ನಿರ್ದೇಶಕಿ ಸುಮನ್ ಕಿತ್ತೂರು ಸಹೋದರ ಬಂಧನ

ಕೆ.ಆರ್.ನಗರ ತಾಲ್ಲೂಕಿನ ಹೊಸೂರು ಗ್ರಾಮದ ಶಿವಣ್ಣ ಎಂಬುವವರ ಪುತ್ರಿ ಮಮತಾ (24) ಮೃತಪಟ್ಟವರಾಗಿದ್ದು, ಈಕೆಯನ್ನು ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ಚಂದ್ರು (ಸುಮನ್ ಕಿತ್ತೂರು ಅವರ ಸಹೋದರ) ಪ್ರೀತಿಸಿ ಮದುವೆಯಾಗಿದ್ದನು. ಈ ಮದುವೆಗೆ ಚಂದ್ರು ಮನೆಯವರು ಮೊದಲಿಗೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ. ಮಮತಾ ಮನೆಯವರೇ ಮುಂದೆ ನಿಂತು ಮೂರೂವರೆ ವರ್ಷದ ಹಿಂದೆ ಮದುವೆ ಮಾಡಿದ್ದರು.
ವಿವಾಹದ ಬಳಿಕ ಕೆಲವು ಸಮಯಗಳ ಕಾಲ ದಂಪತಿಗಳು ಅನ್ಯೋನ್ಯರಾಗಿದ್ದರಾದರೂ ಬಳಿಕ ಇವರ ನಡುವೆ ಭಿನ್ನಾಬಿಪ್ರಾಯ ಉಂಟಾಗಿತ್ತು. ಚಂದ್ರು ಮತ್ತು ಮನೆಯವರು ಮಮತಾಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿದ್ದರಾದರೂ ಚಂದ್ರು ಪತ್ನಿ ಮಮತಾಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದರು.
ಈ ಸಂಬಂಧ ಪ್ರಶ್ನಿಸಲು ಮಮತಾ ಕಿತ್ತೂರಿನಲ್ಲಿರುವ ತನ್ನ ಪತಿಯ ಚಂದ್ರುವಿನ ಅಂಗಡಿ ಸುಕಿ ಫ್ಯಾನ್ಸಿ ಸ್ಟೋರ್ಸ್ ಗೆ ತೆರಳಿದ್ದ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಪತಿ ಚಂದ್ರು ಪತ್ನಿಯ ಮೇಲೆ ಹಲ್ಲೆ ಮಾಡಿ ವಿಷಪ್ರಾಶನ ಮಾಡಿಸಿದ ಎನ್ನಲಾಗಿದೆ.
ತಕ್ಷಣವೇ ಅಸ್ವಸ್ಥಗೊಂಡಿದ್ದ ಆಕೆಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಹೊಸೂರು ಮತ್ತು ಕೆ.ಆರ್.ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದರು.
ಮಮತಾ ಸಾವಿಗೆ ಚಂದ್ರುನೇ ಕಾರಣ ಎಂದು ಆರೋಪಿಸಿರುವ ತಂದೆ ಶಿವಣ್ಣ ಬಲತ್ಕಾರವಾಗಿ ಮಗಳಿಗೆ ವಿಷ ಪ್ರಾಶನ ಮಾಡಿಸಿದ್ದಾರೆ. ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅಳಿಯ ಚಂದ್ರು ಹಾಗೂ ಇದಕ್ಕೆ ಸಹೋದರಿ ಚಿತ್ರ ನಿರ್ದೇಶಕಿ ಡಿ.ಸುಮನಾ ಕಿತ್ತೂರು, ತಾಯಿ ಹೊಂಬಮ್ಮ ಮತ್ತು ತಾಯಮ್ಮ ವಿರುದ್ಧ ಬೆಟ್ಟದಪುರ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪಿಎಸ್ಐ ಜೆ.ಜಿ.ಸತೀಶ್ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ಮಮತಾಳ ಶವವನ್ನು ಶುಕ್ರವಾರ ಹೊಸೂರು ಗ್ರಾಮದಲ್ಲಿರುವ ಪತಿ ಆರೋಪಿ ಚಂದ್ರುವಿನ ತಾಯಿಯ ಮನೆ ಎದುರು ಇಟ್ಟು ಪ್ರತಿಭಟಿಸಿದರು. ಆರೋಪಿಯನ್ನು ಇಲ್ಲಿಗೆ ಕರೆ ತರುವ ತನಕ ಶವವನ್ನು ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದು, ಮೃತಳ ಸಂಬಂಧಿಕರು ಮತ್ತು ಮಹಿಳಾ ಸಂಘಟನೆಗಳು ಪ್ರತಿಭಟಿಸಿದ ಘಟನೆಯೂ ನಡೆಯಿತು.


Click it and Unblock the Notifications











