'ಅಂತ' ಚಿತ್ರದ ಅಂತರಂಗ ಬಿಚ್ಚಿಟ್ಟ ಅಂಬರೀಶ್
ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ಅಂತ' ನೀವು ನೋಡಿರಬಹುದು. ಆ ಚಿತ್ರದಲ್ಲಿ ಅಂಬರೀಶ್ ಉಗುರು ಕೀಳುವ ದೃಶ್ಯ ನಿಮಗೆ ನೆನಪಿರಬಹುದು.
ಅಂಬರೀಶ್ ರವರ ಉಗುರು ಕೀಳುವ ದೃಶ್ಯ ನೋಡಿ, ನೀವೆಲ್ಲಾ 'ಅಂತ' ಚಿತ್ರದ ವಿಲನ್ ಗಳಿಗೆ ಶಾಪ ಹಾಕಿರ್ತೀರಾ. ಆದ್ರೆ, ಈ ಸನ್ನಿವೇಶ ಬೇಡವೇ ಬೇಡ ಅಂತ ಅಂದು ಅಂಬರೀಶ್ ಪ್ರತಿಭಟಿಸಿದ್ದರಂತೆ.
''ಯಾಕೆ ಇಂತಹ ಹಿಂಸೆಯ ಸನ್ನಿವೇಶಗಳನ್ನ ಇಡುತ್ತೀರಾ. ನನ್ನ ಕೈಯಲ್ಲಿ ಇದೆಲ್ಲಾ ನೋಡೋಕೆ ಆಗಲ್ಲ. ಈ ಸೀನ್ ಬೇಡ'' ಅಂತ 'ಅಂತ' ಚಿತ್ರದ ನಿರ್ದೇಶಕರಿಗೆ ಅಂಬರೀಶ್ ಹೇಳಿದ್ದರಂತೆ.

ಈಗ ಈ ವಿಚಾರವನ್ನ ನಾವು ಹೇಳುವುದಕ್ಕೆ ಹಾಗೂ ಅಂಬರೀಶ್ ನೆನಪಿಸಿಕೊಳ್ಳುವುದಕ್ಕೆ ಕಾರಣ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರವರ ಅಪ್ಪಟ ಅಭಿಮಾನಿ ಸುರೇಶ್. [ಅಂಧ ಅಭಿಮಾನಿ ಸೋನಿಯಾ ಗಾಂಧಿಗಾಗಿ ಏನು ಮಾಡಿದ ಗೊತ್ತಾ?]
ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾ ಗಾಂಧಿ ರವರಿಗೆ ಜೈಲು ಶಿಕ್ಷೆ ಆಗ್ಬಾರ್ದು ಎಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತ ಸುರೇಶ್, ತಮ್ಮ ಕೈ ಬೆರಳುಗಳನ್ನ ಕತ್ತರಿಸಿಕೊಂಡು ತಿಮ್ಮಪ್ಪನ ಹುಂಡಿಗೆ ಅರ್ಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಮಂಡ್ಯ ಮೂಲದ ಸುರೇಶ್ ರವರ ಈ ಅಭಿಮಾನದ ಪರಾಕಾಷ್ಟೆ ಬಗ್ಗೆ ತಿಳಿದ ಅಂಬರೀಶ್ ನಿನ್ನೆ ಸುರೇಶ್ ರವರನ್ನ ತಮ್ಮ ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ಕರೆಸಿಕೊಂಡರು.['ಮಂಡ್ಯದ ಗಂಡು' ಅಂಬರೀಶ್ ಮನೆಯಲ್ಲಿ ಬುದ್ಧಾವತಾರ]

ಸುರೇಶ್ ರವರ ಕೈಬೆರಳು ಕಟ್ ಆಗಿರುವುದನ್ನ ನೋಡಿ ದಿಗ್ಭ್ರಾಂತರಾದ ಅಂಬರೀಶ್ ಸುರೇಶ್ ರವರಿಗೆ ಬುದ್ಧಿ ಮಾತು ಹೇಳಿದರು. ಜೊತೆಗೆ ತಮ್ಮ 'ಅಂತ' ಸಿನಿಮಾದ ಅಂತರಂಗ ಬಿಚ್ಚಿಟ್ಟರು.
''ಅಂತ' ಸಿನಿಮಾದಲ್ಲಿ ಉಗುರು ಕೀಳಿಸಿಕೊಂಡಂತೆ ನಟಿಸುವುದೇ ಕಷ್ಟವಾಗಿತ್ತು. ಇನ್ನೂ ನೀನು ನಿಜವಾಗಿಯೂ ಕಟ್ ಮಾಡಿಕೊಂಡಿದ್ಯಲ್ಲಾ. ನಿನಗೆ ಏನು ಹೇಳೋದಪ್ಪಾ. ಇಂತಹ ಹಿಂಸಾತ್ಮಕ ಹರಕೆಗಳನ್ನ ದಯವಿಟ್ಟು ಹೊರಬೇಡಿ. ಅಭಿಮಾನ ತೋರಿಸುವ ಹಾಗಿದ್ರೆ ಸಮಾಜಮುಖಿ ಕೆಲಸ ಮಾಡಿ. ಈ ತರಹ ಹಿಂಸಾತ್ಮಕ ಮಾರ್ಗ ಬೇಡ'' ಅಂತ ಅಂಬರೀಶ್ ಮನವಿ ಮಾಡಿದರು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











