Orchestra Mysuru Trailer: ಆರ್ಕೆಸ್ಟ್ರಾ ಸಿಂಗರ್ ಪೂರ್ಣನ ಹಾಡು ಪಾಡು ಇತ್ಯಾದಿ
ಸಂಕ್ರಾಂತಿ ಸಂಭ್ರಮದಲ್ಲಿ ಸುನೀಲ್ ಮೈಸೂರು ನಿರ್ದೇಶನದ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆರ್ಕೆಸ್ಟ್ರಾದಲ್ಲಿ ಹಾಡುವ ಮಹತ್ವಾಕಾಂಕ್ಷೆಯ ಯುವಕನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ರಿಲೀಸ್ ಡೇಟ್ ಹತ್ತಿರವಾದಂತೆ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದೆ.
'ಬಾರಿಸು ಕನ್ನಡ ಡಿಂಡಿಮವ' ಆಲ್ಬಮ್ ಹಾಡು ಕಟ್ಟಿಕೊಟ್ಟಿದ್ದ ತಂಡ ಈ ಚಿತ್ರವನ್ನು ತೆರೆಗೆ ತರ್ತಿದೆ. ಅಶ್ವಿನ್ ವಿಜಯಕುಮಾರ್ ಮತ್ತು ರಘು ದೀಕ್ಷೀತ್ 'ಆರ್ಕೆಸ್ಟ್ರಾ ಮೈಸೂರು' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ನವೀನ್ ಸಜ್ಜು ಹಾಗೂ ಸುನಿಲ್ ಕಥೆ ಬರೆದಿದ್ದಾರೆ. ಧನಂಜಯ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ಪೂರ್ಣಚಂದ್ರ ಮೈಸೂರು ಲೀಡ್ ರೋಲ್ನಲ್ಲಿ ನಟಿಸಿದ್ದಾರೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ನಿರ್ಮಾಣವಾಗಿದ್ದು ರಾಜಲಕ್ಷ್ಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಸಾಂಗ್ಸ್, ಟೀಸರ್ ರಿಲೀಸ್ ಆಗಿ ಗಮನ ಸೆಳೆದಿತ್ತು.
ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್ಜಿ ಸ್ಟುಡಿಯೋಸ್ ಮತ್ತು ಧನಂಜಯ್ ಅವರ ಡಾಲಿ ಪಿಕ್ಚರ್ಸ್ 'ಆರ್ಕೆಸ್ಟ್ರಾ ಮೈಸೂರು' ಚಿತ್ರದ ಬೆಂಬಲಕ್ಕೆ ನಿಂತಿದೆ. ದಿಲೀಪ್ ರಾಜ್, ಮಹೇಶ್ ಕುಮಾರ್, ಸಚ್ಚು, ರಾಜೇಶ್ ಬಸವಣ್ಣ, ಲಿಂಗರಾಜು, ಮಹದೇವ ಪ್ರಸಾದ್, ರವಿ ಹುಣಸೂರುರಂತಹ ರಂಗಭೂಮಿ ಕಲಾವಿದರು ತಾರಾಗಣದಲ್ಲಿದ್ದಾರೆ.

