ಪುನೀತ್ ರಾಜ್ಕುಮಾರ್ ಬಗ್ಗೆ ಸಿನಿ ಸಾಹಿತಿ ಮಾಸ್ತಿಯ ಭಾವುಕ ಬರಹ
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಾಗೂ ಅವರ 'ಜೇಮ್ಸ್' ಸಿನಿಮಾ ಬಿಡುಗಡೆಯನ್ನು ನಿನ್ನೆ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ.
ಅಭಿಮಾನಿಗಳು ಮಾತ್ರವೇ ಅಲ್ಲದೆ ಹಲವು ಸಿನಿಮಾ ಸೆಲೆಬ್ರಿಟಿಗಳು ಪುನೀತ್ ಅವರನ್ನು ಅವರದ್ದೇ ಆದ ರೀತಿಯಲ್ಲಿ ನಿನ್ನೆ ನೆನಪಿಸಿಕೊಂಡಿದ್ದಾರೆ. ಅಪ್ಪು ಆಪ್ತರು ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ. ಆದರೆ ಕೆಲವರ ಪೋಸ್ಟ್ಗಳು ಮಾತ್ರ ಹೃದಯವನ್ನು ಕಲಕುವಂತಿವೆ. ಅವುಗಳಲ್ಲಿ ಸಂಭಾಷಣೆ, ಚಿತ್ರಕತೆ ಬರಹಗಾರ ಮಾಸ್ತಿ ಅವರ ಬರಹವೂ ಒಂದು.
ಸಂಭಾಷಣೆಕಾರ ಮಾಸ್ತಿ ಅವರ ಬಗ್ಗೆ ಪುನೀತ್ ರಾಜ್ಕುಮಾರ್ಗೆ ವಿಶೇಷ ಪ್ರೀತಿ ಇತ್ತು, 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಮಾಸ್ತಿಯವರನ್ನು ಅಪ್ಪು ಹೊಗಳಿದ್ದರು. ಅಪ್ಪು ಬಗ್ಗೆ ಮಾಸ್ತಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಭಾವುಕ ಸಾಲುಗಳು ಯಥಾವತ್ತು ಇಲ್ಲಿವೆ...

''ಸಮಯವನ್ನ ಬೈಕೊಂಡ್ವಿ , ವಿಧಿಯನ್ನ ಬೈಕೊಂಡ್ವಿ, ವೈದ್ಯರನ್ನ , ವ್ಯವಸ್ಥೆಯನ್ನ , ವಾಹನ ದಟ್ಟಣೆಯನ್ನ, ವ್ಯಾಯಾಮವನ್ನ, ಕೊನೆಗೆ ಭಗವಂತನನ್ನೂ ಬೈಕೊಂಡ್ಬಿಟ್ವಿ..... ಯಾರನ್ನ ಬೈಕೊಂಡ್ ಏನ್ ಪ್ರಯೋಜನ ?
ಜೀವನ ಇಷ್ಟೇ , ಬದುಕು ಅನಿಶ್ಚಿತ ಅಂತ ನಿಮ್ಮ ಅಗಲಿಕೆಯ ನೋವನ್ನು ನುಂಗಲು , ದುಃಖವನ್ನ ಮರೀಬೇಕು ಅಂತ ಗಟ್ಟಿ ಮನಸ್ಸು ಮಾಡ್ಕೊಂಡು ಕಾದ್ವಿ !
ನಿಮ್ಮ ಅಭಿನಯದ ಸಿನಿಮಾಗಳು, ನೀವಾಡಿದ ಹಾಡುಗಳು, ಹಾಡುಗಳಿಗೆ ನೀವಾಕಿದ ಹೆಜ್ಜೆಗಳು, ನಟಿಸಿದ ಜಾಹಿರಾತುಗಳು , ನಿರ್ವಹಿಸಿದ ಕಾರ್ಯಗಳು , ನಿರೂಪಿಸಿದ ಕಾರ್ಯಕ್ರಮಗಳು, ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಲಕ್ಷಾಂತರ ಸೆಲ್ಫಿಗಳು, ಚೆಂದದ ಫೋಟೋಗಳು, ನಗುಮೊಗದ ಅತ್ಯಾಕರ್ಷಕ ಫ್ಲೆಕ್ಸ್ ಗಳು, ಹಳ್ಳಿ ಪಟ್ಟಣ ನಗರವೆನ್ನದೇ ರಸ್ತೆ ಬೀದಿಯ ಆಳಗಲಕ್ಕೂ ಗಲ್ಲಿ ಗಲ್ಲಿಗಳಲ್ಲಿ ರಾರಾಜಿಸುತ್ತಿತ್ತು ! ನಿಮ್ಮನ್ನ ಮರೆಯೋದಿರ್ಲಿ ಅರೆಕ್ಷಣ ಹಂಗ್ ಯೋಚನೆ ಮಾಡಕ್ಕೂ ಸಾಧ್ಯವಿಲ್ಲ ಅನ್ನಿಸ್ತು !
