ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು: ಹಂಸಲೇಖಗೆ ಕೈ ಮುಗಿದ ಧನಂಜಯ್
ನಟ ವಸಿಷ್ಠ ಸಿಂಹ ತಮ್ಮದೇ ಆದ ಹೊಸ ಆಡಿಯೋ ಸಂಸ್ಥೆ ಆರಂಭಿಸಿದ್ದು, ವಸಿಷ್ಠ ಸಿಂಹರ ಹೊಸ ಸಾಹಕ್ಕೆ ಶುಭಾಶಯ ಹೇಳಲೆಂದು ಹಂಸಲೇಖ, ಡಾಲಿ ಧನಂಜಯ್ ಹಾಗೂ ಇತರ ಹಲವು ಗಣ್ಯರು ನಿನ್ನೆ ಒಂದೆಡೆ ಸೇರಿದ್ದರು.
ಮೊದಲು ಮಾತನಾಡಿದ ಹಂಸಲೇಖ ತಮ್ಮ ಹಲವು ಶಿಷ್ಯಂದಿರನ್ನು ಗುರುತಿಸಿ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.
ಬಳಿಕ ಮಾತನಾಡಿದ ನಟ ಧನಂಜಯ್, ''ನಾನು ಕೂಡ ನಿಮ್ಮ ಶಿಷ್ಯನೇ ಸಾರ್'' ಎಂದರು. ''ನೀವು ನಿಮ್ಮ ಹಾಡುಗಳ ಮೂಲಕ, ಸಾಹಿತ್ಯದ ಮೂಲಕ ಹೇಳಿಕೊಟ್ಟ ಜೀವನ ಪಾಠಗಳನ್ನು ನಾನು ಕಲಿತಿದ್ದೇನೆ. ನಿಮ್ಮ ಹಾಡುಗಳಿಂದಾಗಿ ನಾನು ಮನುಷ್ಯತ್ವ ಬೆಳೆಸಿಕೊಂಡಿದ್ದೇನೆ. ಮನುಷ್ಯನಾಗಿದ್ದೇನೆ'' ಎಂದರು ಡಾಲಿ ಧನಂಜಯ್.

''ಹಂಸಲೇಖ ಅವರು ನೀಡಿರುವ ಮೌಲ್ಯಯುತ ಹಾಡುಗಳನ್ನು ಕೇಳಿ ಎಲ್ಲರೂ ಮನುಷ್ಯರಾಗಬೇಕಿದೆ'' ಎಂದು ಡಾಲಿ ಧನಂಜಯ್ ಹೇಳಿದರು. ಮುಂದುವರೆದು, ''ನೀವು ಯುವಕರ ಪ್ರಯತ್ನಗಳಿಗೆ ಬೆನ್ನುತಟ್ಟುತ್ತೀರ, ಮನ ತುಂಬಿ ಆಶೀರ್ವಾದ ಮಾಡುತ್ತೀರ ಅದಕ್ಕೆ ನಾವು ಋಣಿ'' ಎಂದರು.
ಹಂಸಲೇಖ ಅವರು ಕೆಲವು ತಿಂಗಳ ಹಿಂದೆ ಅಸ್ಪೃಶ್ಯತೆ ವಿರೋಧಿಸುತ್ತಾ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿ ವಿವಾದಕ್ಕೆ ಈಡಾಗಿದ್ದರೂ ಡಾಲಿ ಧನಂಜಯ್, ಹಂಸಲೇಖ ಅವರಿಗೆ ನೈತಿಕ ಬೆಂಬಲ ನೀಡಿದ್ದರು.

ವಸಿಷ್ಠ ಸಿಂಹರ ಹೊಸ ಸಾಹಕ್ಕೆ ಶುಭಾಶಯ ತಿಳಿಸಿದ ಜೊತೆಗೆ, ತಮ್ಮ ಹಾಗೂ ವಸಿಷ್ಠರ ಗೆಳೆತನದ ಬಗ್ಗೆಯೂ ಮಾತನಾಡಿದ ಡಾಲಿ, ''ಯಾವುದೋ ಇಂಗ್ಲೀಷ್ ಆಲ್ಬಂ ಒಂದಕ್ಕಾಗಿ ನಾವಿಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಭೇಟಿ ಮಾಡಿದ್ದೆವು. ಆಗಷ್ಟೆ 'ಡೈರೆಕ್ಟರ್ ಸ್ಪೆಷಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದೆ. ವಸಿಷ್ಠ ಸಿಂಹನ ಧ್ವನಿ ಕೇಳಿ ಒಳ್ಳೆಯ ವಿಲನ್ ಆಗುತ್ತೀಯ ಟ್ರೈ ಮಾಡು ಅಂದಿದ್ದೆ. ಆದರೆ 'ಟಗರು' ಸಿನಿಮಾದಲ್ಲಿ ಇಬ್ಬರೂ ವಿಲನ್ ಆದ್ವಿ. ಆಗ ಅವನು ಹೇಳ್ದ, 'ನೋಡು ಹೀರೋ ಅನ್ನೋ ಗತ್ತಲ್ಲಿ ನನ್ನ ವಿಲನ್ ಆಗು ಅಂದಿದ್ದೆ. ಈಗ ಇಬ್ರು ವಿಲನ್ ಆದ್ವಿ'' ಎಂದಿದ್ದ ಎಂದು ಹಳೆಯ ನೆನಪುಗಳಿಗೆ ಜಾರಿದರು.
ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಮತ್ತೊಂದು ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. 'ಟಗರು' ಸಿನಿಮಾದಲ್ಲಿ ಗೆಳೆಯರ ಮಾತ್ರ ಮಾಡಿದ್ದ ಡಾಲಿ-ವಸಿಷ್ಠ ಹೊಸ ಸಿನಿಮಾದಲ್ಲಿ ಎದುರಾಳಿಗಳಾಗಿದ್ದಾರೆ. ಡಾಲಿ ನಿರ್ಮಾಣ ಮಾಡುತ್ತಿರುವ ಜಯರಾಜ್ ಕುರಿತ ಕತೆಯುಳ್ಳ 'ಹೆಡ್ಡು-ಬುಷ್' ಸಿನಿಮಾದಲ್ಲಿ ಜಯರಾಜ್ ಪಾತ್ರದಲ್ಲಿ ಡಾಲಿ ನಟಿಸಿದರೆ, ವಸಿಷ್ಠ ಸಿಂಹ ಕೊತ್ವಾಲನ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