ಆರ್ಕೆಸ್ಟ್ರಾ ಸಂಸ್ಕೃತಿ ಅನಾವರಣ
ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ಪೂರ್ಣ ಎಂಬ ಯುವಕನಿಗೆ ಆರ್ಕೆಸ್ಟ್ರಾದಲ್ಲಿ ಹಾಡುವ ಕನಸು. ಅದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು 'ಆರ್ಕೆಸ್ಟ್ರಾ ಮೈಸೂರು' ಚಿತ್ರದ ಒನ್ಲೈನ್ ಸ್ಟೋರಿ. 90, 2000ರ ದಶಕದಲ್ಲಿ ಆರ್ಕೆಸ್ಟ್ರಾ ಕ್ರೇಜ್ ಜೋರಾಗಿತ್ತು. ರಾಜ್ಯೋತ್ಸವ, ಗಣೇಶ ಉತ್ಸವ ಅಂದರೆ ಆರ್ಕೆಸ್ಟ್ರಾ ಇರಲೇಬೇಕಿತ್ತು. ಇಂದಿಗೂ ಆ ಕ್ರೇಜ್ ಕೊಂಚಮಟ್ಟಿಗೆ ಇದೆ. ದಿಲೀಪ್ ರಾಜ್ ಸ್ಟಾರ್ ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ. ಮೈಸೂರು ಭಾಗದಲ್ಲಿ ಆರ್ಕೆಸ್ಟ್ರಾ ಸಂಸ್ಕೃತಿ ಬಹಳ ಜೋರಾಗಿ ಬೆಳೆದು ಬಂದಿದೆ. ಅಲ್ಲೇ ಈ ಕಥೆಯನ್ನು ಕಟ್ಟಿಕೊಡಲಾಗಿದೆ.

ರಘು ದೀಕ್ಷಿತ್ ಸಂಗೀತ
ಆರ್ಕೆಸ್ಟ್ರಾ ಕಥೆ ಆಗಿರುವುದರಿಂದ ಸಂಗೀತಕ್ಕೆ ಹೆಚ್ಚಿನ ಮಹತ್ವ ಇದೆ. ಒಂದರ್ಥದಲ್ಲಿ ಇದು ಮ್ಯೂಸಿಕಲ್ ಸ್ಟೋರಿ ಕೂಡ ಹೌದು. ರಘು ದೀಕ್ಷಿತ್ ಸಿನಿಮಾ ನಿರ್ಮಾಣದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲ ಅತಿಥಿ ಪಾತ್ರದಲ್ಲೂ ನಟಿಸಿದ್ದಾರೆ. ಜೋಸೆಫ್ ಕೆ ರಾಜಾ ಛಾಯಾಗ್ರಹಣ ಚಿತ್ರಕ್ಕಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಗಮನ ಸೆಳೆಯುತ್ತಿದೆ.

8 ಹಾಡು ಬರೆದ ಧನಂಜಯ್
'ಆರ್ಕೆಸ್ಟ್ರಾ ಮೈಸೂರು' ನಟ ಧನಂಜಯ ಆಪ್ತ ಬಳಗದ ಸಿನಿಮಾ. ಈಗಾಗಲೇ ಕೆಲ ಸಿನಿಮಾಗಳಿಗೆ ಧನು ಹಾಡುಗಳನ್ನು ಬರೆದಿದ್ದರು. ಈ ಚಿತ್ರಕ್ಕಾಗಿ 8 ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ಜೊತೆಗೆ ಅತಿಥಿ ಪಾತ್ರದಲ್ಲೂ ನಟಿಸಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ 'ಮಾದಪ್ಪ', 'ಸುಳ್ಳ ಚಂದಿರ' ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಧನು ಸಾಹಿತ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಕ್ರಾಂತಿಗೆ ಕನ್ನಡ ಸಿನಿಮಾ
ಸುಗ್ಗಿ ಹಬ್ಬದ ಸಂಭ್ರಮದಲ್ಲಿ ಪರಭಾಷೆಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಹಾವಳಿ ಜೋರಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ಸಂಕ್ರಾಂತಿ ರೇಸ್ನಲ್ಲಿ ಇಲ್ಲ. 'ಸಂಕ್ರಾಂತಿಗೊಂದು ಕನ್ನಡ ಸಿನಿಮಾ' ಎಂದು 'ಆರ್ಕೆಸ್ಟ್ರಾ ಮೈಸೂರು' ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಟ್ರೈಲರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಚಿತ್ರಕ್ಕೆ ಮೈಸೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ಇದೆ. ಜನವರಿ 12ಕ್ಕೆ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications