85ರಲ್ಲೂ ಕುಗ್ಗದ ಭಗವಾನ್ ಅವರ ಉತ್ಸಾಹ: ಸಾಧನೆಗೆ ಸಿಕ್ಕಿಲ್ಲ ತಕ್ಕ ಗೌರವ
'ಸಂಧ್ಯಾರಾಗ' ಮೂಲಕ ನಿರ್ದೇಶಕರಾದ ದೊರೆ ಭಗವಾನ್ (ಎಸ್ ಕೆ ಭಗವಾನ್) ಕನ್ನಡ ಚಿತ್ರರಂಗದ ದಂತಕಥೆ. ಅಣ್ಣಾವ್ರ ಜೊತೆ ಹೆಚ್ಚು ಸಿನಿಮಾ ಮಾಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತೆ. ಬಾಂಡ್ ಶೈಲಿಯ ಸಿನಿಮಾ ಹಾಗೂ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ 'ರಾಜಕುಮಾರ'ನ್ನಾಗಿಸಿದ ನಿರ್ದೇಶಕ ದೊರೆ ಭಗವಾನ್.
ಜೇಡರಬಲೆ, ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್ಪಾಟ್ ನಲ್ಲಿ ಸಿಐಡಿ 999, ಆಪರೇಷನ್ ಡೈಮಂಡ್ ರಾಕೆಟ್, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ನಾನೊಬ್ಬ ಕಳ್ಳ, ವಸಂತ ಗೀತೆ, ಹೊಸಬೆಳಕು, ಜೀವನಚೈತ್ರ ಹೀಗೆ ಇವರು ನಿರ್ದೇಶನ ಸಿನಿಮಾಗಳೆಲ್ಲವೂ ಅಂದಿನ ಕಾಲದಲ್ಲಿ ಸೂಪರ್ ಹಿಟ್.
ಇಂತಹ ನಿರ್ದೇಶಕನ ಸಾಧನೆಗೆ ಸರಿಯಾದ ಗೌರವ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ. ವಯಸ್ಸು 85 ದಾಟಿದರೂ ತಮ್ಮ ಛಲ ಬಿಡದ ಭಗವಾನ್, 'ಆಡುವ ಗೊಂಬೆ' ಎಂಬ ಚಿತ್ರವನ್ನ ಮತ್ತೆ ಡೈರೆಕ್ಷನ್ ಮಾಡಿ, ಇಂದು ತೆರೆಗೆ ತಂದಿದ್ದಾರೆ. ಯಾವುದೇ ಪ್ರಚಾರವಿಲ್ಲದೇ, ಯಾರ ಬೆಂಬಲವಿಲ್ಲದೇ ಏಕಾಂಗಿಯಾಗಿ ಚಿತ್ರಮಂದಿರಕ್ಕೆ ತಂದಿರುವ ಭಗವಾನ್ ಧೈರ್ಯಕ್ಕೆ ಸಲಾಂ ಹೇಳಲೇಬೇಕು.

ದೊರೆ-ಭಗವಾನ್ ರವರು ತಮ್ಮ 85ನೇ ವಯಸ್ಸಿನಲ್ಲಿ (ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ) ನಿರ್ದೇಶನ ಮಾಡಿರುವ 50ನೇ ಚಿತ್ರ ಇದು. Violin ಹೇಮಂತ್ ಕುಮಾರ್ ಸಂಗೀತ ನೀಡಿರುವ 'ಆಡುವ ಗೊಂಬೆ' ಚಿತ್ರದಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ, ಸಂಚಾರಿ ವಿಜಯ್, ನವನಟಿಯರಾದ ರಿಷಿತಾ, ನಿರೋಷ ಮತ್ತು ದಿಶಾ ನಟಿಸಿದ್ದಾರೆ.
ದೊರೆ ಭಗವಾನ್ ಅವರ ಸಾಧನೆ, ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನ ಗೌರವಿಸುವ ದೃಷ್ಟಿಯಿಂದ ಗೌರವ ಡಾಕ್ಟರೇಟ್ ಆಗಲಿ ಪದ್ಮಭೂಷಣಕ್ಕೆ ಶಿಫಾರಸ್ಸು ಮಾಡಲು ಮತ್ತು ಅವರ ಯೊಗಕ್ಷೇಮ ವಿಚಾರಿಸುವವರು ಕಡಿಮೆ ಎಂದು ಅವರ ಆಪ್ತರು ಹೇಳಿಕೊಳ್ಳುತ್ತಾರೆ. 23 ವರ್ಷದ ಹಿಂದೆಯೆ ಚಲನಚಿತ್ರ ಮಂದಿ ಭಗವಾನ್ ಅವರನ್ನ ತುಳಿದರು ಹಾಗೂ ಅವರು ಬದುಕ್ಕಿದ್ದರೂ ಇಲ್ಲದಂತೆ ನಡೆಸಿಕೊಂಡವರೂ ಇದ್ದಾರೆ.

ಈ ವಯಸ್ಸಿನಲ್ಲೂ ಯಾರ ಸಹಾಯವಿಲ್ಲದೆ ಬೆಂಗಳೂರಿನ ಟ್ರಾಫಿಕ್ ನಲ್ಲೂ ಬಾಂಡ್ ಶೈಲಿಯಲ್ಲಿ ಒಬ್ಬರೆ ಕಾರ್ ಓಡಿಸುವ ಪರಿ ಈಗಿನ ಯುವಕರಿಗೆ ಮಾದರಿ. ಈಗಲೂ ಟ್ರಾಫಿಕ್ ರೂಲ್ಸ್ ಪಾಲಿಸುವ ರೀತಿ ಅಮೋಘ. ಇಂತಹ ನಿರ್ದೇಶಕರನ್ನ ಇಂದಿನ ಪ್ರತಿಭೆಗಳು ಮಾದರಿಯಾಗಿಸಿಕೊಳ್ಳಬೇಕಿದೆ.


Click it and Unblock the Notifications











