ಅದ್ದೂರಿ ಧ್ರುವ ಸರ್ಜಾ ಈಗ ಬಹದ್ದೂರ್ ಹುಡುಗ
ತಮ್ಮ ಆರಂಭದ ಚಿತ್ರ 'ಅದ್ದೂರಿ' ಮೂಲಕ ಭರವಸೆ ಹುಟ್ಟಿಸಿರುವ ಧ್ರುವ ಸರ್ಜಾ ಅವರು ಕೆಲದಿನಗಳಿಂದ ಸುದ್ದಿಯಲ್ಲೂ ಇಲ್ಲ ಸುಳಿವೂ ಇಲ್ಲ. ಈಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಚಿತ್ರದ ಹೆಸರು 'ಬಹದ್ದೂರ್'.
ತಮ್ಮ ಚೊಚ್ಚಲ ಚಿತ್ರ 'ಅದ್ದೂರಿ' 25 ಕೇಂದ್ರಗಳಲ್ಲಿ ಸೆಂಚುರಿ ಬಾರಿಸಿದರೂ ಧ್ರುವ ಸರ್ಜಾ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಸರಿಸುಮಾರು 40 ಸ್ಕ್ರಿಪ್ಟ್ ಗಳನ್ನು ನೋಡಿ ತಮ್ಮ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದಕ್ಕಾಗಿಯೇ ಇಷ್ಟೊಂದು ತಡವಾಯಿತು ಎನ್ನಲಾಗಿದೆ. ಅದ್ದೂರಿ ಚಿತ್ರ ವಿಮರ್ಶೆ ಓದಿ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಸೋದರಿಯರ ಪುತ್ರ ಧ್ರುವ ಸರ್ಜಾ ಅವರ ಹೊಸ ಚಿತ್ರ ಜನವರಿ ವೇಳೆಗೆ ಸೆಟ್ಟೇರಲಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಚೇತನ್. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.
'ಅದ್ದೂರಿ' ನಿರ್ದೇಶಕ ಅರ್ಜುನ್ ಗೆ ಸಹಾಯಕರಾಗಿ ಹಾಗೂ ರಜನಿಕಾಂತ, ಪುಲಕೇಶಿ, ವರದನಾಯಕ ಮುಂತಾದ ಚಿತ್ರಗಳಿಗೆ ಹಾಡುಗಳನ್ನೂ ಬರೆದಿದ್ದಾರೆ ಚೇತನ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಂದರ್ ಬಾಹರ್ ಚಿತ್ರ ನಿರ್ಮಿಸಿರುವ ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.
ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಮತ್ತು ಶ್ರೀನಿವಾಸ್ ಚಿತ್ರದ ನಿರ್ಮಾಪಕರು. ಆಸ್ಕರ್ ಪ್ರಶಸ್ತಿ ಪಡೆದ ಜೈಹೋ ಹಾಡಿನಲ್ಲಿ ಹಾಡಿದ್ದ ವಿಜಯಪ್ರಕಾಶ್ ಈ ಚಿತ್ರದ ಸಂಗೀತ ನಿರ್ದೇಶಕರು. ಸತ್ಯಹೆಗಡೆ ಛಾಯಾಗ್ರಾಹಕರಾಗಿ ಆಯ್ಕೆಯಾಗಿರುವ ಈ ನೂತನ ಚಿತ್ರದ ಉಳಿದ ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆ ಪ್ರಗತಿಯಲ್ಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











