೈವ. ಅವರ ಕುಟುಂಬದವರು, ಅಭಿಮಾನಿಗಳು, ಸಮಸ್ತ ಕನ್ನಡಿಗರು ಈ ನೋವಿನಿಂದ ಹೊರಬರಲಾಗದೇ ಸಂಕಟದ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ 'ದುಷ್ಟಸಂಹಾರ' ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಮೂರು ದಿಗ್ಗಜರ ಭಾವಚಿತ್ರದೊಂದಿಗೆ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳ ತಾಳ್ಮೆಯನ್ನ ಪರೀಕ್ಷಿಸಿದೆ.

ದೂರು ನೀಡಿದ್ದು ಯಾರು.?
ಮೈಸೂರಿನ ಬೆಳಕು ಸಂಸ್ಥೆಯ ಸಂಸ್ಥಾಪಕರು, ಸಾಮಾಜಿಕ ಹೋರಾಟಗಾರರೂ ಆದ ಕೆ.ಎಂ. ನಿಶಾಂತ್ ರವರು ಕನ್ನಡದ ಮೇರು ನಟರಾದ ಡಾ. ಅಂಬರೀಶ್ರವರ ಸಾವನ್ನು ಸಂಭ್ರಮಿಸಿ, ದಿವಂಗತ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್ ಅವರ ಬಗ್ಗೆ ಪೇಸ್ ಬುಕ್ನಲ್ಲಿ ಅವಾಚ್ಯಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳ ವಿರುದ್ದ ನಗರದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಇಂತವರನ್ನ ಗಡಿಪಾರು ಮಾಡಿ
ಬಳಿಕ ಮಾತನಾಡಿದ ಕೆ ಎಂ ನಿಶಾಂತ್ 'ಇಂದಿನ ಈ ಸೂಕ್ಷ್ಮ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸಬೇಕೆಂಬ ದುರುದ್ದೇಶದಿಂದ ಇಂತಹ ಹೇಳಿಕೆಗಳನ್ನು ಸಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕೋಮು ಸೌಹಾರ್ಧವನ್ನು ಹದಗೆಡಿಸುವ ಕುತಂತ್ರ ಇದರಲ್ಲಿ ಅಡಗಿದೆ. ಇಂತಹ ವಿಧ್ವಂಸಕ ಕೃತ್ಯ ನಡೆಯುವಂತೆ ಮಾಡುವ ದೇಶದ್ರೋಹಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಕಾನೂನಾತ್ಮಕವಾಗಿ ಸೂಕ್ತ ಕ್ರಮವನ್ನು ಜರುಗಿಸಿ ಇಂತಹವರನ್ನು ಗಡಿಪಾರು ಮಾಡಿ' ಎಂದು ಆಗ್ರಹಿಸಿದ್ದಾರೆ.

ಮೂರು ರತ್ನ, ಮೂರು ಕಥೆ
ಕನ್ನಡ ಇಂಡಸ್ಟ್ರಿಯಲ್ಲಿ ಈ ಮಟ್ಟಿಗೆ ಒಗ್ಗಟ್ಟು, ಈ ಮಟ್ಟಿಗೆ ಬಾಂಧವ್ಯ, ಸಿನಿಮಾ ಅಭಿವೃದ್ದಿಯಾಗಿದೆ ಅಂದ್ರೆ ಈ ಮೂವರ ಶ್ರಮ ಮತ್ತು ಕೊಡುಗೆ ಹೆಚ್ಚಿದೆ. ಇಂತಹ ನಟರ ಬಗ್ಗೆ ಅವರವರ ಅಭಿಮಾನಿಗಳು ಮನದಲ್ಲೇ ಮನೆಯನ್ನ ಕಟ್ಟಿ ಪೂಜಿಸುತ್ತಾರೆ. ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.


Click it and Unblock the Notifications











