ಬರ್ತಿದ್ದಾರೆ 'ದಂಧೆ ಬಾಯ್ಸ್' ಹಿಂದಿಲ್ಲ ಮುಂದಿಲ್ಲ
ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಅವರು ಫಾರಿನ್ ಹುಡುಗಿ ಕೈಹಿಡಿದ ಮೇಲೆ ಇದೀಗ ಮತ್ತೆ ಟ್ರ್ಯಾಕ್ ಗೆ ಮರಳಿದ್ದಾರೆ. ಅವರ ಹೊಸ ಚಿತ್ರಕ್ಕೆ ದಂಧೆ ಬಾಯ್ಸ್ ಎಂದು ಹೆಸರಿಡಲಾಗಿದೆ. ಚಂದ್ರಹಾಸ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ನಿರ್ದೇಶಕ ಚಂದ್ರಹಾಸ ಅವರು ಒಂದು ನೈಜವಾದ ಸ್ಲಮ್ ಆಯ್ಕೆ ಮಾಡಿಕೊಂಡು ನಾಯಕ ಹಾಗೂ ನಾಯಕಿಯ ನಡುವಿನ ಪ್ರೇಮದ ಆಟವನ್ನು ಜಾಲಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಭುವನೇಶ್ವರಿ ನಗರದಲ್ಲಿ ಇತ್ತೀಚಿಗೆ ಚಿತ್ರೀಕರಿಸಿಕೊಂಡರು. [ಲಂಡನ್ ನಲ್ಲಿ ಜಗ್ಗೇಶ್ ಪುತ್ರನ ವಿವಾಹ ಮಹೋತ್ಸವ]

ಬಿರುಸಾದ ವೇಗದಲ್ಲಿ ಚಲಿಸುವ ಚಿತ್ರ ಹಳ್ಳಿಯಿಂದ ಬಂದ ಹುಡುಗರು ಪಟ್ಟಣದ ಇರುವ ಡಾನ್ ಅನ್ನು ಮುಗಿಸಿ ತಾವು ಆ ಸ್ಥಾನವನ್ನು ಆಕ್ರಮಿಸುವ ಹಂಬಲ ಇರುತ್ತದೆ. ಈ ಯುವಕರ ದಂಡೆ ಗುರುರಾಜ್, ಮಾದೇಶ್ ಹಾಗೂ ಹೇಮಂತ್. ಜೊತೆಗೆ ಶರತ್ ಲೋಹಿತಾಶ್ವ, ಪೊನ್ನಂಬಲ, ರಾಜ್ ಬಹದ್ದೂರ್ ಸಹ ತಾರಾಗಣದಲ್ಲಿ ಇದ್ದಾರೆ.
ನಿರ್ಮಾಪಕ ಪ್ರಭಾಕರ್ (ಹಿಂದೆ ಇವರು ಪ್ರಭಾಕರ್ ರೆಡ್ಡಿ ಆಗಿ 'ಸಂಸಾರದಲ್ಲಿ ಗೋಲ್ ಮಾಲ್' ಸಿನಿಮಾ ತಯಾರಿಸಿದ್ದರು. ಚಿತ್ರಕ್ಕೆ ನಾಯಕಿಯನ್ನು ಕಾಫೀ ಡೇಯಲ್ಲಿ ಸಂದರ್ಶನ ಮಾಡಿ ಆಯ್ಕೆ ಮಾಡಿದ್ದಾರೆ. 130 ಹೊಸ ಹುಡುಗಿಯರನ್ನು ಭೇಟಿ ಮಾಡಿ ಕೊನೆಗೆ ತನುಜಾ ಅವರನ್ನು ಆಯ್ಕೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಸೌಜನ್ಯಾ ವೇಶ್ಯೆ ಪಾತ್ರವನ್ನು ಮಾಡುತ್ತಿದ್ದಾರೆ.

ಈ ಹಿಂದೆ 'ಕುಂಭ ರಾಶಿ' ಸಿನಿಮಾ ನಿರ್ದೇಶನ ಮಾಡಿದ್ದ ಚಂದ್ರಹಾಸ್ ಅವರು ಈ ಚಿತ್ರವನ್ನೂ 35 ದಿವಸಗಳಲ್ಲಿ ಮಾತಿನ ಭಾಗವನ್ನು ಚಿತ್ರೀಕರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲನೇ ಹಂತದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಲೆ ಮಾದೇಶ್ವರ ಬೆಟ್ಟ ಚಿತ್ರೀಕರಣವಾಗುವ ಸ್ಥಳಗಳು. ಎರಡನೇ ಹಂತದಲ್ಲಿ ಸಾಹಸ ಹಾಗೂ ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ಎಂಬುದು ಅವರ ಯೋಜನೆ.

ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ, ಶ್ರೀವತ್ಸ ಐದು ಹಾಡುಗಳಿಗೆ ಸಂಗೀತ, ಪಿ ಎಲ್ ರವಿ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಅವರ ಸಂಕಲನ, ಉಮೇಶ್, ಚಾಮರಾಜ್ ಹಾಗೂ ರಾಮು ಅವರ ನೃತ್ಯ ನಿರ್ದೇಶನ ಒದಗಿಸಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











