ಕುರುಕ್ಷೇತ್ರ ಸಿನಿಮಾ ನಿರ್ಮಿಸುತ್ತೇನೆಂದಾಗ ಮುನಿರತ್ನರನ್ನು ಬೈದಿದ್ದರು ದರ್ಶನ್
ನಟ ದರ್ಶನ್ ನಿನ್ನೆಯಷ್ಟೆ ಆರ್ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಭಾರಿ ಅದ್ಧೂರಿಯಾಗಿ ಪ್ರಚಾರ ಮಾಡಿದ್ದಾರೆ. ಬೆಳಿಗಿನಿಂದ ಸಂಜೆ ವರೆಗೆ ತೆರೆದ ವಾಹನದಲ್ಲಿ ದರ್ಶನ್ ಪ್ರಚಾರ ಮಾಡಿದ್ದಾರೆ. ಈ ಸಮಯ ದರ್ಶನ್ ಅವರನ್ನು ಕಾಣಲು ಸಾವಿರಾರು ಮಂದಿ ನೆರೆದಿದ್ದು, ಪ್ರಚಾರ ಕಾರ್ಯಕ್ರಮ ಬಹುದೊಡ್ಡ ಯಶಸ್ಸಾಗಿದೆ.
Recommended Video
ಪ್ರಚಾರ ಸಭೆಯಲ್ಲಿ ನಟ ದರ್ಶನ್ ಅವರು ಭಾಷಣ ಸಹ ಮಾಡಿದ್ದು, ಮುನಿರತ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಮುನಿರತ್ನ ಅವರನ್ನು ಬೆಂಬಲಿಸುವಂತೆಯೂ ಮನವಿ ಮಾಡಿದ್ದಾರೆ.
ರಾಜಕಾರಣಿ ಅಲ್ಲದಿರುವ ದರ್ಶನ್, ಚುನಾವಣಾ ಭಾಷಣದ ವೇಳೆ, ಮುನಿರತ್ನ ಬಗ್ಗೆ ತಾವು ಕಂಡಂತೆ, ತಾವು ಗಮನಿಸಿದ್ದನ್ನು ಜನರ ಮುಂದಿಟ್ಟಿದ್ದಾರೆ. ಈ ವೇಳೆ ಕುರುಕ್ಷೇತ್ರ ಸಿನಿಮಾದ ಬಗ್ಗೆಯೂ ಮಾತನಾಡಿದ್ದು, ಗಮನ ಸೆಳೆದಿದೆ.

ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ
ನಿರ್ಮಾಪಕ ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಹಳೆಯ ವಿಚಾರ, ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ , ಮೇಘನಾ ರಾಜ್, ಸ್ನೇಹಾ, ಸೋನು ಸೂದ್, ಶಶಿ ಕುಮಾರ್ ಇನ್ನೂ ಹಲವರು ನಟಿಸಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು.

ಮುನಿರತ್ನರನ್ನು ಬೈದು ಕಳಿಸಿದ್ದರಂತೆ ದರ್ಶನ್
ಆದರೆ ಕುರುಕ್ಷೇತ್ರ ಸಿನಿಮಾ ಮಾಡುವ ಆಸೆ ಹೊತ್ತು ಮುನಿರತ್ನ ಮೊದಲಿಗೆ ದರ್ಶನ್ ಅವರನ್ನು ಭೇಟಿಯಾದಾಗ ದರ್ಶನ್ ಬೈದು ಕಳಿಸಿಬಿಟ್ಟಿದ್ದರಂತೆ. ಕುರುಕ್ಷೇತ್ರ ಬಹಳ ದೊಡ್ಡ ಬಜೆಟ್ ಬೇಡುವ ಸಿನಿಮಾ, ಅದು ಕನ್ನಡದ ಮಾರುಕಟ್ಟೆಗೆ ಸರಿಹೊಂದುವುದಿಲ್ಲವೇನೋ ಎಂಬುದು ದರ್ಶನ್ ಯೋಚನೆಯಾಗಿತ್ತು.

ಏನಾದ್ರು ಕೆಲ್ಸಾ ಇದ್ರೆ ಮಾಡು ಹೋಗು ಎಂದಿದ್ದೆ: ದರ್ಶನ್
ಈ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ದರ್ಶನ್, 'ಕುರುಕ್ಷೇತ್ರ ಸಿನಿಮಾ ಬಗ್ಗೆ ಮುನಿರತ್ನ ಹೇಳಿದಾಗ, ಬೈದುಬಿಟ್ಟಿದ್ದೆ. ಏನಾದರೂ ಕೆಲಸ ಇದ್ರೆ ಮಾಡಿಕೋ ಹೋಗಣ್ಣ, ರಸ್ತೆ ರಿಪೇರಿ ಮಾಡಿಸಬೇಕೇನೋ, ಕ್ಷೇತ್ರದ ಬೇರೆ ಕೆಲಸಗಳಿವೆಯೇನೋ ಮಾಡಿಕೋ ಹೋಗು ಎಂದಿದ್ದೆ' ಎಂದಿದ್ದಾರೆ ದರ್ಶನ್.

ಮುನಿರತ್ನಗೆ ಬಹಳ ಧೈರ್ಯವಿದೆ: ದರ್ಶನ್
ಕುರುಕ್ಷೇತ್ರ ಅಂಥಹಾ ಬಹುತಾರಾಗಣದ, ಬಹು ದೊಡ್ಡ ಬಜೆಟ್ನ, ಬಹಳ ತಾಳ್ಮೆ, ಹಣ ಬೇಡುವ ಸಿನಿಮಾ ಮಾಡಲು ಒಂದು ಗುಂಡಿಗೆ ಸಾಕಾಗುವುದಿಲ್ಲ, ಅದಕ್ಕೆ ಬಹಳ ಗುಂಡಿಗೆಗಳು ಬೇಕು, ಆ ಧೈರ್ಯ ಮುನಿರತ್ನ ಅವರ ಬಳಿ ಇದೆ. ಅವರು ಜೀವನದುದ್ದಕ್ಕೂ ಸವಾಲುಗಳನ್ನು ಎದುರಿಸಿ ಬಂದವರು, ಅದಕ್ಕೆ ಅವರೆಂದರೆ ನನಗೆ ಗೌರವ ಎಂದಿದ್ದಾರೆ ದರ್ಶನ್.


Click it and Unblock the Notifications











