ದಸರಾ ಪುಷ್ಪೋತ್ಸವದಲ್ಲಿ ಪುನೀತ್ ರಾಜ್ಕುಮಾರ್
ಪುನೀತ್ ರಾಜ್ಕುಮಾರ್ ಹಾಗೂ ರಾಜ್ಕುಮಾರ್ ಅವರ ಹೆಸರಿನಲ್ಲಿ ಈ ಬಾರಿಯ ಸ್ವಾತಂತ್ರೋತ್ಸವಕ್ಕೆ ಲಾಲ್ಬಾಗ್ನಲ್ಲಿ ಪುಷ್ಪೋತ್ಸವವನ್ನು ಆಯೋಜಿಸಲಾಗಿತ್ತು. ಅಪ್ಪು-ಅಣ್ಣಾವ್ರು ಥೀಮ್ನ ಪುಷ್ಪಪ್ರದರ್ಶನವನ್ನು ಬೆಂಗಳೂರಿನಲ್ಲಿ ಸಾವಿರಾರು ಮಂದಿ ವೀಕ್ಷಿಸಿದರು.
ಇದೀಗ ನಾಡಹಬ್ಬ ಮೈಸೂರು ದಸರಾ ಪ್ರಾರಂಭವಾಗಲಿದ್ದು, ಈ ಸಂಬಂಧ ಆಯೋಜಿಸಲಾಗುತ್ತಿರುವ ಹಲವು ಕಾರ್ಯಕ್ರಮ, ಆಕರ್ಷಣೆಗಳಲ್ಲಿ ಪುಷ್ಪಪ್ರದರ್ಶನವೂ ಒಂದಾಗಿದೆ. ದಸರಾ ಫಲ-ಪುಷ್ಪೋತ್ಸವದಲ್ಲಿ ಸಹ ಪುನೀತ್ ರಾಜ್ಕುಮಾರ್ ರಾರಾಜಿಸಲಿದ್ದಾರೆ.
ದಿ.ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಗಳನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುತ್ತದೆ ಈ ವಿಷಯವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್.ತಿಳಿಸಿದ್ದಾರೆ.

ದಸರಾ ಫಲಪುಷ್ಪ ಪ್ರದರ್ಶನವನ್ನು ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್ ಇಲ್ಲಿ ಸೆ.26ರಿಂದ ಅ.5ರವರೆಗೆ ಆಯೋಜಿಸಲಾಗಿದೆ. 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿ ಗಳಿಂದ ಸುಮಾರು 20ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುವುದು. ಮೈಸೂರು ರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ತಂಡೀ ಸಡಕ್ ನ್ನು ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತದೆ ಎಂದಿದ್ದಾರೆ.
7 ಅಡಿ ಜೇನುಹುಳು, 12 ಅಡಿ ಜಿರಾಫೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಲವು ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುವುದು. 7ಅಡಿ ದಪ್ಪ ಮೆಣಸಿನ ಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುವುದು ಎಂದರು. ಇತರ ವೈವಿಧ್ಯಮಯದಿಂದ ಕೂಡಿದ ಕಾನ್ಸೆಪ್ಟ್ ಗಳನ್ನು ನಿರ್ಮಿಸಲಾಗುವುದು. ಡೈರಿ ಡೇ, ಉಲ್ಲಾಸ್ ಅಗರ್ ಬತ್ತೀಸ್, ಸುವರ್ಣ ಚಾನೆಲ್ ಪ್ರಾಯೋಜಕತ್ವ ವಹಿಸಿದ್ದು, ಸಂಜೆಯ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಇಲಾಖೆಯಿಂದ 50ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆದಿದ್ದು ಇಡೀ ಕುಪ್ಪಣ್ಣ ಪಾರ್ಕ್ ನ್ನು ಹೂವುಗಳಿಂದ ಅಲಂಕರಿಸಲಾಗುವುದು. ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳು, ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಐಐಹೆಚ್ ಆರ್, ಸಿಡಿಬಿ, ಎನ್ ಹೆಚ್ ಬಿ, ಸಿಎಫ್ ಟಿಆರ್ ಐ ಸಂಸ್ಥೆಗಳಿಗೆ ಪತ್ರ ಬರೆದಿದ್ದು ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.


Click it and Unblock the Notifications











