Exclusive: ರಘುರಾಮ್ ಕನಸಿಗೆ ಮರು ಜೀವ ನೀಡಿದ ರಾಧಿಕಾ
''ಒಂದು ಸಿನಿಮಾ ನಿಂತ ನೋವು ಆ ನಿರ್ದೇಶಕನಿಗೆ ಮಾತ್ರ ಗೊತ್ತು. ಈ ಸಿನಿಮಾ ನಿಂತು ಹೋಯ್ತು ಎನ್ನುವ ಕೊರಗು ನನಗೆ ಇತ್ತು. ಆದರೆ, ಕೊನೆಗೂ ಆ ಸಿನಿಮಾ ನನ್ನನ್ನು ಹುಡುಕಿಕೊಂಡು ಬಂದಿದೆ...'' ಹೀಗೆ ಹೇಳಿದ್ದು ನಿರ್ದೇಶಕ ರಘುರಾಮ್.
3 ವರ್ಷದ ಹಿಂದೆ 'ನಮಗಾಗಿ' ಸಿನಿಮಾವನ್ನು ರಘುರಾಮ್ ಶುರು ಮಾಡಿದ್ದರು. ಆದರೆ, ಆ ಸಿನಿಮಾ ಅರ್ಧದಲ್ಲಿಯೇ ನಿಂತು ಹೋಯ್ತು. ಅದೇನೇ ಇದ್ದರೂ ಈಗ ಆ ಸಿನಿಮಾ ಮತ್ತೆ ಶುರು ಆಗುತ್ತಿದೆ. ರಘುರಾಮ್ ಕನಸಿನ ಸಿನಿಮಾ ಕೊನೆಗೂ ನನಸಾಗುವ ಕ್ಷಣ ಬಂದಿದ್ದು, ಅವರು ತುಂಬ ಖುಷಿಯಲ್ಲಿ ಇದ್ದಾರೆ.
ಹೌದು, ರಾಧಿಕಾ ಕುಮಾರಸ್ವಾಮಿ ಹಾಗೂ ವಿಜಯ ರಾಘವೇಂದ್ರ ನಟನೆಯ 'ನಮಗಾಗಿ' ಸಿನಿಮಾ ಮತ್ತೆ ಟೇಕ್ ಆಫ್ ಆಗುತ್ತಿದೆ. ಈ ಸಿನಿಮಾದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ನಿರ್ದೇಶಕ ರಘುರಾಮ್ ಎಕ್ಸ್ ಕ್ಲ್ಯೂಸಿವ್ ಆಗಿ ಮಾತಾಡಿದ್ದಾರೆ. ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ರಘುರಾಮ್ ರನ್ನು ಸಂಪರ್ಕ ಮಾಡಿದ ರಾಧಿಕಾ ಸಹೋದರ
20 ದಿನಗಳ ಹಿಂದೆ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ವಿರಾಜ್ ನಿರ್ದೇಶಕ ರಘುರಾಮ್ ರನ್ನು ಸಂಪರ್ಕ ಮಾಡಿದ್ದಾರೆ. 'ನಮಗಾಗಿ' ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಸಿನಿಮಾವನ್ನು ಮತ್ತೆ ಶುರು ಮಾಡಬೇಕು ಎಂದು ಮಾತನಾಡಿದ್ದಾರೆ. ರಾಧಿಕಾ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

ಸಂಕ್ರಾಂತಿಗೆ ಹಳೆ ವಿಶ್ಯೂವಲ್ ನೋಡ್ತಾರೆ
'ನಮಗಾಗಿ' ಸಿನಿಮಾವನ್ನು ಮತ್ತೆ ಪ್ರಾರಂಭ ಮಾಡುವ ಬಗ್ಗೆ ರಘುರಾಮ್ ಮಾತನಾಡಿದ್ದು, ಅವರ ಮಾಹಿತಿ ಹಂಚಿಕೊಂಡಿದ್ದಾರೆ. ''ಈ ಸಿನಿಮಾದ 40 ರಿಂದ 45 ರಷ್ಟು ಚಿತ್ರೀಕರಣ ಆಗಿದ್ದು, ಅದರ ವಿಶ್ಯೂವಲ್ ಅನ್ನು ಸಂಕ್ರಾಂತಿ ಹಬ್ಬಕ್ಕೆ ರಾಧಿಕಾ ಹಾಗೂ ವಿಜಯ್ ರಾಘವೇಂದ್ರ ನೋಡುತ್ತಾರೆ. ಆ ನಂತರ ಚಿತ್ರದ ಮುಂದಿನ ತಯಾರಿಗಳು ಶುರು ಆಗಲಿದೆ.'' ಎಂದಿದ್ದಾರೆ.

