ವಾರ್ತಾ ಇಲಾಖೆಯಿಂದ ರಾಜ್ ಜನ್ಮ ದಿನಾಚರಣೆ
ಬೆಂಗಳೂರು, ಏಪ್ರಿಲ್ 23: ವರನಟ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಡಾ.ರಾಜ್ ಕುಮಾರ್ ಅವರ 86ನೇ ಹುಟ್ಟುಹಬ್ಬನ್ನು ಅದ್ದೂರಿಯಾಗಿ ಆಚರಿಸಲು ವಾರ್ತಾ ಇಲಾಖೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಏಪ್ರಿಲ್ 24 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ವಾರ್ತಾ ಇಲಾಖೆ ವಿಜೃಂಭಣೆಯಿಂದ ಆಚರಿಸಲಿದೆ ಎಂದು ರಾಜ್ಯ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ದಿನ ಸಂಜೆ 6-15 ಗಂಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರು ಈ ಸಮಾರಂಭವನ್ನು ಉದ್ಪಾಟಿಸಲಿದ್ದಾರೆ. ಹಿರಿಯ ಚಿತ್ರೋದ್ಯಮಿ ಪಾರ್ವತಮ್ಮ ರಾಜ್ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ಅಭಿನೇತ್ರಿ ಸಾಹುಕಾರ್ ಜಾನಕಿ, ಸಾರಿಗೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ. ಎನ್. ಶ್ರೀನಿವಾಸಚಾರಿ ಅವರು ಪಾಲ್ಗೊಳ್ಳಲಿದ್ದಾರೆ.
ಅಂದು ಸಂಜೆ 5.30 ಗಂಟೆಗೆ ಪ್ರಕಾಶ್ ಶೆಟ್ಟಿ ಮತ್ತು ತಂಡದವರಿಂದ ರಂಗ ಗೀತೆಗಳು, ಸಂಜೆ 6.00 ಗಂಟೆಗೆ ಡಾ ರಾಜ್ಕುಮಾರ್ ಅಭಿನಯಿಸಿದ ಜನಪ್ರಿಯ ಚಿತ್ರಗಳಿಂದ ಆಯ್ದ ಚಿತ್ರ ತುಣುಕು ಪ್ರದರ್ಶನ ಹಾಗೂ ಸಂಜೆ 7.00 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ವಾಣಿ ಹರಿಕೃಷ್ಣ ತಂಡದವರಿಂದ ಡಾ ರಾಜ್ ರಾಗಮಾಲಿಕಾ ಕಾರ್ಯಕ್ರಮವೂ ಸೇರಿದಂತೆ ಸಮಾರಂಭದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











