ಟಿವಿಯಲ್ಲಿ ಕಂಡ 'ಸಾರಥಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಸಂಗೊಳ್ಳಿ ರಾಯಣ್ಣ' ಚಿತ್ರವು ನವೆಂಬರ್ 01, 2012ರ ರಾಜ್ಯೋತ್ಸವದಂದು ಪ್ರಸಾರ ಕಾಣಲಿದೆ ಎಂಬುದು ಸದ್ಯದ ಮಾಹಿತಿ. ಈ ಚಿತ್ರದ ನಿರೀಕ್ಷೆಗೆ ದರ್ಶನ್ ನಾಯಕತ್ವದ, ಕಳೆದ ವರ್ಷದ ಸೂಪರ್ ಹಿಟ್ ದಾಖಲೆಯ 'ಸಾರಥಿ' ಚಿತ್ರ ಸಾಥ್ ನೀಡಿದೆ ಎಂಬ ಅಂಶವೀಗ ಬಹಿರಂಗಗೊಂಡಿದೆ. ಕಿರುತೆರೆಯಲ್ಲಿ ಮೊದಲಬಾರಿಗೆ ಪ್ರಸಾರವಾದ 'ಸಾರಥಿ', ನಿರೀಕ್ಷೆ ಮೀರಿ ಟಿಆರ್ ಪಿ ಗಳಿಸಿದೆ. ಕಾರಣ 'ಚಿಂಗಾರಿ' ನಂತರ ದರ್ಶನ್ ನಾಯಕತ್ವದ ಯಾವುದೇ ಚಿತ್ರ ತೆರೆಕಂಡಿಲ್ಲ.
ಇತ್ತೀಚಿಗೆ ದಸರಾ ಹಬ್ಬದ ನಿಮಿತ್ತ ಉದಯವಾಹಿನಿಯಲ್ಲಿ ಪ್ರಸಾರವಾದ ದರ್ಶನ್ ಚಿತ್ರ 'ಸಾರಥಿ', ಬಹುನಿರೀಕ್ಷೆಯನ್ನೂ ಮೀರಿ ದಾಖಲೆ 'ಟಿಆರ್ ಪಿ' ಗಳಿಸಿದೆ. ದಿನಾಂಕ 24.10.2012 ರಂದು ಸಾಯಂಕಾಲ 6-00 ಗಂಟೆಯಿಂದ ರಾತ್ರಿ 10-30ರ ವರೆಗೆ ಉದಯ ಟಿವಿಯಲ್ಲಿ ಪ್ರಸಾರವಾದ 'ಸಾರಥಿ' ಚಿತ್ರ, ಅಂದು ಕರ್ನಾಟಕದ ಮೂಲೆಮೂಲೆಯ ಮನೆಯನ್ನೂ ತಲುಪಿ 'ದರ್ಶನ'ಭಾಗ್ಯ ನೀಡಿದೆ. ದರ್ಶನ್ ಅಭಿಮಾನಿಗಳಲ್ಲದೇ ಬಹಳಷ್ಟು ಸಿನಿಪ್ರೇಕ್ಷಕರು ಅಂದು 'ಸಾರಥಿ' ನೋಡುವ ಸಲುವಾಗಿ ಮನೆಬಿಟ್ಟು ಹೊರಹೋಗಿರಲಿಲ್ಲ.
ದರ್ಶನ್ ನಾಯಕತ್ವ, 'ದಿನಕರ್ ತೂಗುದೀಪ್' ನಿರ್ದೇಶನದ, 'ಸಾರಥಿ' ಚಿತ್ರವು ಕಿರುತೆರೆಯಲ್ಲಿ ಪ್ರಸಾರ ಕಂಡ 'ದರ್ಶನ್' ನಟನೆಯ ಚಿತ್ರಗಳಲ್ಲೇ ಅತಿಹೆಚ್ಚು "ಟಿಆರ್ ಪಿ" ದಾಖಲಿಸಿದೆ. ಸುಮಾರು 6:30ಕ್ಕೆ ಪ್ರಾರಂಭವಾದ ಚಿತ್ರವು ಸುಮಾರು 10.40ರವರೆಗೆ ಪ್ರಸಾರ ಕಂಡು 4 ಗಂಟೆ 40 ನಿಮಿಷಗಳ ಸುದೀರ್ಘ ಅವಧಿ ಬಾಚಿಕೊಂಡಿದೆ. ದರ್ಶನ್ ವೈಯಕ್ತಿಕ ಸಮಸ್ಯೆಯಲ್ಲಿದ್ದಾಗ ತೆರೆಕಂಡು ದಾಖಲೆಯ ಗಳಿಕೆ ಕಂಡಿದ್ದ 'ಸಾರಥಿ', ಕಿರುತೆರೆಯಲ್ಲೂ ಭಾರೀ ದಾಖಲೆ ಬರೆದಿದೆ.
ಕಿರುತೆರೆಯಲ್ಲಿ ಪ್ರಸಾರವಾದ 'ಸಾರಥಿ' ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರನ್ನೂ ರಂಜಿಸಲು ಸಫಲವಾಗಿದೆ. ಅಷ್ಟೇ ಅಲ್ಲ, ಈ ಚಿತ್ರವು ದರ್ಶನ್ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರಿಗೆ ಮಹಾ ಸಂಚಲನವನ್ನೇ ಉಂಟುಮಾಡಿದೆ. ಹೀಗಾಗಿ ಮುಂಬರುವ ದರ್ಶನ್ ಚಿತ್ರ 'ಸಂಗೊಳ್ಳಿ ರಾಯಣ್ಣ' ಬಗ್ಗೆ ಎಲ್ಲರೂ ಕಾಯುವಂತಾಗಿದೆ. ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ಐತಿಹಾಸಿಕ ಚಿತ್ರದ ಪಾತ್ರದಲ್ಲಿ ದರ್ಶನ್ ಅಭಿನಯ ನೋಡಲು ಎಲ್ಲರೂ ಕಾತರರಾಗಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











