'ವಿಷ್ಣು ದಾದಾ'ನ 8ನೇ ಪುಣ್ಯ ಸ್ಮರಣೆ: ಅಭಿಮಾನಿಗಳ ಮನದಲ್ಲಿ 'ಯಜಮಾನ' ಚಿರಾಯು
Recommended Video

ಅದು ಡಿಸೆಂಬರ್ 30, 2009.. 'ಸಾಹಸ ಸಿಂಹ'ನ ಘರ್ಜನೆ ನಿಶ್ಯಬ್ಧ ಆದ ದಿನ. ಹೊಸ ವರ್ಷದ ಹೊಸ್ತಿಲಲ್ಲಿ ಇದ್ದ ಕರುನಾಡ ಮಹಾ ಜನತೆಗೆ ಬರ ಸಿಡಿಲು ಬಡಿದ ದಿನ. ಅಭಿಮಾನಿಗಳ ಪ್ರೀತಿಯ 'ಯಜಮಾನ' ಅಸ್ತಂಗತ ಆದ ದಿನ. ಇಡೀ ಚಂದನವನ ದುಃಖದ ಮಡುವಿನಲ್ಲಿ ಮುಳುಗಿದ ದಿನ. ಆ ಕಹಿ ದಿನ ಕಳೆದು ಇಂದಿಗೆ ಎಂಟು ವರ್ಷಗಳು ಸಂದಿವೆ.
ಹೌದು, ಡಾ.ವಿಷ್ಣುವರ್ಧನ್ ರವರು ನಮ್ಮನ್ನೆಲ್ಲ ಅಗಲಿ ಇಂದಿಗೆ 8 ವರ್ಷಗಳು ಉರುಳಿವೆ. 'ಹೃದಯವಂತ'ನ ಎಂಟನೇ ವರ್ಷದ ಪುಣ್ಯಸ್ಮರಣೆಯನ್ನ ಅಭಿಮಾನಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಮಾಡುತ್ತಿದ್ದಾರೆ.

ಡಾ.ವಿಷ್ಣುವರ್ಧನ್ ರವರ ಎಂಟನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳ ವತಿಯಿಂದ ಅನ್ನದಾನ ಹಾಗೂ ರಕ್ತದಾನ ನಡೆಯುತ್ತಿದೆ.
ಪುಣ್ಯಸ್ಮರಣೆ ನಿಮಿತ್ತ ಡಾ.ವಿಷ್ಣುವರ್ಧನ್ ರವರ ಸಮಾಧಿಯನ್ನ ವಿವಿಧ ಹೂವುಗಳಿಂದ ಅಲಂಕರಿಸಿ ಇಂದು ಬೆಳಗ್ಗೆ ಪೂಜೆ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳು ಇಂದು ಅಭಿಮಾನ್ ಸ್ಟುಡಿಯೋಗೆ ಆಗಮಿಸಿ, ಡಾ.ವಿಷ್ಣುವರ್ಧನ್ ಅವರಿಗೆ ನಮನ ಸಲ್ಲಿಸುತ್ತಿದ್ದಾರೆ.
ಸ್ಮಾರಕ ನಿರ್ಮಾಣ ವಿಷಯದಲ್ಲಿ ಬೇಸತ್ತ ಕಾರಣ ಭಾರತಿ ವಿಷ್ಣುವರ್ಧನ್ ಇಂದು ಅಭಿಮಾನ್ ಸ್ಟುಡಿಯೋಗೆ ಆಗಮಿಸಿಲ್ಲ. ಬದಲಾಗಿ ತಮ್ಮ ನಿವಾಸದಲ್ಲಿಯೇ ಪೂಜೆ ನೆರವೇರಿಸಿದ್ದಾರೆ.
ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿ ಎಂಟು ವರ್ಷಗಳು ಉರುಳಿದರೂ, ಇಂದಿಗೂ ಸ್ಮಾರಕ ನಿರ್ಮಾಣಕ್ಕೆ ಚಾಲನೆ ದೊರೆತಿಲ್ಲ. ಆದಷ್ಟು ಬೇಗ 'ಸಿರಿವಂತ'ನ ಸ್ಮಾರಕ ನಿರ್ಮಾಣ ಆದರೆ 'ಸಿಂಹಾದ್ರಿಯ ಸಿಂಹ'ನ ಕುಟುಂಬಕ್ಕೂ, ಅಭಿಮಾನಿಗಳಿಗೂ ಸಮಾಧಾನಕರವೇ.!


Click it and Unblock the Notifications











