ಅಣ್ಣಾವ್ರಿಗೇ ಹೀಗಾದರೆ ನನ್ನಂಥವನ ಗತಿಯೇನು?

ಎಪ್ರಿಲ್ 12, 2006 ರಂದು ಡಾ. ರಾಜ್ ನಮ್ಮನ್ನು ಅಗಲಿದರು. ಅಂದರೆ ಅವರು ನಮ್ಮನ್ನು ಅಗಲಿ ನಾಲ್ಕು ವರ್ಷ ಮೇಲಾದರೂ ಅವರ ಪ್ರತಿಮೆ ಅನಾವರಣ ಕೆಲಸ ಪೂರ್ಣಗೊಳಿಸಲು ಸರಕಾರದ ಬಳಿ ಹಣವಿಲ್ಲ, ದಂ ಇಲ್ಲ. ಡಾ.ರಾಜ್ ಅವರ ಪ್ರತಿಮೆ ಬೆಂಗಳೂರು ಮಾಗಡಿ ರಸ್ತೆಯ ಒಂದು ಗ್ಯಾರೇಜ್ ನಲ್ಲಿ ಧೂಳು ಕುಡಿಯುತ್ತ ಕುಳಿತಿದೆ.
2007 ರಲ್ಲಿ ಬಿಬಿಎಂಪಿ ರಾಜ್ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲು ನಿರ್ಧರಿಸಿತು. ಶಿಲ್ಪಿ ಸಿ.ಜೆ.ನಾಗರಾಜ್ ಎನ್ನುವವರಿಗೆ ಟೆಂಡರ್ ಅಂತಿಮ ಗೊಳಿಸಿತು. 13 ಅಡಿ ಎತ್ತರದ ಪುತ್ಥಳಿ ನಿರ್ಮಿಸಿದ ಶಿಲ್ಪಿಗೆ ಬಿಬಿಎಂಪಿ ನಯಾಪೈಸಾ ನೀಡಲಿಲ್ಲ. ಶಿಲ್ಪಿ ನಾಗರಾಜ್ ಇದಕ್ಕೆ ಸಂಬಂಧಿಸಿ ಮಾಡಿದ ಬ್ಯಾಂಕ್ ಲೋನ್ ತೀರಿಸಲು ಆಗದೆ ಒದ್ದಾಡುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿರಲಿ. ಇದು ಬಿಬಿಎಂಪಿ ಟೆಂಡರ್ ವಿಚಾರ ಸಾರ್.
ಸರಕಾರ ಈ ಉದ್ದೇಶಕ್ಕೆ ಅನುದಾನ ನೀಡಬೇಕಾದರೂ ಇದು ಬಿಬಿಎಂಪಿ ಚೌಕಟ್ಟಿಗೆ ಬರುವ ಕೆಲಸ. ನಗರದ ಪೂಜ್ಯ ಮಹಾಪೌರರು ಅಣ್ಣಾವ್ರ ಅಭಿಮಾನಿ ತಾನೆಂದು ಬಹಳಷ್ಟು ಸಭೆ ಸಮಾರಂಭಗಳಲ್ಲಿ ಹೇಳಿ ಕೊಂಡಿದ್ದಾರೆ. ಅವರ ಅಭಿಮಾನಿಯಾಗಿ ಅವರಿಂದ ಈ ವಿಳಂಬ ನೀತಿಯನ್ನು ಕಲಾಭಿಮಾನಿಗಳು ನಿರೀಕ್ಷಿಸರಿರಲಿಲ್ಲ. ಕಡೇಪಕ್ಷ ಪ್ರತಿಮೆಯನ್ನು ಸುರಕ್ಷಿತ ಜಾಗದಲ್ಲಿಟ್ಟು ಕಲೆ ಮತ್ತು ಕಲಾವಿದನಿಗೆ ಗೌರವ ನೀಡಿ ಎನ್ನುವುದು ಅಭಿಮಾನಿಗಳ ಕೂಗು.
ಚಲನಚಿತ್ರ ಮಂಡಳಿಯ ಸದಸ್ಯರು ಸರಕಾರಕ್ಕೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳಬೇಕಿತ್ತು ಎನ್ನುವುದು ಒಂದು ವಾದವಾದರೆ, ಯಾರು ಯಾಕೆ ಒತ್ತಡ ಹೇರಬೇಕು? ಕಲಾವಿದರಿಗೆ ಕೊಡಬೇಕಾದ ಮರ್ಯಾದೆಯನ್ನು ಕೊಡಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಲ್ಲವೇ ಎನ್ನುವುದು ಇನ್ನೊಂದು ವಾದ.
ರಾಜಕುಮಾರ್ ಅವರಿಗೇ ಈ ಪರಿಸ್ಥಿತಿ ಆದರೆ, ಅಂತರ್ಜಾಲದಲ್ಲಿ ಕನ್ನಡ ಅಕ್ಷರ ಪೋಣಿಸುವ ನನ್ನಂಥ ರಾಜ್ ಭಕ್ತನ ಪ್ರತಿಮೆ ಆಗಿದ್ದಿದ್ದರೆ ಪರಿಸ್ಥಿತಿಯನ್ನು ನೀವು ಊಹಿಸಿಕೊಳ್ಳಿ.


Click it and Unblock the Notifications