ಸಿನಿಮಾ ನಿಲ್ಲೋಕ್ಕೆ ಕಾರಣ ಏನು?
''3 ವರ್ಷಗಳ ಹಿಂದೆ ನಾನು ಹಾಗೂ ಹರಿಕೃಷ್ಣ ಅವರು ಹೋಗಿ ಕಥೆ ಹೇಳಿದ್ದೆವು. ಆಗ ರಾಧಿಕಾ ಅವರೇ ನಿರ್ಮಾಣ ಮಾಡಬೇಕಿತ್ತು. ಆದರೆ, ಮೈಸೂರಿನ ಒಬ್ಬ ನಿರ್ಮಾಪಕರು ನನಗೆ ಸಿನಿಮಾ ಮಾಡಬೇಕು ಎಂದು ಹಣ ನೀಡಿದ್ದರು. ಹಾಗಾಗಿ ಕಥೆ ಅವರಿಗೆ ಮಾಡಲು ಪ್ಲಾನ್ ಆಯ್ತು. ಆದರೆ, ಆ ನಿರ್ಮಾಪಕರ ಹಣಕಾಸಿನ ತೊಂದರೆಯಿಂದ ಚಿತ್ರ ನಿಂತು ಹೋಯ್ತು. ಒಮ್ಮೆ ರಾಧಿಕಾ ಅವರು ಕೇಳಿದರೂ, ನಾನೇ ಚಿತ್ರ ಮುಗಿಸುವೆ ಎಂದು ಆ ನಿರ್ಮಾಪಕರು ಹೇಳಿದರು.'' ಎಂದು ಸಿನಿಮಾ ನಿಂತ ಕಾರಣವನ್ನು ರಘುರಾಮ್ ತಿಳಿಸಿದ್ದಾರೆ.

18ಕ್ಕೂ ಹೆಚ್ಚು ನಿರ್ಮಾಪಕರಿಗೆ ಕಥೆ ಹೇಳಿದೆ
''ನಾನು ಚಿತ್ರವನ್ನು ಮತ್ತೆ ಶುರು ಮಾಡಲು ಬಹಳ ಪಯತ್ರಪಟ್ಟಿದೆ. ಈ ಸಿನಿಮಾ ಅರ್ಧಕ್ಕೆ ನಿಂತ ಮೇಲೆ 18ಕ್ಕೂ ಹೆಚ್ಚು ನಿರ್ಮಾಪಕರಿಗೆ ಕಥೆ ಹೇಳಿದ್ದೇನೆ. ಎಲ್ಲರೂ ಕಥೆ ಚೆನ್ನಾಗಿದೆ ಎನ್ನುತ್ತಿದ್ದರು. ಆದರೆ, ಸಿನಿಮಾ ಮಾಡಲು ಯಾರೂ ಮುಂದೆ ಬರಲಿಲ್ಲ. ಆದರೆ, ಈಗ ನನಗೆ ತಿಳಿಯದ ಹಾಗೆ ಮತ್ತೆ ಆ ಸಿನಿಮಾ ನನ್ನನ್ನು ಹುಡುಕಿಕೊಂಡು ಬಂದಿದೆ. ನಾನು ಎಲ್ಲ ಸಿನಿಮಾಗಳನ್ನು ತುಂಬ ಪ್ರೀತಿಯಿಂದ ಮಾಡುತ್ತೇನೆ. ಆದರೆ, 'ನಮಗಾಗಿ' ಸಿನಿಮಾ ನನಗೆ ತುಂಬ ಹತ್ತಿರವಾಗಿದೆ. ನನ್ನ ಜೀವನದ ಕೆಲವು ಸಣ್ಣ ಪುಟ್ಟ ಘಟನೆಗಳು ಇಲ್ಲಿವೆ.'' ಎಂದರು ರಘುರಾಮ್

ವಿದೇಶದಲ್ಲಿ ಚಿತ್ರೀಕರಣ ನಡೆಯಬೇಕಿದೆ
ಕಥೆಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಮತ್ತೆ ಸಿನಿಮಾವನ್ನು ರಘುರಾಮ್ ಪ್ರಾರಂಭ ಮಾಡುತ್ತಿದ್ದಾರೆ. ರಾಧಿಕಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಹರಿಕೃಷ್ಣ ಸಂಗೀತ, ವಾಲಿ ಕ್ಯಾಮರಾ ವರ್ಕ್ ಇರಲಿದೆ. ಚಿಕ್ಕಣ್ಣ ಚಿತ್ರದಲ್ಲಿ ಇರುತ್ತಾರೆ. ಮತ್ತೊಂದು ಪಾತ್ರಕ್ಕೆ ಹೊಸ ಹೀರೋಯಿನ್ ಆಯ್ಕೆ ನಡೆಯುತ್ತಿದೆ. ಸೆಕೆಂಡ್ ಹಾಫ್ ಪೂರ್ತಿ ವಿದೇಶದಲ್ಲಿ ನಡೆಯಲಿದೆ. ಆ ಭಾಗದ ಚಿತ್ರೀಕರಣ ಆಗಬೇಕಿದೆ.


Click it and Unblock the Notifications











