ರಾಜ್ ಸ್ಮಾರಕ ಕಾರ್ಯಕ್ರಮ ಎಲ್ಲೆಲ್ಲಿ? ಏನೇನು?
ನಟಸಾರ್ವಭೌಮ ಡಾ.ರಾಜ್ ಕುಮಾರ್ ಸ್ಮಾರಕ ಲೋಕಾರ್ಪಣೆಗೆ ಇನ್ನುಳಿದಿರೋದು ಕೆಲವೇ ಗಂಟೆಗಳು ಮಾತ್ರ. ಇದರ ಪ್ರಯುಕ್ತ ನಾಳೆ (ನವೆಂಬರ್ 29) ಅಕ್ಷರಶಃ ಕರುನಾಡ ಹಬ್ಬವನ್ನೇ ಆಚರಿಸೋಕೆ ರಾಜಣ್ಣನ ಅಭಿಮಾನಿಗಳು ಸರ್ವಸನ್ನದ್ಧರಾಗಿದ್ದಾರೆ.
ಕನ್ನಡ ಚಿತ್ರರಂಗ ಕೂಡ ಈ ಅದ್ಭುತ ಕ್ಷಣವನ್ನು ಸಂಭ್ರಮಿಸುವುದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಳೆ ಮುಂಜಾನೆ ಡಾ.ರಾಜ್ ಸ್ಮಾರಕ ಅನಾವರಣವಾಗಲಿದ್ದು, ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದೆ.
ಇದರ ಬಗ್ಗೆ ಇಂದು ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಯ್ತು. ರಾಘವೇಂದ್ರ ರಾಜ್ ಕುಮಾರ್, ಎಸ್.ನಾರಾಯಣ್, ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು, ಮನರಂಜನಾ ಕಾರ್ಯಕ್ರಮಗಳ ನೇತೃತ್ವ ವಹಿಸಿರುವ ಕಲಾಸಾಮ್ರಾಟ್ ಎಸ್.ನಾರಾಯಣ್, ಸಾ.ರಾ.ಗೋವಿಂದು ಸೇರಿದಂತೆ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ನಾಳಿನ ಕಾರ್ಯಕ್ರಮಗಳ ಪಟ್ಟಿಯನ್ನು ವಿವರಿಸಿದರು. [ರಾಜ್ ಸ್ಮಾರಕ: ರಜನಿ, ಚಿರು ಬರೋದು ಖಚಿತ]
ಕಾರ್ಯಕ್ರಮಗಳು ಎಲ್ಲೆಲ್ಲಿ? ಏನೇನು?
* ಬೆಳ್ಳಗ್ಗೆ 8.30 - ಗಾಜನೂರಿನಿಂದ ಹೊರಟಿದ್ದ ರಾಜರಥ ಕರ್ನಾಟಕದ ಮೂಲೆಮೂಲೆಯನ್ನು ಸುತ್ತಿ ನಾಳೆ ಬೆಳ್ಳಗ್ಗೆ 8.30ರ ಸುಮಾರಿಗೆ ಸದಾಶಿವನಗರದ ಡಾ.ರಾಜ್ ಕುಮಾರ್ ಮನೆ ತಲುಪಲಿದೆ.
* ಬೆಳ್ಳಗ್ಗೆ 9 - ಡಾ.ರಾಜ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ರವರಿಂದ ಜ್ಯೋತಿ ಬೆಳಗುವ ಕಾರ್ಯಕ್ರಮ.
* ಬೆಳ್ಳಗೆ 10 - ಡಾ.ರಾಜ್ ಕುಮಾರ್ ಸ್ಮಾರಕ ತಲುಪಲಿರುವ ರಾಜರಥ.
* ಬೆಳ್ಳಗೆ 10.30 - ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕದ ಲೋಕಾರ್ಪಣೆ ಸಮಾರಂಭ.
* ಬೆಳ್ಳಗೆ 10.30 - ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಜ್ಯೋತಿ ಬೆಳಗುವ ಕಾರ್ಯಕ್ರಮ.
* ಸಂಜೆ 6 - ಬೆಂಗಳೂರು ಅರಮನೆ ಮೈದಾನದಲ್ಲಿ ಮನರಂಜನಾ ಕಾರ್ಯಕ್ರಮ.
ಡಾ.ರಾಜ್ ಕುಮಾರ್ ಸ್ಮಾರಕದ ಲೋಕಾರ್ಪಣೆ ಸಮಾರಂಭದಲ್ಲಿ ಬೆಳಗುವ ಜ್ಯೋತಿ ನಾಳೆಯಿಂದ ಪ್ರತಿದಿನ 24 ಗಂಟೆಗಳ ಕಾಲ ಉರಿಯಲಿದೆ.