ನೀವಿಲ್ಲ ಅನ್ನೋ ಕಹಿ ಸತ್ಯ ಯಾರೊಬ್ಬರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ . ಜೀವ ಕೈಲಿಡಿದ ಎಷ್ಟೋ ಹಿರಿಜೀವಗಳು 'ಭಗವಂತ ಅವನ ಬದಲಿಗೆ ನನ್ನನಾದ್ರೂ ಕರ್ಕೊಂಡು ಹೋಗ್ಬಾರ್ದಿತ್ತ' ಅಂತ ಮರುಗುತ್ತಿದ್ದಾರೆ . ಸಣ್ಣ ಮಕ್ಕಳಿಂದ ಹಿಡಿದು ಯುವಕರವರೆಗೂ ತಮ್ಮೊಳಗೆ ಬೇಸರಿಸಿಕೊಳ್ಳುತ್ತಿದ್ದಾರೆ ! ಬದುಕು ಕೊಟ್ಟ ಭಗವಂತ ಆ ಬದುಕನ್ನ ಅರ್ಥಪೂರ್ಣವಾಗಿ ಬದುಕಿದಂತಹ ನಿಮಗೇ ಯಾಕೋ ಆಯಸ್ಸು ಕೊಡದೇ ಹೋದ.
ಇವತ್ತು ನಾಡಿನ ಪ್ರತಿ ವೃತ್ತದಲ್ಲೂ ಪ್ರತೀ ಚೌಕದಲ್ಲೂ ನಿಮ್ಮ ಪೋಸ್ಟರ್ರೋ ಬ್ಯಾನರ್ರೋ ಪುತ್ಥಳಿಯೋ ಕಾಣಸಿಗುತ್ತದೆ ! ಪುತ್ಥಳಿ ಆಗಬೇಕು ಅಂದ್ರೆ ಅದು ಮನುಷ್ಯತ್ವದ ತಳಿಗೂ ಮೀರಿದ ದೈವತ್ವವಿರಬೇಕು ಅದು ನಿಮ್ಮಲ್ಲಿತ್ತು .
ಚಪ್ಪಲಿ ಬಹಳ ಹೊತ್ತು ನಮ್ಮ ಜೊತೆಯಿರುತ್ತೆ ಆದರೆ ಊಟದ ತಟ್ಟೆ ಕಡಿಮೆ ವೇಳೆ ಇದ್ದರೂ ಅದು ನಮ್ಮಿಂದ ನಮಿಸಲ್ಪಡುತ್ತದೆ . ನೀವು ನಮಿಸುವ ಊಟದ ತಟ್ಟೆ . ಅದೂ ಅಂತಿಂತ ತಟ್ಟೆಯಲ್ಲ 'ರಾಜ'ನೊಬ್ಬ ಬಹಳ ಪ್ರೀತಿಯಿಂದ ಮಾಡಿಸಿಟ್ಟಿದ್ದ ಚಿನ್ನದ ತಟ್ಟೆ , ವಿಧಿ ಅದನ್ನು ಅನಾಯಾಸವಾಗಿ ಕದ್ದೊಯ್ದಿದ್ದಾನೆ ಹಿಂದಿರುಗಿಸಲು ಕೇಳೋಣವೆಂದರೆ ಕರಗಿಸಿಬಿಟ್ಟಿದ್ದಾನೆ .
ಇಂದು ನೀವಿಲ್ಲ .....ಆದರೆ ನೀವಿಲ್ಲದ ನೆಲವಿಲ್ಲ ಜಲವಿಲ್ಲ ಗಾಳಿಯಿಲ್ಲ .........''
ಮಾಸ್ತಿ ಈಗಾಗಲೇ ಶಿವರಾಜ್ ಕುಮಾರ್ ಅವರ ಎರಡು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು, ಪುನೀತ್ ರಾಜ್ಕುಮಾರ್ ಅವರ ಸಿನಿಮಾಕ್ಕೂ ಅವರು ಕೆಲಸ ಮಾಡಬೇಕಿತ್ತು, ಆದರೆ ವಿಧಿ ಬೇರೆಯದ್ದನ್ನೇ ಎಣಿಸಿತ್ತು.


Click it and Unblock the Notifications











