ಮೈಸೂರು ಹುಲಿ ಮರಿಗೆ ದರ್ಶನ್ ಮಗನ ಹೆಸರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಬಲು ಪ್ರೀತಿ. ಈ ಹಿಂದೆ ಅವರು ಹಲವಾರು ಸಲ ಪ್ರಾಣಿಗಳನ್ನು ದತ್ತು ಪಡೆದು ಮುಗ್ಧ ಪ್ರಾಣಿಗಳ ಬಗ್ಗೆ ಅನುಕಂಪ, ದಯೆ ತೋರಿದ್ದಾರೆ. ಈ ಬಾರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಮರಿಯೊಂದನ್ನು ದತ್ತು ಪಡೆದಿದ್ದಾರೆ.
ಮೃಗಾಲಯದಲ್ಲಿ ಮಾನ್ಯ ಹುಲಿಗೆ ಜನಿಸಿದ ನಾಲ್ಕು ಹುಲಿ ಮರಿಗಳ ಪೈಕಿ ಒಂದನ್ನು ದರ್ಶನ್ ರು.1 ಲಕ್ಷ ನೀಡಿ ದತ್ತು ಪಡೆದಿದ್ದಾರೆ. ಭಾನುವಾರ (ಸೆ.22) ದರ್ಶನ್ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಅವರು ಹುಲಿ ಮರಿಯನ್ನು ದತ್ತು ಪಡೆದರು.
ತಾನು ದತ್ತು ಪಡೆದಿರುವ ಹುಲಿ ಮರಿಗೆ ತಮ್ಮ ಮಗ ವಿನೀಶ್ ಹೆಸರಿಡುವಂತೆ ಅವರು ಮನವಿ ಮಾಡಿದ್ದಾರೆ. ಮೃಗಾಲಯದ ಅಧಿಕಾರಿಗಳು ದರ್ಶನ್ ಮನವಿಯನ್ನು ಸ್ವೀಕರಿಸಿದ್ದು ಹುಲಿಗೆ ವಿನೀಶ್ ಎಂದು ಹೆಸರಿಡುವ ಬಗ್ಗೆ ತೀರ್ಮಾನಿಸಿದ್ದಾರೆ.ಈ ಹಿಂದೆ ಇದೇ ಮೃಗಾಲಯದ ಮಾದೇಶ ಎಂಬ ಆನೆ ಮರಿಯನ್ನು ದರ್ಶನ್ ದತ್ತು ಪಡೆದಿದ್ದರು. ರು.35 ಸಾವಿರ ನೀಡಿ ಅದರ ದತ್ತು ಅವಧಿಯನ್ನೂ ನವೀಕರಿಸಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಪ್ರಾಣಿಗಳೊಂದಿಗೆ ಕಳೆಯುವುದೆಂದರೆ ದರ್ಶನ್ ಗೆ ಎಲ್ಲಿಲ್ಲದ ಖುಷಿ.ಅವರ ತೋಟದ ಮನೆಯಲ್ಲಿ ಮುದ್ದಾದ ನಾಯಿಮರಿಗಳು, ಕುದುರೆಗಳು, ಹಸುಗಳು ಹಾಗೂ ಕೆಲವೊಂದು ಆಕರ್ಷಕವಾಗಿರುವ ಪಕ್ಷಿಗಳನ್ನು ಕಾಣಬಹುದು. (ಏಜೆನ್ಸೀಸ್)


Click it and Unblock the Notifications