ವಿಶೇಷ ಆಹ್ವಾನಿತರು ಯಾರು?
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆ 6 ಗಂಟೆಗೆ ನಡೆಯುವ ಅದ್ದೂರಿ ಮನರಂಜನಾ ಸಮಾರಂಭಕ್ಕೆ ಹಿರಿಯ ನಟಿ ಸರೋಜಾ ದೇವಿ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟಿ ಭಾಗವಹಿಸಲಿದ್ದಾರೆ.

ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಬರ್ತಾರಾ?
ಕರ್ನಾಟಕ ಸರ್ಕಾರದ ವತಿಯಿಂದ ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಮೋಹನ್ ಲಾಲ್ ಗೆ ಡಾ.ರಾಜ್ ಸ್ಮಾರಕದ ಲೋಕಾರ್ಪಣೆ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದ್ರೆ, ಅಮಿತಾಬ್ ಬಚ್ಚನ್ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಜಿಯಿರುವ ಕಾರಣ, ನಾಳೆ ಅವರು ಗೈರು ಹಾಜರಾಗಲಿದ್ದಾರೆ. ಇನ್ನೂ ಕಮಲ್ ಹಾಸನ್ ಮತ್ತು ಮೋಹನ್ ಲಾಲ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಅರಮನೆ ಮೈದಾನದಲ್ಲಿ ಭದ್ರತೆ!
ಭಾರತೀಯ ಚಿತ್ರರಂಗದ ಗಣ್ಯಾತಿ ಗಣ್ಯರೇ ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅರಮನೆ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಿದೆ. 2 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದ್ದರೂ, 40 ಸಾವಿರ ಜನರಿಗೆ ಮಾತ್ರ ಕೂರುವ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಘಣ್ಣ ಹೇಳಿದ್ದೇನು?
ದೇಶದ ನಾನಾ ಭಾಗಗಳಿಂದ ಜನ ಬರ್ತಿದ್ದಾರೆ. ಅಪ್ಪಾಜಿ ನಿಧನರಾದಾಗ ಕೆಲ ಅಹಿತಕರ ಘಟನೆಗಳು ಸಂಭವಿಸಿದ್ದವು. ಈಗ ಆ ತರಹದ ಗಲಾಟೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಜನರಿಗೆ ತೊಂದರೆ ಆಗಬಾರದು. ಸರ್ಕಾರ, ವಾಣಿಜ್ಯ ಮಂಡಳಿ, ವಾರ್ತಾ ಇಲಾಖೆಯಿಂದ ಸಹಕಾರ ಸಿಕ್ತಿದೆ. ಶಾಂತಿಯುತವಾಗಿ ಕಾರ್ಯಕ್ರಮವನ್ನು ನಡೆಸಿಕೊಡಿ ಅಂತ ರಾಘಣ್ಣ ಮನವಿ ಮಾಡಿದ್ದಾರೆ.

ಸಾ.ರಾ.ಗೋವಿಂದು ಏನಂತಾರೆ?
ಬಹುದಿನಗಳ ಕನಸು ನನಸಾಗುತ್ತಿರುವ ಸಮಯ ಇದು. 8 ವರ್ಷಗಳಿಂದ ಶ್ರಮಪಟ್ಟು ಈ ಕಾರ್ಯಕ್ರಮ ಮಾಡ್ತಿದ್ದೀವಿ. ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯ್ಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಧನ್ಯವಾದಗಳು. ಇದು ಕನ್ನಡ ಚಿತ್ರರಂಗದ ಹಬ್ಬ. ಖುಷಿಯಿಂದ ಎಲ್ಲರು ಆಚರಿಸಬೇಕು ಅಂತ ಸಾ.ರಾ.ಗೋವಿಂದು ಹೇಳಿದರು.


Click it and Unblock the Notifications











