Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಕೊನೆಗೂ ಕೂಡಿ ಬಂತು ಕಾಲ
ಸಾಹಸ ಸಿಂಹನ ಅಸಂಖ್ಯಾತ ಅಭಿಮಾನಿಗಳ ಆಸೆ ಈಡೇರುವ ಸಮಯ ಹತ್ತಿರ ಬಂದಿದೆ. ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 29ರಂದು ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 11 ಕೋಟಿ ವೆಚ್ಚದಲ್ಲಿ ಸುಂದರವಾದ ಸ್ಮಾರಕ ನಿರ್ಮಾಣವಾಗಿದೆ.
ಸುಮಾರು ಎರಡು ಮುಕ್ಕಾಲು ಎಕರೆ ಜಾಗದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ತಲೆ ಎತ್ತಿದೆ. ದಾದಾಗೆ ಸಂಬಂಧಿಸಿದ ಫೋಟೊ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಹೀಗೆ ಹತ್ತು ಹಲವು ವಿಶೇಷಗಳನ್ನು ಈ ಸ್ಮಾರಕ ಒಳಗೊಂಡಿದೆ. ಈಗಾಗಲೇ ಸ್ಮಾರಕ ನಿರ್ಮಾಣದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ತಿಂಗಳೇ ಸ್ಮಾರಕ ಲೋಕಾರ್ಪಣೆ ಆಗಬೇಕಿತ್ತು. ವಿಷ್ಣು ಪುಣ್ಯಸ್ಮರಣೆ ದಿನ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಅಂತು ಇಂತೂ ಸರ್ಕಾರ ವಿಷ್ಣವರ್ಧನ್ ಸ್ಮಾರಕ ಉದ್ಘಾಟನೆಗೆ ಸಿದ್ಧತೆ ನಡೆಸಿದೆ.
ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆ ಆಗಿದೆ. ಆದರೆ ದಾದಾ ಕುಟುಂಬಸ್ಥರ ಆಸೆಯಂತೆ ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ಸ್ಮಾರಕ ರೂಪ ತಳೆದಿದೆ.
ದಾದಾ ಪಕ್ಕದಲ್ಲಿ ಇದ್ದಾಗಲೇ ಅಣ್ಣಾವ್ರ ಮೇಲೆ ಚಪ್ಪಲಿ ಬಿದ್ದಿತ್ತು.. ಮುಂದೇನಾಗಿತ್ತು?
ಸರ್ಕಾರದಿಂದ ಉದ್ಘಾಟನೆ ಕಾರ್ಯಕ್ರಮ
2009 ಡಿಸೆಂಬರ್ 30ರಂದು ಸಾಹಸ ಸಿಂಹ ವಿಷ್ಣುವರ್ಧನ್ ನಿಧನರಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೀಗ ಬರೋಬ್ಬರಿ 12 ವರ್ಷಗಳ ನಂತರ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಜನವರಿ 29ರಂದು ನಡೆಯುವ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಕೂಡ ಭಾಗಿ ಆಗಲಿದ್ದಾರೆ. ಈ ಬಗ್ಗೆ ಸಿಎಂ ಕಛೇರಿಯಿಂದ ಮಾಹಿತಿ ಸಿಕ್ಕಿದೆ. ವಿಷ್ಣು ಕುಟುಂಬ ಸದಸ್ಯರ ಜೊತೆಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಹಾಜರಾಗಲಿದ್ದಾರೆ.
ಸೆ.15, 2020ರಲ್ಲಿ ಭೂಮಿಪೂಜೆ
ಬೆಂಗಳೂರಿನ ಎಂ9 ಕಂಪೆನಿಯ ನಿಶ್ಚಲ್ ವಿಷ್ಣು ಸ್ಮಾರಕಕ್ಕೆ ರೂಪುರೇಷೆ ಸಿದ್ಧಪಡಿಸಿದ್ದರು. ಸೆಪ್ಟೆಂಬರ್ 15, 2020ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾರಣಾಂತರಗಳಿಂದ ಸ್ಮಾರಕ ನಿರ್ಮಾಣ ಕೆಲಸ ತಡವಾಗಿತ್ತು. ಕೊನೆಗೂ ವಿಷ್ಣು ಕುಟುಂಬಸ್ಥರ ಆಸೆಯಂತೆ ಸ್ಮಾರಕ ಎದ್ದು ನಿಂತಿದೆ. ಇದೀಗ ಸ್ಮಾರಕ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಸ್ಮಾರಕ ಉದ್ಘಾಟನೆ ವಿಚಾರ ಅಭಿಮಾನಿಗಳಿಗೆ ಸಂತಸ ತಂದಿದೆ.
ವಿಷ್ಣು ಸ್ಮಾರಕದ ವಿಶೇಷತೆಗಳು
ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ 6 ಅಡಿ ಎತ್ತರದ ವಿಷ್ಣು ಪುತ್ಥಳಿಯಲ್ಲಿ ಕೆತ್ತನೆ ಮಾಡಿದ್ದು, ಅದನ್ನು ಸ್ಮಾರಕದ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇನ್ನು ಅದರ ಸುತ್ತಲೂ ವೃತ್ತಾಕಾರದ ಫೋಟೊ ಗ್ಯಾಲರಿ ಇರಲಿದೆ. ಇಲ್ಲಿ ದಾದಾನ ಅಪರೂಪದ ಭಾವಚಿತ್ರಗಳನ್ನು ಹಾಕಲಾಗುತ್ತದೆ. ಇನ್ನು ನಾಟಕ, ಸಿನಿಮಾ ಪ್ರದರ್ಶನಕ್ಕೆ ಹವಾ ನಿಯಂತ್ರಿತ ಆಡಿಟೋರಿಯಂ, ಡೆಸ್ಸಿಂಗ್ ರೂಂಗಳು, ಸುಸಜ್ಜಿತ ಶೌಚಾಲಯ, ವಾಹಗಳ ಪಾರ್ಕಿಂಗ್, ಕ್ಲಾಸ್ ರೂಮ್ಗಳು, ಕ್ಯಾಂಟೀನ್, ಸುಂದರವಾದ ನೀರಿನ ಕಾರಂಜಿ, ಉದ್ಯಾನವನ ಎಲ್ಲವೂ ಸ್ಮಾರಕದಲ್ಲಿ ಇರಲಿದೆ.
ಅಭಿಮಾನಿಗಳಿಗೂ ಆಹ್ವಾನ
ದಶಕದ ಹೋರಾಟದ ಫಲವಾಗಿ ವಿಷ್ಣುವರ್ಧನ್ ಹುಟ್ಟೂರಿನಲ್ಲೇ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿತ್ತು. ಆದರೆ ಜಾಗದ ತಗಾದೆಯಿಂದ ಅದು ಸಾಧ್ಯವಾಗಲೇ ಇಲ್ಲ. ಕಾದು ಕಾದು ಸುಸ್ತಾಗಿ ವಿಷ್ಣು ಕುಟುಂಬಸ್ಥರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಒಟ್ನಲ್ಲಿ ಕೊನೆಗೂ ಸ್ಮಾರಕ ನಿರ್ಮಾಣವಾಗಿದ್ದು, ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸ್ವಾಗತಿಸಿದ್ದಾರೆ.